ಶಿರಸಿ: ವಿಕಲಚೇತರಿಗಾಗಿ ಪ್ರತ್ಯೇಕವಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ನೂತನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸಲಾಗುವುದು ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ರಾಜ್ಯ ಸಚಿವ ಅನಂತಕುಮಾರ್ ಹೆಗಡೆ ಹೇಳಿದ್ದಾರೆ.
ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯ್ತಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮತ್ತು ಕೇಂದ್ರ ಸರ್ಕಾರ ಪುರಸ್ಕøತ ಕೃತಕ ಕೀಲು ಮೂಳೆ ಜೋಡಣೆ ಉಪಕರಣಗಳ ನಿರ್ಮಾಣ ಸಂಸ್ಥೆ (ಅಲಿಮ್ಕೊ) ಸಂಯುಕ್ತಾಶ್ರಯದಲ್ಲಿ ಶಿರಸಿಯಲ್ಲಿ ಸೋಮವಾರ ಹಮ್ಮಿಕೊಳ್ಳಲಾದ ವಿಕಲಚೇತನರಿಗೆ ಸಾಧನ ಸಲಕರಣೆಗಳ ವಿತರಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ದಿವ್ಯಾಂಗರಿಗೆ ಶಾಶ್ವತ ಪರಿಹಾರ ರೂಪಿಸುವುದು ನಮ್ಮ ಸರ್ಕಾರದ ಉದ್ದೇಶ ಈ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆ ವಿಕಲಚೇತನರಿಗಾಗಿಯೇ ವಿಶೇಷವಾಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸಲಾಗುವುದು ಎಂದು ಹೇಳಿದರು.
ಈ ಹಿಂದೆ ಕುಮಟಾ ರೈಲುನಿಲ್ದಾಣದಲ್ಲಿ ಲೈಫ್ಲೈನ್ ಎಕ್ಸ್ಪ್ರೆಸ್ ಮೂಲಕ ಸುಮಾರು 3,500 ರೋಗಿಗಳಿಗೆ ಉಚಿತ ಶಸ್ತ್ರಚಿಕಿತ್ಸೆ, ತಪಾಸಣೆ, ಔಷಧಗಳ ವಿತರಣೆ, ಸಲಕರಣೆಗಳ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಪ್ರಸ್ತುತ ಇಡೀ ಜಿಲ್ಲೆಯಾದ್ಯಂತ ವಿಕಲಾಂಗರ ಸರ್ವೆ ನಂತರ ಅವರಿಗೆ ಸಾಧನ ಸಲಕರಣೆಗಳನ್ನು ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಮುಂದಿನಗಳಲ್ಲಿ ಅ.31ರಂದು ಕಿತ್ತೂರಿನಲ್ಲಿ, ನ.16ರಂದು ಕಾರವಾರದಲ್ಲಿ ನೋಂದಾಯಿತ ವಿಕಲಚೇತನರಿಗೆ ಸಾಧನಾ ಸಲಕರಣೆಗಳ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಅಲ್ಲದೆ, ಶೇ.80ಕ್ಕಿಂತ ಹೆಚ್ಚಿನ ವಿಕಲಾಂಗರಿಗೆ ತ್ರಿಚಕ್ರದ ಮೋಟಾರ್ ವಾಹನ ನೀಡುವ ಕಾರ್ಯಕ್ರಮವಿದ್ದು ಅವರು ಸೂಕ್ತ ದಾಖಲೆಯೊಂದಿಗೆ ನೋಂದಾಯಿಸಬೇಕು. ಕೇವಲ ದಿವ್ಯಾಂಗರಿಗೆ ಸಲಕರಣೆಗಳ ವಿತರಣೆಯಷ್ಟೆ ಅಲ್ಲದೆ ಅವರು ಎಲ್ಲರಂತೆ ದುಡಿಯುವಂತಾಗಬೇಕು ಎಂಬ ಉದ್ದೇಶದಿಂದ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಉದ್ದೇಶವಿದೆ ಎಂದು ಅವರು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸ್ಥಳೀಯ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ವಿಕಲಾಂಗರಿಗೆ ಅಂಗವೈಕಲ್ಯ ದೃಢೀಕರಣ ಮಾಡುವ ಮಾನದಂಡ ನಿಯಮಾವಳಿ ಪರಿಷ್ಕರಣೆಯಾಗಬೇಕು. ರಾಜ್ಯ ಸರ್ಕಾರ ಪರಿಷ್ಕøತ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಬೇಕು ಎಂದರು.
ಅಲಿಮ್ಕೊ ವ್ಯವಸ್ಥಾಪಕ ನಿವೃತ್ತ ಕರ್ನಲ್ ದುಬೆ ಮಾತನಾಡಿ, ವಿಕಲಾಂಗರಿಗೆ ಸ್ವ ಉದ್ಯೋಗ ಸಲುವಾಗಿ ತರಬೇತಿ ಹಾಗೂ ರಾಷ್ಟ್ರೀಯ ವಿಕಲಚೇತರ ಹಣಕಾಸು ಸಂಸ್ಥೆ ಮೂಲಕ ಮೂರು ಲಕ್ಷ ರೂ.ವರೆಗೆ ಸಾಲ ಸೌಲಭ್ಯ ಒದಗಿಸುವ ಯೋಜನೆಯನ್ನು ರೂಪಿಸಲಾಗುತ್ತಿದೆ. ಅಲ್ಲದೆ, ವಿದ್ಯಾಭ್ಯಾಸ ಹಾಗೂ ವಿದೇಶದಲ್ಲಿ ವ್ಯಾಸಂಗ ಮಾಡುವ ವಿಕಲಚೇತರಿಗಾಗಿ ಶಿಷ್ಯವೇತನವನ್ನು ಕಲ್ಪಿಸುವ ಯೋಜನೆಯನ್ನು ರೂಪಿಸಲಾಗುತ್ತಿದೆ. ಈ ಮೂಲಕ ಮಾನವ ಜೀವನ ಪುನರ್ ಪ್ರತಿಷ್ಠಾಪಿಸುವ ನಮ್ಮ ಸಂಸ್ಥೆಯ ಧ್ಯೇಯವನ್ನು ಸಾಕಾರಗೊಳಿಸಲಾಗುತ್ತಿದೆ ಎಂದು ಹೇಳಿದರು.
ಶಾಸಕ ಶಿವರಾಮ ಹೆಬ್ಬಾರ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಜಯಶ್ರೀ ಮೊಗೇರ, ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಸಹಾಯಕ ಕಮಿಷನರ್ ರಾಜು ಮೊಗವೀರ್, ತಾಲೂಕು ಪಂಚಾಯ್ತಿ ಅಧ್ಯಕ್ಷೆ ರ್ಶರೀಲತಾ ಕಾಳೇರಮನೇರ, ಉಪಾಧ್ಯಕ್ಷ ಚಂದ್ರ ದೇವಾಡಿಗ, ಜಿಲ್ಲಾ ಪಂಚಾಯ್ತಿ ಸದಸ್ಯೆ ಉಷಾ ಹೆಗಡೆ ಉಪಸ್ಥಿತರಿದ್ದರು.