ಶ್ರೀನಿವಾಸಪುರ: ಮಹಿಳೆಯರ ಸಬಲೀಕರಣದ ದೃಷ್ಟಿಯಿಂದ ಡಿಸಿಸಿ ಬ್ಯಾಂಕ್ ವತಿಯಿಂದ ಸ್ತ್ರೀ ಶಕ್ತಿ ಸಂಘದ ಸದಸ್ಯರಿಗೆ ನೀಡುತ್ತಿರುವ ಬಡ್ಡಿ ರಹಿತ ಸಾಲ ಯೋಜನೆ ದೇಶಕ್ಕೆ ಮಾದರಿಯಾಗಿದೆ ಎಂದು ವಿಧಾನ ಸಭೆಯ ಅಧ್ಯಕ್ಷ ಕೆ.ಆರ್ರಮೇಶ್ ಕುಮಾರ್ ಹೇಳಿದರು.
ಪಟ್ಟಣದ ತಾಲ್ಲೂಕು ಕಚೇರಿ ಆವರಣದಲ್ಲಿ ಡಿಸಿಸಿ ಬ್ಯಾಂಕ್ ವತಿಯಿಂದ ಸೋಮವಾರ ಏರ್ಪಡಿಸಿದ್ದ ಸಾಲ ವಿತರಣಾ ಸಮಾರಂಭದಲ್ಲಿ ಸ್ತ್ರೀ ಶಕ್ತಿ ಸಂಘಗಳಿಗೆ ರೂ.6.11ಕೋಟಿ ಮೊತ್ತದ ಚೆಕ್ ವಿತರಿಸಿ ಮಾತನಾಡಿ, ಈ ಮೊತ್ತವನ್ನು 135 ಸ್ತ್ರೀ ಶಕ್ತಿ ಸಂಘಗಳ 1500 ಮಹಿಳಾ ಸದಸ್ಯರಿಗೆ ನೀಡಲಾಗಿದೆ. ಪಡೆದ ಹಣವನ್ನು ಉದ್ದೇಶಿತ ಅಭಿವೃದ್ಧಿ ಚಟುವಟಿಕೆಯಲ್ಲಿ ತೊಡಗಿಸಿ, ಸಕಾಲಕ್ಕೆ ಸಾಲ ಮರುಪಾವತಿ ಮಾಡುವುದರ ಮೂಲಕ ರಾಜ್ಯದ ಮಹಿಳೆಯರಿಗೆ ಮಾದರಿಯಾಗಬೇಕು ಎಂದು ಹೇಳಿದರು.
ಕ್ಷೇತ್ರದ ಪ್ರತಿ ಸ್ತ್ರೀ ಶಕ್ತಿ ಸಂಘಕ್ಕೆ ಪಕ್ಷಾತೀತವಾಗಿ ರೂ.1 ಲಕ್ಷ ಬಡ್ಡಿ ರಹಿತ ಸಾಲ ನೀಡಲಾಗುವುದು. ವಿಧಾನ ಸಭಾ ಚುನಾವಣೆ ಸಂದರ್ಭದಲ್ಲಿ ಕೆಲವರು ಈ ಸಾಲದ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿದರು. ಸಾಲ ಪಡೆದ ಮಹಿಳೆಯರನ್ನು ಸಾಲ ಮರುಪಾವತಿ ಬಗ್ಗೆ ದಾರಿತಪ್ಪಿಸುವ ಪ್ರಯತ್ನ ಮಾಡಿದರು. ಆದರೆ ಅವರು ಅದಕ್ಕೆ ಕಿವಿಗೊಡಲಿಲ್ಲ. ‘ಅವರ ಆಶೀರ್ವಾದದಿಂದ ವಿಧಾನ ಸಭೆ ಪ್ರವೇಶಿಸಿದ್ದೇನೆ. ನನಗೆ ಕ್ಷೇತ್ರದ ಜನರೇ ದೇವರು. ಅವರ ಸೇವೆಗೆ ಸದಾ ಸಿದ್ಧನಾಗಿದ್ದೇನೆ. ಸಾಲದ ರಥ ನಿಲ್ಲುವುದಿಲ್ಲ. ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ಪೂರಕವಾದ ನೆರವು ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇತೆ’ ಎಂದು ಹೇಳಿದರು.
ಅಂತರ್ಜಲ ವೃದ್ಧಿಸುವ ಉದ್ದೇಶದಿಂದ ಕೆಸಿ ವ್ಯಾಲಿ ನೀರನ್ನು ಕೆರೆಗಳಿಗೆ ತುಂಬಿಸುವ ಯೋಜನೆಯನ್ನು ಜಾರಿಗೆ ತರಲಾಗಿದೆ. ಆದರೆ ಬಡವರ ಹಾಗೂ ರೈತರ ಬವಣೆ ಗೊತ್ತಿಲ್ಲದ ಕೆಲವರು ನೀರು ಹರಿಸುವುದರ ವಿರುದ್ಧ ನ್ಯಾಯಾಲಯದ ಮೊರೆಹೋಗಿದ್ದಾರೆ. ತಾಲ್ಲೂಕಿನ ತಿಮ್ಮಸಂದ್ರ ಗ್ರಾಮದ ಸಮೀಪ ರೂ.400 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಕಾಮಗಾರಿ ನಡೆಯದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ ಎಂದು ಹೇಳಿದರು.
‘ಬಡವರ ಬದುಕು ಹಸನುಗೊಳಿಸಲು ನನ್ನ ಜೀವನವನ್ನು ಕರ್ಪೂರದಂತೆ ಕರಗಿಸುತ್ತಿದ್ದೇನೆ. ಜನ ಶಕ್ತಿಯೇ ನನಗೆ ಶ್ರೀರಕ್ಷೆ. ಅವರು ಕೊಟ್ಟ ಶಕ್ತಿಯನ್ನು ಅವರ ಒಳಿತಿಗಾಗಿಯೇ ಬಳಸುತ್ತೇನೆ. ದೀಪಾವಳಿ ನಂತರ 10 ಸಾವಿರ ಮಹಿಳೆಯರಿಗೆ ತಲಾ ರೂ. 1 ಲಕ್ಷ ಸಾಲ ಸೌಲಭ್ಯ ಕಲ್ಪಿಸಲಾಗುವುದು. ರಾಜ್ಯ ಸರ್ಕಾರ ಕೈಗೊಂಡ ಖಾಸಗಿ ಆಸ್ಪತ್ರೆ ನಿಯಂತ್ರಣ ಕಾಯ್ದೆಯನ್ನು ಪ್ರಧಾನಿ ಮೋದಿ ಅವರು ಪ್ರಶಂಸಿಸಿದಿದ್ದಾರೆ. ಎಂದಿಗೂ ಜನಪರ ನಿಲುವನ್ನು ಬಿಟ್ಟುಕೊಡಲು ಸಾಧ್ಯವಿಲ್ಲ‘ ಎಂದು ಹೇಳಿದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿದಗೌಡ ಮಾತನಾಡಿ, ಮಹಿಳೆಯರಿಗೆ ಸಿಗುತ್ತಿರುವ ಬಡ್ಡಿ ರಹಿತ ಸಾಲ, ವಿಧಾನ ಸಭಾಧ್ಯಕ್ಷ ಕೆ.ಆರ್.ರಮೇಶ್ ಕುಮಾರ್ ಅವರ ಸತತ ಪ್ರಯತ್ನದ ಫಲ. ಸಾಲ ವಿರೋಧಿಗಳ ವಿರೋಧದ ನಡುವೆಯೂ ಬಡ ಮಹಿಳೆಯರ ಬದುಕು ಹಸನಾಗಲು ಅಗತ್ಯವಾದ ಸಾಲ ನೀಡಲಾಗಿದೆ. ಸಾಲ ನೀಡಿಕೆಯನ್ನು ಮುಂದುವರಿಸಿಕೊಂಡು ಹೋಗಲಾಗುವುದು ಎಂದು ಹೇಳಿದರು.
ಸಾಲ ಪಡೆದ ಮಹಿಳೆಯರ ಪಾಲಿಗೆ ಬ್ಯಾಂಕ್ ದೇವಾಲಯ ಇದ್ದಂತೆ. ಸಾಲ ಸದುಪಯೋಗ ಪಡಿಸಿಕೊಳ್ಳುವುದರ ಜೊತೆಗೆ, ಮರುಪಾವತಿ ಮಾಡುವುದರ ಮೂಲಕ, ಇನ್ನಷ್ಟು ಮಂದಿ ಸಾಲ ಪಡೆಯಲು ಅನುವು ಮಾಡಿಕೊಡಬೇಕು. ಸಾಲ ಕೊಡಿಸುವಲ್ಲಿ ಹಾಗೂ ಡಿಸಿಸಿ ಬ್ಯಾಂಕ್ ಉಳಿಸುವಲ್ಲಿ ರಮೇಶ್ ಕುಮಾರ್ ಅವರ ಪಾತ್ರವನ್ನು ಮರೆಯಲಾಗದು ಎಂದು ಹೇಳಿದರು.
ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್, ಎಪಿಎಂಸಿ ಸದಸ್ಯ ಎನ್.ರಾಜೇಂದ್ರ ಪ್ರಸಾದ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಬಿ.ಇ.ಸುಗುಣ ರಾಮಚಂದ್ರ, ಸ್ಥಳೀಯ ಡಿಸಿಸಿ ಬ್ಯಾಂಕ್ ಶಾಖೆಯ ಅಧ್ಯಕ್ಷ ಎಂ.ವೆಂಕಟರೆಡ್ಡಿ, ಮಖಂಡರಾದ ಸುಬ್ಬಿರೆಡ್ಡಿ, ಕೆ.ಕೆ.ಮಂಜು, ಎಸ್.ವೇಣುಗೋಪಾಲ್, ಆರ್.ಎನ್.ಚಂದ್ರಶೇಖರ್, ಮಂಜುನಾಥರೆಡ್ಡಿ, ಗಂಗಾಧರ್, ಪ್ರಭಾಕರರೆಡ್ಡಿ ಇದ್ದರು.