ಶ್ರೀನಿವಾಸಪುರ, - ಸೆ-18:ಎತ್ತಿನಹೊಳೆ ಹೊಳೆ ಯೋಜನೆ ಹಲವಾರು ಜಿಲ್ಲೆಗಳ ಜನರಿಗೆ ಕುಡಿಯುವ ನೀರು ನೀಡಲು ಯೋಜನೆ ರೂಪಿಸಿ ಇದಕ್ಕಾಗಿ ಮೀಸಲಿಟ್ಟ ಹಣವನ್ನು ಶ್ರೀನಿವಾಸಪುರ ತಾಲೂಕಿನ ಎಸ್ಸಿ/ಎಸ್ಟಿ ಜನಾಂಗದವರ ಅಭಿವೃದ್ಧಿಗಾಗಿ ಎಂದು ಹಲವಾರು ಕಾಮಗಾರಿಗಳಿಗೆ ಮಂಜೂರಾತಿಯನ್ನು ಪಡೆದುಕೊಂಡು ಅವರಿಗೆ ವಂಚನೆ ಮಾಡಲಾಗಿದೆ ಎಂದು ಕೋಲಾರಜಿಲ್ಲಾ ಜೆಡಿಎಸ್ ಅಧ್ಯಕ್ಷ ಹಾಗೂ ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಕೋಲಾರಜಿಲ್ಲಾ ಉಸ್ತುವಾರಿ ಮಂತ್ರಿ ಕೆ.ಆರ್.ರಮೇಶ್ಕುಮಾರ್ ವಿರುದ್ದ ಆರೋಪಮಾಡಿದರು.
ಸೋಮವಾರ ಬೆಳಿಗ್ಗೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಜಿ.ಕೆ.ವೆಂಕಟಶಿವಾರೆಡ್ಡಿ ತಾಲೂಕಿನ ಅಭಿವೃದ್ಧಿಗೆ ನನ್ನ ಸಂಪೂರ್ಣ ಸಹಮಿತವಿದ್ದು ಅದನ್ನು ನಾನು ಸ್ವಾಗತಿಸುತ್ತೇನೆ. ಸದನದಲ್ಲಿ, ಸಭೆ ಸಮಾರಂಭಗಳಲ್ಲಿ ಎಸ್ಸಿ/ಎಸ್ಟಿ ಜನರ ಬಗ್ಗೆ ಮಾತನಾಡುವಾಗ ಕಣ ್ಣೀರು ಹರಿಸುವ ಮಂತ್ರಿಗಳು ಅವರ ಅಭಿವೃದ್ಧಿಗಾಗಿ ಎತ್ತಿಹೊಳೆ ಯೋಜನೆಯ ಹಣವನ್ನು ಇತರೆ ಕಾಮಗಾರಿಗಳ ನೆಪದಲ್ಲಿ ಕೋಲಾರ ಜಿಲ್ಲೆಗೆ ಸುಮಾರು 15ಕೋಟಿ ರೂಗಳ ಅಂದಾಜು ಪಟ್ಟಿ ತಯಾರಿಸಿ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರಕ್ಕೆ 9.40ಕೋಟಿ ರೂಗಳನ್ನು ಯಾವುದೇ ಕಾಮಗಾರಿ ಎಸ್ಸಿ/ಎಸ್ಟಿ ಜನಾಂಗದವರ ಅಭಿವೃದ್ಧಿಗಾಗಿ ವಿನಯೋಗಿಸದೆ ವಂಚಿಸಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯ ಖರ್ಚು ವೆಚ್ಚಗಳಿಗಾಗಿ ಅವರ ಹಿಂಬಾಲಕರೇ ಈ ಎಲ್ಲಾ ಕಾಮಗಾರಿಗಳನ್ನು ನಡೆಸುತ್ತಿರುವುದು ಗಮನಕ್ಕೆ ಬಂದಿದೆ. ಯಾವುದೇ ಭಾಗದಲ್ಲಿ ಎಸ್ಸಿ/ಎಸ್ಟಿ ಜನರ ಅಭಿವೃದ್ಧಿಗೆ ಉಪಯೋಗಿಸಿರುವುದು ತೋರಿಸಿದರೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡುವುದಿಲ್ಲ ಎಂದು ಸವಾಲು ಮಾಡಿದರು.
ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 3ಕೋಟಿ ರೂಗಳ ಕಾಮಗಾರಿಗಳನ್ನು ಸರ್ಕಾರದಿಂದ ಅನುಮೋದನೆ ಪಡೆಯದೆಯೇ ನಡೆಸಿರುವುದು ಕಂಡುಬಂದಿದ್ದು ಎಂದು ತಿಳಿಸಿದ ಅವರು ಕಾಮಗಾರಿಗಳ ಫೋಟೋಗಳನ್ನು ಪ್ರದರ್ಶಿಸಿದರು. ಈಗಾಗಲೆ ಕಾಮಗಾರಿಗಳನ್ನು ನಡೆಸಿ ಹಣ ಪೊಡೆದ ಕಾಮಗಾರಿಗಳನ್ನೆ ಮತ್ತೊಮ್ಮೆ ಅನುಮೋದನೆಗೆ ಕಳುಹಿಸಿರುವುದು ಕಂಡು ಬಂದಿದೆ. ಇದು ಸಾರ್ವಜನಿಕರ ಹಣವನ್ನು ದುರುಪಯೋಗ ಪಡಿಸಿಕೊಳ್ಳಲು ನಡೆಸಿರುವ ಭಾರೀ ಶಡ್ಯಂತರವಾಗಿದೆ. ಕರ್ನಾಟಕ ರೂರಲ್ ಇನ್ಪ್ರಾಸ್ಟ್ರಕ್ಚರ್ ಡವ್ಲಪ್ಮೆಂಟ್ ಲಿಮಿಟೆಡ್ ರವರ ಹೆಸರಿಗೆ ಕಾಮಗಾರಿಗಳನ್ನು ನಡೆಸಲು ಅನುಮೋದನೆಗೆ ಕಳುಹಿಸಿ ಅವರ ಗಮನಕ್ಕೆ ಬಾರದಂತೆ ನಡೆಸುತ್ತಿರುವುದು ದೊಡ್ಡ ವಂಚನೆಯಾಗಿದೆ. ಚೆಕ್ಡ್ಯಾಂಗಳಾದ ಕಾಮಸನುದ್ರ-10ಲಕ್ಷ, ಮಣ ಘಟ್ಟ-40ಲಕ್ಷ, ಅಗ್ನಿಹಳ್ಳಿ ಮತ್ತು ಶಾನುಬೋಗನಹಳ್ಳಿ-50ಲಕ್ಷ, ಬೈಲಹಳ್ಳಿ-30ಲಕ್ಷ, ಗೂಳಿಗನಹಳ್ಳಿ-30ಲಕ್ಷ ಮತ್ತು ಶ್ಯಾನುಬೋಗನಹಳ್ಳಿ-20ಲಕ್ಷ ರೂಗಳ ವೆಚ್ಚದಲ್ಲಿ ಅನುಮೋದನೆಗೆ ಕಳುಹಿಸಿದ್ದಾರೆ ಎಂದು ಆ ಕಾಮಗಾರಿಗಳ ಫೋಟೋಗಳನ್ನು ಪ್ರದರ್ಶಿಸಿದರು.
ಕಾಲೇಜು ಸಂಕೀರ್ಣ ಅವೈಜ್ಞಾನಿಕ: ಶಾಲೆಯ ಮಕ್ಕಳಿಗೆ ಆಟದ ಮೈದಾನ ಇರಲೇ ಬೇಕೆನ್ನುವುದು ಸರ್ಕಾರದ ಕಟ್ಟಪ್ಪಣೆ ಆದರೆ ಪಟ್ಟಣದಲ್ಲಿ ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಮತ್ತು ಸರ್ಕಾರಿ ಪದವೀಪೂರ್ವ ಕಾಲೇಜುಗಳ ಸಂಕೀರ್ಣವನ್ನು ಮೈದಾನದ ಮಧ್ಯಭಾಗದಲ್ಲಿ ನಿರ್ಮಾಣ ಮಾಡುತ್ತಿರುವುದು ಅವೈಜ್ಞಾನಿಕವಾಗಿದೆ. ಪಟ್ಟಣದ ಹೃದಯ ಭಾಗದಲ್ಲಿರುವ ಈ ಮೈದಾನದಲ್ಲಿ ಈಗಾಗಲೇ ಶಿಥಿಲಗೊಂಡಿರುವ ಶಾಲೆಯ ಕೊಠಡಿಗಳನ್ನು ಕೆಡವಿ ಅಲ್ಲಿ ನಿರ್ಮಾಣ ಮಾಡುವ ಬದಲು ಮೈದಾನವಿಲ್ಲದಂತೆ ಮಧ್ಯೆ ಭಾಗದಲ್ಲಿ ನಿರ್ಮಿಸುತ್ತಿರುವುದು ಸರಿಯಾದ ಕ್ರಮವಲ್ಲ. ರಾಷ್ಟ್ರೀಯ ಹಬ್ಬಗಳು ಸೇರಿದಂತೆ ಸಾರ್ವಜನಿಕ ಸಭೆ ಸಮಾರಂಭಗಳಿಗೆ ಅತ್ಯಂಥ ಉಪಯುಕಲ್ತವಾದ ಈ ಮೈದಾನ ಮಕ್ಕಳಿಗೆ ಆಟವಾಡಲು ಜಾಗವಿಲ್ಲದಂತೆ ನಿರ್ಮಾಣಗೊಳ್ಳುತ್ತಿರುವುದು ವಿಪರ್ಯಾಸ ಎಂದು ದೂರಿದರು.
ವಸತಿ ಯೋಜನೆಗೂ ರಾಜಕೀಯ: ತಾಲೂಕಿನ ರಾಯಲ್ಪಾಡು ಹೋಬಳಿಯ ಕೊತ್ತಪಲ್ಲಿ ಗ್ರಾಮದಲ್ಲಿ ಸುಮಾರು 21ಕುಟುಂಬಗಳ ಬಡಜನರು ಜೆಡಿಎಸ್ ಪಕ್ಷದವರೆಂದು ಗುಡಿಸಲುಗಳಲ್ಲಿ ವಾಸಮಾಡುತ್ತಿದ್ದರೂ ಅವರಿಗೆ ವಸತಿ ಯೋಜನೆಯನ್ನು ನೀಡಿಲ್ಲ. ಅದರಲ್ಲಿ 9ಕುಟುಂಬಗಳು ಎಸ್ಸಿ/ಎಸ್ಟಿ ಜನಾಂಗದವರದ್ದಾಗಿದೆ. 16ಸಾವಿರ ಮನೆಗಳನ್ನು ಯಾವುದೇ ರಾಜಕೀಯವಿಲ್ಲದಂತೆ ನೀಡುತ್ತಿದ್ದೇನೆ ಎಂದು ಭಾಷಣ ಮಾಡುವ ಶಾಸಕರು ಈ ಗ್ರಾಮದ ಜನರು ಯಾವ ತಪ್ಪನ್ನು ಮಾಡಿದ್ದಾರೆ ಎಂದು ಪ್ರಶ್ನಿಸಿದರು.
ಸ್ತ್ರೀಶಕ್ತಿ ಸಂಘಗಳಿಗೆ ಸಾಲ ನೀಡುತ್ತಿರುವುದು ಕೇಂದ್ರ ಸರ್ಕಾರದ ನಬಾರ್ಡ್ನಿಂದ ಹೊರೆತು ಕೆ.ಆರ್.ರಮೇಶ್ಕುಮಾರ್À, ಜಿ.ಕೆ.ವೆಂಕಟಶಿವಾರೆಡ್ಡಿ ಅಥವಾ ಬ್ಯಾಲಹಳ್ಳಿ ಗೋವಿಂದಗೌಡರವರ ಮನೆ ಹಣವಲ್ಲ. ಸಾರ್ವಜನಿಕ ಹಣವಾಗಿರುವುದರಿಂದ ಅದು ಸದ್ಬಳಕೆಯಾಗಬೇಕು. ಮುಂದಿನ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆದರೆ ರೈತರ ಹಾಗೂ ಸ್ತ್ರೀಶಕ್ತಿ ಸಂಘಗಳ ಸಾಲವನ್ನು ಮನ್ನಾ ಮಾಡಲಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿ.ಪಂ.ಸದಸ್ಯರಾದ ತೂಪಲ್ಲಿ ಆರ್.ನಾರಾಯಣಸ್ವಾಮಿ, ಎಂ.ವಿ.ಶ್ರೀನಿವಾಸ್, ತಾ.ಪಂ.ಸದಸ್ಯರಾದ ಪಾತಪೇಟೆ ಮಂಜುನಾಥರೆಡ್ಡಿ, ಪುರಸಭೆ ಸದಸ್ಯರಾದ ಏಜಾಜ್, ಶ್ರೀನಿವಾಸಪ್ಪ, ಷಬ್ಬೀರ್, ಜೆಡಿಎಸ್ ಮುಖಂಡರಾದ ಪೂಲು ಶಿವಾರೆಡ್ಡಿ, ಕಾರ್ಬಾಬು, ಗಣೇಶ್, ರಾಮಚಂದ್ರಗೌಡ, ಲಕ್ಷ್ಮಣರೆಡ್ಡಿ, ಸಂತೋಷ್, ಪಟೇಲ್ನಾರಾಯಣಸ್ವಾಮಿ ಇತರರು ಹಾಜರಿದ್ದರು.
ವಿವಿಧ ಕಾಮಗಾರಿಗಳು ಅನುಮೋದನೆ ಪಡೆಯದೆಯೇ ನಡೆಸಲಾಗಿದೆ ಎಂದು ಫೋಟೋಗಳನ್ನು ಪ್ರದರ್ಶಿಸುತ್ತಿರುವುದು.
ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ