ಶ್ರೀನಿವಾಸಪುರ: ಗ್ರಾಮದ ಅಕ್ರಮ ಚಟುವಟಿಕೆ ಹಾಗೂ ಅಹಿತಕರ ಘಟನೆ ನಡೆಯದಿರಲು ಪೋಲಿಸರೊಂದಿಗೆ ಸಹಕರಿಸಲು ರೋಹಿಣಿ ಕಟೋಛ್ ಕರೆ
ಶ್ರೀನಿವಾಸಪುರ, - ಜುಲೈ 12: ಗ್ರಾಮಗಳಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳಿಗೆ ಹಾಗೂ ನಡೆಯಬಹುದಾದ ಅಹಿತಕರ ಘಟನೆಗಳಿಗೆ ಕಡಿವಾಣ ಹಾಕಲು ಪೊಲೀಸರೊಂದಿಗೆ ಸಾರ್ವಜನಿಕರು ಸಹಕರಿಸಿದರೆ ಕಾನೂನು ಸುವ್ಯವಸ್ಥೆಯನ್ನು ಸುಧಾರಿಸಬಹುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ|| ರೋಹಿಣಿ ಕಟೋಚ್ ಸಪೆಟ್ ತಿಳಿಸಿದರು.
ಪಟ್ಟಣದ ವಾಸವಿ ಕಲ್ಯಾಣ ಮಂದಿರದಲ್ಲಿ ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ನೇಮಕಗೊಂಡಿರುವ ಗಸ್ತು ಸದಸ್ಯರ ಸಭೆಯನ್ನು ಉಧ್ಘಾಟಿಸಿ ಮಾತನಾಡಿದ ಅವರು ಗಸ್ತು ವ್ಯವಸ್ಥೆ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಯಾಗುವುದಕ್ಕಿಂತ ಮೊದಲಿನಿಂದಲೂ ಇದೆ. ಕಾಲ ಕ್ರಮೇಣ ಪೊಲೀಸ್ ಠಾಣೆಗಳ ಬಗ್ಗೆ ಸಾರ್ವಜನಿಕರಿಗೆ ಕೆಟ್ಟ ಅಭಿಪ್ರಾಯ ಬರಲಾರಂಭಿಸಿತು ಇದನ್ನು ಹೋಗಲಾಡಿಸಲು ಸಾರ್ವಜನಿಕರನ್ನೆ ಗಸ್ತು ಸದಸ್ಯರನ್ನಾಗಿ ನೇಮಕ ಮಾಡಿ ಜನಸ್ನೇಹಿ ಪೊಲೀಸ್ ಇಲಾಖೆಯಾಗಬೇಕೆಂಬ ಉದ್ದೇಶದಿಂದ ಇಂತಹ ಕಾರ್ಯಕ್ರಮ ರಾಜ್ಯ ಪೊಲೀಸ್ ಅಧಿಕಾರಿಗಳು ಜಾರಿಗೆ ತಂದಿರುವುದರಿಂದ, ಪ್ರತಿ ಹಳ್ಳಿಯಲ್ಲೂ ಒಂದಲ್ಲ ಒಂದು ರೀತಿಯ ಸಮಸ್ಯೆಗಳು ಇರುತ್ತವೆ ಅವುಗಳನ್ನು ಗ್ರಾಮ ಮಟ್ಟದಲ್ಲಿಯೇ ಜಾತಿ, ಧರ್ಮ, ಪಕ್ಷ ಗಣನೆಗೆ ತೆಗೆದುಕೊಳ್ಳದೆ ನಿಸ್ಪಕ್ಷಪಾತವಾಗಿ ಇತ್ಯರ್ಥ ಪಡಿಸಿಕೊಳ್ಳಲು ಸಾರ್ವಜನಿಕರೆ ಸಹಕಾರ ನೀಡಬೇಕು, ಸಾರ್ವಜನಿಕರೆ ಪೊಲೀಸರ ಕಣ್ಣು, ಕಿವಿಯಾಗಿ ಕೆಲಸ ಮಾಡಬೇಕು ಮಹಿಳೆಯರು ಸಹ ಯಾವುದೇ ಸಂಕೋಚವಿಲ್ಲದೆ ಗಸ್ತು ಸದಸ್ಯರಾಗಬೇಕು, ಹಳ್ಳಿಗಳಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ನೇರವಾಗಿ ಪೊಲೀಸ್ ಇಲಾಖೆಗೆ ಗಸ್ತು ಸದಸ್ಯರು ದೂರು ನೀಡಿದರೆ ಅವರ ಹೆಸರನ್ನು ಗೌಪ್ಯವಾಗಿಟ್ಟು ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲಾಗುತ್ತದೆ ಎಂದರು.
ಸಭೆಯಲ್ಲಿ ಭಾಗವಹಿಸಿದ್ದ ಮಹಿಳೆಯರು.
ಪೊಲೀಸ್ ಇಲಾಖೆಯಲ್ಲಿ ಶೇ.100ರಷ್ಟು ಒಳ್ಳೆಯವರಿದ್ದಾರೆ ಎನ್ನುವುದು ಸುಳ್ಳು ಅಂತಹವರನ್ನು ಸುಧಾರಿಸಲು ಪ್ರಯತ್ನ ಮಾಡಿ ಪೊಲೀಸರ ಬಗ್ಗೆ ನಂಬಿಕೆ ಉಳಿಸುವಂತಹ ಕಾರ್ಯಕ್ರಮಗಳನ್ನು ಮಾಡಲು ಪ್ರತಿ ಪೇದೆಗೂ ಗಸ್ತಿನ ಜವಬ್ದಾರಿ ನೀಡಿ ಅವರ ವ್ಯಾಪ್ತಿಗೆ ಬರುವ ಹಳ್ಳಿಗಳಲ್ಲಿ ಸಮಸ್ಯೆಗಳನ್ನು ಬಗೆಹರಿಸಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಕರ್ತವ್ಯನಿರತರಾಗಿ ಕೆಲಸ ಮಾಡಿ ಎಲ್ಲರಿಗೂ ಕಾನೂನು ರಕ್ಷಣೆ ನೀಡಲಾಗುವುದು. ಇದಕ್ಕೆಲ್ಲಾ ಸಾರ್ವಜನಿಕರ ಬೆಂಬಲ ನೀಡಬೇಕೆಂದರು.
ವೃತ್ತ ನಿರೀಕ್ಷಕ ವೆಂಕಟರವಣಪ್ಪ ಮಾತನಾಡಿ 15 ಹಳ್ಳಿಗಳಿಗೆ ಒಬ್ಬರಂತೆ ಗಸ್ತು ಪೇದೆಯನ್ನು ಈ ಹಿಂದೆ ನೇಮಿಸಲಾಗಿತ್ತು. ಇತ್ತೀಚಿಗೆ ಜನಸಂಖ್ಯೆ ಮತ್ತು ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ ಮಾಹಿತಿ ಸಂಗ್ರಹಿಸಲು ಕಷ್ಟವಾದ ಪರಿಣಾಮ 3-4 ಗ್ರಾಮಗಳಿಗೆ ಒಬ್ಬರಂತೆ ಗಸ್ತು ಪೇದೆಯನ್ನು ನೇಮಿಸಲಾಗಿದೆ. ಅದೇ ರೀತಿ ಪ್ರತಿ ಗ್ರಾಮದಿಂದಲೂ ಜಾತಿವಾರು ಎಲ್ಲಾ ವರ್ಗದವರನ್ನು ಗಸ್ತು ಸದಸ್ಯರನ್ನಾಗಿ ನೇಮಿಸಲಾಗಿದೆ ಆದ್ದರಿಂದ ಹಳ್ಳಿಗಳಲ್ಲಿ ನಡೆಯುತ್ತಿರುವ ಕೋಳಿಪಂದ್ಯ, ಜೂಜಾಟ, ಅಕ್ರಮ ಮಧ್ಯಮಾರಾಟಕ್ಕೆ ಕಡಿವಾಣ ಹಾಕಲು ಗಸ್ತು ಸದಸ್ಯರು ಸಹಕರಿಸಬೇಕು. ಯಾವುದೇ ಕಾರಣಕ್ಕೂ ಪ್ರಕರಣಗಳಲ್ಲಿ ಗಸ್ತು ಸದಸ್ಯರನ್ನು ಸಾಕ್ಷಿದಾರರನ್ನಾಗಿ ಮಾಡುವುದಿಲ್ಲ. ನಮ್ಮ ಗ್ರಾಮಗಳನ್ನು ನಾವೇ ಸರಿಪಡಿಸಿಕೊಳ್ಳಬೇಕೆಂಬ ಉದ್ದೇಶದಿಂದ ಗಸ್ತು ಸಮಿತಿಗಳನ್ನು ರಚಿಸಲಾಗಿದೆ. ಪೊಲೀಸ್ ಇಲಾಖೆಯು ಸಾರ್ವಜನಿಕರ ಕಲ್ಯಾಣಕ್ಕಾಗಿ, ಉತ್ತಮ ಸಮಾಜ ನಿರ್ಮಾಣಕ್ಕಾಗಿ ಹಗಳಿರುಳು ದುಡಿಯುತ್ತಿದೆ ಇದಕ್ಕೆ ಸಾರ್ವಜನಿಕರು ಹತ್ತಿರವಾಗಿ ಸಹಕಾರ ನೀಡಿ ಎಂದರು. ಅಂಗನವಾಡಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಜಿ. ಈಶ್ವರಮ್ಮ, ಶಿವರಾಮಶರ್ಮ, ನಾಗರತ್ನಮ್ಮ, ಬುಜ್ಜಿ ಮಾತನಾಡಿದರು. ಶ್ರೀ ಶಾರದಾಂಬ ಕಲಾ ಸಂಘದಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಪಿ.ಎಸ್.ಐ ಪ್ರದೀಪ್ಸಿಂಗ್ ಇದ್ದರು.
ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ