ಶಿರಾಲಿ ರಾ.ಹೆ. 45ಮೀ ವಿಸ್ತರಣೆಗೆ ಪಕ್ಷಾತೀತ ಹೋರಾಟಕ್ಕೆ ಸಿದ್ಧ-ಶಾಸಕ ಸುನಿಲ್ ನಾಯ್ಕ
ಭಟ್ಕಳ: ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರದ ತೀವ್ರಗತಿಯಲ್ಲಿ ಬೆಳವಣಿಗೆ ಹೊಂದುತ್ತಿರುವ ವಾಣಿಜ್ಯ ಪ್ರದೇಶಗಳಲ್ಲೊಂದಾದ ಶಿರಾಲಿಯಲ್ಲಿ ರಾಷ್ಟ್ರೀಯ ಹೆದ್ದಾರಿಯು 45 ಮೀ ವಿಸ್ತರಣೆ ಪ್ರಸ್ತುತ ಮತ್ತು ಭವಿಷ್ಯದ ದೃಷ್ಟಿಯಿಂದ ತುಂಬಾ ಅನುಕೂಲಕರವಾಗಿದ್ದು, ಈ ಪ್ರದೇಶದಲ್ಲಿ 45ಮೀ ವಿಸ್ತಾರಗೊಳ್ಳಲೇಬೇಕು, 30ಮೀಗೆ ಸೀಮೀತಗೊಳಿಸಿ ಕಾಮಗಾರಿ ಮುಂದುವರೆಸಿದ್ದಲ್ಲಿ ಸಾರ್ವಜನಿಕರೊಂದಿಗೆ ಪಕ್ಷಾತೀತವಾಗಿ ಹೊರಾಟಕ್ಕೆ ಸದಾ ಸಿದ್ದನಿದ್ದೇನೆ ಎಂದು ಶಾಸಕ ಸುನೀಲ್ ನಾಯ್ಕ ತಿಳಿಸಿರುವುದಾಗಿ ಶಾಸಕರ ಆಪ್ತ ಸಹಾಯಕ ಕರಿಯಪ್ಪ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಐಆರ್ಬಿ ಕಂಪನಿ ಮತ್ತಿತರ ಅಧಿಕಾರಿಗಳು ಅಮಾನುಷವಾಗಿ ಇಲ್ಲಿಯ ನಾಗರಿಕರ ಪ್ರತಿರೋಧವನ್ನು ಬಲಪ್ರಯೋಗದ ಮೂಲಕ ಹತ್ತಿಕ್ಕಿ ಹೋರಾಟದ ಕಾವನ್ನು ತಗ್ಗಿಸುವ ಪ್ರಯತ್ನ ಮಾಡಿದ್ದಾರೆ ಎಂಬ ಸುದ್ದಿ ಕೇಳಿ ಬೇಸರವೆನಿಸಿದ್ದು ವಿಧಾನ ಮಂಡಲದ ಬಜೆಟ್ ಅಧಿವೇಶನದಲ್ಲಿ ಪಾಲ್ಗೊಂಡಿರುವ ತನಗೆ ನೇರವಾಗಿ ಸಾರ್ವಜನಿಕರೊಂದಿಗೆ ಪ್ರತಿಭಟನೆಯಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ. ಇದಕ್ಕಾಗಿ ವಿಷಾದಿಸುತ್ತೆನೆ ಎಂದು ತಿಳಿಸಿರುತ್ತಾರೆ.
ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲಾಧಿಕಾರಿಗಳು ಹಾಗೂ ವಿವಿಧ ಸಂಬಂದಿಸಿದ ಅಧಿಕಾರಿಗಳೊಂದಿಗೆ ಕಳೆದ 6-7 ತಿಂಗಳುಗಳಿಂದ ಶಿರಾಲಿಯ ಹೆದ್ದಾರಿಯ 45 ಮೀ ವಿಸ್ತಾರ ಅಗತ್ಯವಿದೆ ಎಂದು ಮನವರಿಕೆ ಮಾಡಿ ಕೊಟ್ಟಿದ್ದೇನೆ ಆದರೂ ಉಸ್ತುವಾರಿ ಸಚಿವರು ಈ ಕುರಿತು ಆಸಕ್ತಿ ತಳೆದಿಲ್ಲದಿರುವುದರಿಂದ ಅಧಿಕಾರಿಗಳು ಭವಿಷ್ಯದ ಶಿರಾಲಿಯ ಅಭಿವೃದ್ದಿಯನ್ನು ಕಡೆಗಣಿಸಿ ಇಲ್ಲಿಯ ಸ್ಥಳೀಯ ಸಂಸ್ಥೆಯ ಜನಪ್ರತಿನಿಧಿಗಳ ಮಾತನ್ನು ಲೆಕ್ಕಿಸದೆ ಯಾರನ್ನೋ ಮೆಚ್ಚಿಸಲು ಬಹುಸಂಖ್ಯಾತ ನಾಗರಿಕರ ಜನಜೀವನದ ಮೇಲೆ ಚೆಲ್ಲಾಟ ವಾಡುತ್ತಿರುವುದನ್ನು ಶಾಸಕರು ಖಂಡಿಸಿರುವುದಾಗಿ ಶಾಸಕರ ಆಪ್ತ ಸಹಾಯಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.