ಭಟ್ಕಳ: ಎಸ್.ಎಸ್.ಎಲ್.ಸಿ ಪರೀಕ್ಷೆ; 30ವಿದ್ಯಾರ್ಥಿಗಳು ಗೈರು
• ಹಾಜರಾತಿ ಕೊರತೆಯಿಂದ 16 ವಿದ್ಯಾರ್ಥಿಗಳು ವಂಚಿತ
ಭಟ್ಕಳ: ಶುಕ್ರವಾರ ಆರಂಭಗೊಂಡ ಎಸ್.ಎಸ್.ಎಲ್.ಸಿ ಪ್ರಥಮಾ ಭಾಷೆ(ಕನ್ನಡ,ಉರ್ದು,ಇಂಗ್ಲಿಷ್) ಪರೀಕ್ಷೆಯಲ್ಲಿ ತಾಲೂಕಿನ 9 ಕೆಂದ್ರಗಳು ಸೇರಿಂದತೆ ಒಟ್ಟು 30 ವಿದ್ಯಾರ್ಥಿಗಳು ಗೈರುಹಾಜರಾಗಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯದ ವಿಷಯ ಸಂಯೋಜಕ ಸುಭ್ರಮಣ್ಯ ಭಟ್ ಮಾಹಿತಿ ನೀಡಿದ್ದಾರೆ.
ಯಾವುದೇ ತೊಂದರೆಗಳು ಬಾಧಿಸದೆ ವಿದ್ಯಾರ್ಥಿಗಳು ಸೂಸೂತ್ರವಾಗಿ ಪರೀಕ್ಷೆಗಳನ್ನು ಬರೆಯುವ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿರುವ ಹಿನ್ನೆಯಲ್ಲಿ ಇಂದು ನಡೆದ ಪ್ರಥಮ ಭಾಷೆ ಪರೀಕ್ಷೆಗಳು ಪೂರ್ಣಗೊಂಡಿದ್ದು 2048 ವಿದ್ಯಾರ್ಥಿಗಳಲ್ಲಿ 2018 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 30 ವಿದ್ಯಾರ್ಥಿಗಳು ಗೈರುಹಾಜರಾಗಿದ್ದಾರ.
ಭಟ್ಕಳದ ಇಸ್ಲಾಮಿಯಾ ಆಂಗ್ಲೋ ಉರ್ದು ಪ್ರೌಢಶಾಲೆಯ ಪರೀಕ್ಷಾ ಕೇಂದ್ರದಲ್ಲಿ 8ವಿದ್ಯಾರ್ಥಿಗಳು, ಅಂಜುಮನ್ ಬಾಲಕೀಯರ ಶಾಲೆಯಲ್ಲಿ 5 ವಿದ್ಯಾರ್ಥಿಗಳು, ನ್ಯೂ ಇಂಗ್ಲಿಷ್ ಶಾಲೆಯಲ್ಲಿ 2 ವಿದ್ಯಾರ್ಥಿಗಳು, ಮುರುಡೇಶ್ವರದ ಜನತಾ ವಿದ್ಯಾಲಯ ಶಾಲೆಯಲ್ಲಿ 1, ನ್ಯಾಶನಲ್ ಪ್ರೌಢಶಾಲೆಯಲ್ಲಿ 3, ಶಿರಾಲಿಯ ಜನತಾವಿದ್ಯಾಲಯದಲ್ಲಿ 9, ಸರ್ಕಾರಿ ಪ್ರೌಢಶಾಲೆ ಬೆಳಕೆ ಕೇಂದ್ರದಲ್ಲಿ 2 ವಿದ್ಯಾರ್ಥಿಗಳು ಗೈರುಹಾಜರಾಗಿರುತ್ತಾರೆ. ಬೀನಾ ವೈದ್ಯ ಹಾಗೂ ಸರ್ಕಾರಿ ಪ್ರೌಢಶಾಲೆ ಸೋನಾರಕೇರಿಯಲ್ಲಿ ಶೇ.100ಹಾಜರಾತಿ ಇದೆ.
ಹಾಜರಾತಿ ಕೊರತೆ 16 ವಿದ್ಯಾರ್ಥಿಗಳು ಪರೀಕ್ಷೆಯಿಂದ ವಂಚಿತ: ಎಸ್.ಎಸ್.ಎಲ್. ಸಿ ಪರೀಕ್ಷೆಗೆ ಹಾಜರಾಗಲು ಶೇ.75% ಹಾಜರಾತಿ ಕಡ್ಡಾಯ ಎಂಬ ಇಲಾಖೆ ನಿಯಮದಂತೆ ಶೇ.75ಕ್ಕಿಂತ ಕಡಿಮೆ ಹಾಜರಾತಿ ಹೊಂದಿದ ತಾಲೂಕಿನ 16 ವಿದ್ಯಾರ್ಥಿಗಳು ಈ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯುವುದರಿಂದ ವಂಚಿತರಾಗಿದ್ದಾರೆ. ಹೀಗೆ ಪರೀಕ್ಷೆಯಿಂದ ವಂಚಿತ ಮಖ್ಬೂಲ್ ಎಂಬ ವಿದ್ಯಾರ್ಥಿ ಹಾಗೂ ಆತನ ಪಾಲಕರು ಶಾಲೆಯ ಮುಖ್ಯಾಧ್ಯಾಪಕರೊಂದಿಗೆ ವಾಗ್ವಾದಕ್ಕಿಳಿದಿದ್ದು ಪರೀಕ್ಷೆಯಿಂದ ವಂಚಿತಗೊಳಿಸಿ ವಿದ್ಯಾರ್ಥಿಯ ಜೀವನ ಹಾಳು ಮಾಡಿದ್ದಾರೆ ಎಂದು ಆರೋಪಿಸಿದರು. ಇದಕ್ಕೆ ಉತ್ತರವಾಗಿ ಮುಖ್ಯಾಧ್ಯಾಪಕರು ಇಲಾಖ ನಿಯಮದಂತೆ ಕ್ರಮಕೈಗೊಂಡಿದ್ದೇವೆ. ವಿದ್ಯಾರ್ಥಿಯು ಶಾಲೆಗೆ ಬರದೆ ಇರುವುದರಿಂದ ಆತನಿಗೆ ಶಾಲೆಗೆ ತರಲು ಹಲವಾರು ಪ್ರಯತ್ನಸಿದರೂ ಪಾಲಕರು ಸಹರಿಸದೆ ಇರುವುದರಿಂದ ನಿಯಮದಂತೆ ಕ್ರಮಕೈಗೊಳ್ಳುವುದು ಅವಶ್ಯಕವಾಗಿರುವ ಹಿನ್ನೆಯಲ್ಲಿ ವಿದ್ಯಾರ್ಥಿಯ ಹಾಲ್ ಟಿಕೆಟ್ ನ್ನು ಎಸ್.ಎಸ್.ಎಲ್.ಸಿ ಪರೀಕ್ಷಾ ಮಂಡಳಿಗೆ ಮರಳಿಸಲಾಗಿದೆ ಎಂದು ಉತ್ತರಿಸಿದರು.
ಈ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್.ಮುಂಜಿ ಮಾತನಾಡಿದ್ದು, ತಾಲೂಕಿನ 16 ವಿದ್ಯಾರ್ಥಿಗಳ ಹಾಲ್ ಟಿಕೆಟ್ ನ್ನು ಎಸ್.ಎಸ್.ಎಲ್.ಸಿ ಪರೀಕ್ಷಾ ಮಂಡಳಿಗೆ ಮರಳಿಸಲಾಗಿದೆ. ಮಂಡಳಿಯ ಆದೇಶದಂತೆ ಕ್ರಮಕೈಗೊಂಡಿದ್ದೆ ಯಾವುದೇ ವಿದ್ಯಾರ್ಥಿಗಳಿಗೆ ತೊಂದರೆಯನ್ನುಂಟು ಮಾಡಲಿಕ್ಕಾಗಿ ಅಲ್ಲ. ಶಾಲೆಗೆ ಬಾರದೆ ಇರುವ ವಿದ್ಯಾರ್ಥಿಗಳನ್ನು ಆಯಾ ಶಾಲೆಯ ಮುಖ್ಯಾಧ್ಯಾಪಕರು ಹಾಗೂ ಶಿಕ್ಷರು ಪ್ರಯತ್ನವನ್ನೂ ಮಾಡಿದ್ದಾರೆ ಅದ್ಯಾಗ್ಯೂ ಪಾಲಕರು ತಮ್ಮ ಮಕ್ಕಳನ್ನು ಸರಿಯಾಗಿ ಶಾಲೆಗೆ ಕಳುಹಿಸದೆ ಹಾಜರಾತಿ ಕೊರತೆಯನ್ನುಂಟು ಮಾಡಿಕೊಂಡಿದ್ದಾರೆ. ಇದರಲ್ಲಿ ಶಾಲಾ ಮುಖ್ಯಾಧ್ಯಾಪಕರ ತಪ್ಪಿಲ್ಲ ಎಂದು ಹೇಳಿದರು.