ಶ್ರೀನಿವಾಸಪುರ: ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಅವರಿಗಿದ್ದ ಬಡವರ ಕಾಳಜಿ, ಇಂದಿರಾ ಕ್ಯಾಂಟೀನ್ ಸ್ಥಾನೆಗೆ ಪ್ರೇರಣೆ ನೀಡಿತು ಎಂದು ವಿಧಾನ ಸಭಾಧ್ಯಕ್ಷ ಕೆ.ಆರ್.ರಮೇಶ್ ಕುಮಾರ್ ಹೇಳಿದರು.
ಪಟ್ಟಣದಲ್ಲಿ ಆಡಳಿತ ಮತ್ತು ನಗರಾಭಿವೃದ್ಧಿ ಇಲಾಖೆ ಹಾಗೂ ಪುರಸಭೆ ವತಿಯಿಂದ ಗುರುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಲೋಕೋಪಯೋಗಿ ಇಲಾಖೆ ಕಚೇರಿ ಆವರಣದಲ್ಲಿ ನಿರ್ಮಿಸಲಾಗಿರುವ ಇಂದಿರಾ ಕ್ಯಾಂಟಿನ್ ಉದ್ಘಾಟಿಸಿ ಮಾತನಾಡಿ, ‘ಸಿದ್ಧರಾಮಯ್ಯ ಅವರಂಥ ಇನ್ನೊಬ್ಬ ನಾಯಕ ಸಿಗುವುದಿಲ್ಲ. ನನ್ನ ಮಾತಿಗೆ ಮನ್ನಣೆ ನೀಡಿ ಹಸಿವು ಮುಕ್ತ ಕರ್ನಾಟಕ ಯೋಜನೆ ಜಾರಿಗೆ ತಂದರು. ಮುಖ್ಯ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಕೆಲವೇ ನಿಮಿಷಗಳಲ್ಲಿ ಅರ್ಹ ಫಲಾನುಭವಿಗಳಿಗೆ ಉಚಿತ ಅಕ್ಕಿ ವಿತರಿಸುವ ಘೋಷಣೆ ಮಾಡಿದರು’ ಎಂದು ಹೇಳಿದರು.
ಕ್ಷೇತ್ರದ ಜನರು ನೀಡಿದ ಶಕ್ತಿಯಿಂದಾಗಿ ಕ್ಷೇತ್ರಕ್ಕೆ 20 ಸಾವಿರ ಮನೆಗಳು ತರಲು ಸಾಧ್ಯವಾಯಿತು. ಬಡವರಿಗೆ ಹಲವಾರು ಅಡ್ಡಿ ಆತಂಕಗಳ ನಡುವೆ ಬಡ್ಡಿ ರಹಿತ ಸಾಲ ನೀಡಲು ಸಾಧ್ಯವಾಯಿತು. ಯಾರು ಅಡ್ಡಗಾಲು ಹಾಕಿದರೂ, ಬಡವರ ಪರವಾದ ಯೋಜನೆಗಳನ್ನು ನಿಲ್ಲಿಸುವುದಿಲ್ಲ. ಸಧ್ಯದಲ್ಲಿ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರಿಗೆ ತಲಾ ರೂ.1 ಲಕ್ಷ ಬಡ್ಡಿ ರಹಿತ ಸಾಲ ನೀಡಲಾಗುವುದು. ಕೋಲಾರಕ್ಕೆ ವಿಶ್ವವಿದ್ಯಾಲಯ ತಂದ ತೃಪ್ತಿ ಇದೆ ಎಂದು ಹೇಳಿದರು.
ನಾನು ಸದನದಲ್ಲಿ ಕಣ್ಣೀರಿಟ್ಟು, ಬಾಯಾರಿದ ಜಿಲ್ಲೆಗಳಿಗೆ ಕೆಸಿ ವ್ಯಾಲಿ ನೀರು ಬರುವಂತೆ ಮಾಡಿದೆ. ಆದರೆ ಇದನ್ನು ಸಹಿಸದ ಕೆಲವರು ಸತ್ತ ಹಾವನ್ನು ನೀರಿಗೆ ಹಾಕಿ, ನಾನು ಅಪರಾಧ ಮಾಡಿದಂತೆ ಬಿಂಬಿಸಲು ಪ್ರಯತ್ನಿಸಿದರು. ಯಾರು ಏನೇ ಮಾಡಿದರೂ ನೀರಿನ ವಿಷಯದಲ್ಲಿ ಮುಂದೆ ಇಟ್ಟ ಹೆಜ್ಜೆಯನ್ನು ಹಿಂದೆ ತೆಗೆಯುವುದಿಲ್ಲ. ಇನ್ನೆರಡು ತಿಂಗಳಲ್ಲಿ ಮುದುವಾಡಿ ಕೆರೆಗೆ ಕೆಸಿ ವ್ಯಾಲಿ ನೀರು ಹರಿಸಲಾಗುವುದು. ಎತ್ತಿನ ಹೊಳೆ ನೀರನ್ನು ತಾಲ್ಲೂಕಿನ ಗಡಿ ಗ್ರಾಮ ಮುದಿಮಡಗು ಬೆಟ್ಟಕ್ಕೆ ಹತ್ತಿಸಲಾಗುವುದು’ ಎಂದು ಹೇಳಿದರು.
ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಗೋವಿಂದಸ್ವಾಮಿ, ಮ್ಯಾಕಲ ನಾರಾಯಣಸ್ವಾಮಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಬಿ.ಇ.ಸುಗುಣಮ್ಮ ರಾಮಚಂದ್ರ, ಬ್ಲಾಕ್ ಕಾಂಗ್ರೆಸ್ ಕಾಂಗ್ರೆಸ್ ಸಂಜಯ್ ರೆಡ್ಡಿ, ಪುರಸಭೆ ಉಪಾಧ್ಯಕ್ಷ ಮುಕ್ತಿಯಾರ್ ಅಹ್ಮದ್, ಸದಸ್ಯರಾದ ಬಿ.ಎಲ್.ಪ್ರಕಾಶ್, ವಿ.ಶಂಕರ್, ರಮೇಶ್, ಮುಖ್ಯಾಧಿಕಾರಿ ಸತ್ಯನಾರಾಯಣ,ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನಾರಾಯಣಸ್ವಾಮಿ, ಮಖಂಡರಾದ ಎಲ್.ವಿ.ಗೋವಿಂದಪ್ಪ, ಆರ್.ಎನ್.ಚಂದ್ರಶೇಖರ್, ಕೆ.ಕೆ.ಮಂಜು, ವೇಣು, ಮಂಜುನಾಥರೆಡ್ಡಿ, ರೇಣುಕಾ, ಶಿವಕುಮಾರ್, ವಾಸು ಇದ್ದರು.
ಈ ಸಂದರ್ಭದಲ್ಲಿ ಕೆ.ಆರ್.ರಮೇಶ್ ಕುಮಾರ್ ಅಭಿಮಾನಿಗಳ ಬಳಗದ ವತಿಯಿಂದ ವಿಧಾನಸಭಾದ್ಯಕ್ಷ ಕೆ.ಆರ್.ರಮೇಶ್ ಕುಮಾರ್ ಅವರ 69ನೇ ಹುಟ್ಟು ಹಬ್ಬ ಆಚರಿಸಲಾಯಿತು.
ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ