ಶ್ರೀನಿವಾಸಪುರ: ಪೋಷಕರು ತಮ್ಮ ಮಕ್ಕಳಿಗೆ ಜಂತು ಹುಳು ನಿವಾರಣಾ ಮಾತ್ರೆ ಕೊಡುವ ಮೂಲಕ ಸಂಭವನೀಯ ಅನಾರೋಗ್ಯದಿಂದ ಪಾರುಮಾಡಬೇಕು ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಎಂ.ಸಿ.ವಿಜಯ ಹೇಳಿದರು.
ಪಟ್ಟಣದ ಚಿಂತಾಮಣಿ ಸರ್ಕಲ್ ಸಮೀಪದ ಮೊಹಲ್ಲಾ ಆಸ್ಪತ್ರೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ರಾಷ್ಟ್ರೀಯ ಜಂತು ಹುಳ ನಿರ್ಮೂಲನಾ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ಕುಟುಂಬದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮನೆಯಲ್ಲಿಯ ಶೌಚಾಲಯ ಬಳಸಬೇಕು ಎಂದು ಹೇಳಿದರು.
ಬಯಲು ಶೌಚ ಮಾಡುವುದರಿಂದ ಜಂತು ಹುಳು ದೇಹದಲ್ಲಿ ಪ್ರವೇಶ ಪಡೆಯುವ ಸಾಧ್ಯತೆ ಇರುತ್ತದೆ. ಅದು ಒಮ್ಮೆ ದೇಹ ಪ್ರವೇಶಿಸಿದ ಬಳಿಕ ತನ್ನ ಸಂತತಿಯನ್ನು ಹೆಚ್ಚಿಸಿಕೊಂಡು, ಅಸೌಖ್ಯ ಉಂಟುಮಾಡುತ್ತದೆ. ನಿರ್ಲಕ್ಷಿಸಿದರೆ ಜಂತು ಹುಳು ಮಾರಣಾಂತಿಕವಾಗುತ್ತದೆ ಎಂದು ಹೇಳಿದರು.
ಆರೋಗ್ಯವೇ ಭಾಗ್ಯ. ಸಾರ್ವಜನಿಕರು ಆರೋಗ್ಯ ರಕ್ಷಣೆಗೆ ಅಗತ್ಯವಾದ ಎಲ್ಲ ಮುಂಚಾಗ್ರತಾ ಕ್ರಮ ಅನುಸರಿಸಬೇಕು. ಸ್ವಚ್ಛತೆಗೆ ಮಹತ್ವ ನೀಡಬೇಕು. ಪರಿಸರ ಮಾಲೀನ್ಯ ಉಂಟಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಕ್ಕಳಿಗೆ ಜಂತು ಹುಳು ನಿವಾರಣಾ ಮಾತ್ರ ವಿತರಿಸಲಾಯಿತು. ವೈದ್ಯಾಧಿಕಾರಿ ಡಾ. ಸೈಯದ್ ಅಮೀರ್ ಫಾತಿಮಾ ಇದ್ದರು.