ಭಟ್ಕಳ: ಶಿರೂರು ಬಳಿ ಭಟ್ಕಳ ಸರ್ಕಾರಿ ಆಸ್ಪತ್ರೆ ಆಂಬ್ಯುಲೆನ್ಸ್ ಮತ್ತು ಕಾರು ನಡುವೆ ಅಪಘಾತ-ಮಹಿಳೆಯ ಸಾವು, ನಾಲ್ವರಿಗೆ ಗಾಯ
ಭಟ್ಕಳ, ಸೆ ೧೮: ಜೀವ ಉಳಿಸಬೇಕಾದ ಆಂಬ್ಯುಲೆನ್ಸ್ ವಾಹನವೇ ಅಪಘಾತಕ್ಕೊಳಗಾಗಿ ಓರ್ವ ಮಹಿಳೆಯ ಸಾವಿಗೆ ಕಾರಣವಾಗಿರುವ ವಿದ್ರಾವಕ ಘಟನೆ ಭಟ್ಕಳ ಬಳಿಕ ಶಿರೂರು ಬಳಿ ನಡೆದಿದೆ. ಅಂಬ್ಯುಲೆನ್ಸ್ ಚಂದ್ರಶೇಖರ್ ಎಂಬುವರನ್ನು ಕುಂದಾಪುರದ ಆಸ್ಪತ್ರೆಗೆ ದಾಖಲಿಸಿ ಭಟ್ಕಳಕ್ಕೆ ಹಿಂದಿರುಗುತ್ತಿದ್ದಾಗ ಮಧ್ಯರಾತ್ರಿ ಮೂರು ಘಂಟೆಗೆ ಬೆಂಗಳೂರಿನಿಂದ ಕೊಲ್ಲೂರಿಗೆ ಹೋಗುತ್ತಿದ್ದ ಕಾರಿಗೆ ಢಿಕ್ಕಿ ಹೊಡೆದಿದೆ.
ಪರಸ್ಪರ ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮವಾಗಿ ಕಾರಿನಲ್ಲಿದ್ದ ಜಗದಾಂಬಿಕೆ (45) ಎಂಬುವರು ಸ್ಥಳದಲ್ಲಿಯೇ ಮೃತಪಟ್ಟರೆ ಕಾರು ಚಾಲಕ ಗೌತಮ್, ಅಯ್ಯಪ್ಪ, ಅಂಬಾರಿ ಮತ್ತು ಅನುಶ್ರೀ ಎಂಬ ನಾಲ್ವರಿಗೆ ತೀವ್ರತರದ ಗಾಯಗಳಾಗಿದ್ದು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಂಬ್ಯುಲೆನ್ಸ್ ವಾಹನದ ಚಾಲಕ ರಾಜೇಶ್ ನ ಹೇಳಿಕೆಯ ಪ್ರಕಾರ ರಾತ್ರಿ ಇನ್ನೊಂದು ವಾಹನವನ್ನು ಓವರ್ ಟೇಕ್ ಮಾಡುವ ಭರದಲ್ಲಿ ಸಂಪೂರ್ಣ ವಿರುದ್ದ ದಿಕ್ಕಿಗೆ ಬಂದಿದ್ದ ಕಾರು ಸರಿಯಾದ ಪಥದಲ್ಲಿ ಎದುರಿನಿಂದ ಬರುತ್ತಿದ್ದ ಆಂಬ್ಯುಲೆನ್ಸ್ ವಾಹನಕ್ಕೆ ಮುಖಾಮುಖಿ ಢಿಕ್ಕಿ ಹೊಡಿದಿದೆ. ಬೈಂದೂರು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.