ಶಿಡ್ಲಘಟ್ಟ,ಜನವರಿ20: ಸರಕಾರಿ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಗೂಡು ಮಾರಾಟ ಮಾಡುವ ರೇಷ್ಮೆ ಬೆಳೆಗಾರರಿಗೆ ತ್ವರಿತವಾಗಿ ಹಣವನ್ನು ಪಾವತಿಸುವ ವ್ಯವಸ್ಥೆಯನ್ನು ಜಾರಿಗೊಳಿಸಬೇಕೆಂದು ರೈತ ಸಂಘ,ರೇಷ್ಮೆ ಬೆಳೆಗಾರರ ಹಿತರಕ್ಷಣಾ ವೇದಿಕೆ ಸದಸ್ಯರು ಒತ್ತಾಯಿಸಿದ್ದಾರೆ.
ನಗರದ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಉಪನಿರ್ದೇಶಕ ರತ್ನಯ್ಯಶೆಟ್ಟಿ ಅವರನ್ನು ಭೇಟಿ ಮಾಡಿದ ರೇಷ್ಮೆ ಹಿತರಕ್ಷಣಾ ವೇದಿಕೆ ಮತ್ತು ರೈತ ಸಂಘದ ಸದಸ್ಯರು ರೇಷ್ಮೆ ಬೆಳೆಗಾರರಿಗೆ ಆಗುತ್ತಿರುವ ತೊಂದರೆಗಳನ್ನು ಮನವರಿಕೆ ಮಾಡಿಕೊಟ್ಟು ಇಲಾಖೆಯ ಮೂಲಕವೇ ರೈತರಿಗೆ ಚೆಕ್ ನೀಡುವ ವ್ಯವಸ್ಥೆಯನ್ನು ಜಾರಿಗೊಳಿಸಬೇಕೆಂದು ಮನವಿ ಮಾಡಿದರು.
ಕೇಂದ್ರ ಸರಕಾರ ಐದುನೂರು ಮತ್ತು ಒಂದು ಸಾವಿರ ರೂಪಾಯಿ ಮುಖಬೆಲೆಯ ನೋಟುಗಳ ಚಲಾವಣೆಯನ್ನು ರದ್ದುಪಡಿಸಿದ ಬಳಿಕ ನಗರದ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ರೇಷ್ಮೆ ಗೂಡನ್ನು ಕೊಂಡ ರೀಲರುಗಳು ಚೆಕ್ ಮೂಲಕ ವ್ಯವಹಾರ ನಡೆಸುತ್ತಿದ್ದು, ರೈತರಿಗೆ ತೊಂದರೆಯುಂಟಾಗುತ್ತಿದೆ ಎಂದು ದೂರಿದ ರೈತ ಪ್ರತಿನಿಧಿಗಳು ನೂಲು ಬಿಚ್ಚಾಣಿಕೆದಾರರು ನೀಡುವ ಚೆಕ್ಗಳಲ್ಲಿ ಕೆಲವೊಂದು ತಪ್ಪುಗಳಿಂದಾಗಿ ರೇಷ್ಮೆ ಬೆಳೆಗಾರರು ಹಣಕ್ಕಾಗಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು ಅಧಿಕಾರಿಗಳು ರೀಲರುಗಳು ನೀಡುವ ಚೆಕ್ಗಳನ್ನು ಪರಿಶೀಲಿಸಿ ಸರಕಾರದ ಚೆಕ್ ಮೂಲಕ ಹಣವನ್ನು ಪಾವತಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಈ ಹಿಂದೆ ಮಾರುಕಟ್ಟೆ ಅಧಿಕಾರಿಗಳು ರೀಲರುಗಳಿಂದ ಹಣ ಪಡೆದು ಕಮಿಷನ್ ಹಣ ಮುರಿದುಕೊಂಡು ರೈತರಿಗೆ ಹಣ ನೀಡುತ್ತಿದ್ದರು. ಅದೇ ರೀತಿಯಾಗಿ ರೀಲರುಗಳಿಂದ ಅಧಿಕಾರಿಗಳು ಚೆಕ್ ಪಡೆದು ಸರ್ಕಾರಕ್ಕೆ ಸಲ್ಲಿಸಬೇಕಾದ ಕಮಿಷನ್ ಹಣವನ್ನು ತೆಗೆದುಕೊಂಡು ರೈತರಿಗೆ ಸರ್ಕಾರದ ಚೆಕ್ ನೀಡುವ ವ್ಯವಸ್ಥೆ ಆಗಬೇಕು ಎಂದು ಒತ್ತಾಯಿಸಿದರಲ್ಲದೇ ಮಾರುಕಟ್ಟೆಯಲ್ಲಿನ ಸಮಸ್ಯೆಗಳು ಅಧಿಕವಾಗಿದೆ ರೇಷ್ಮೆ ಗೂಡಿನ ಮಾರುಕಟ್ಟೆಯ ವಹಿವಾಟಿಗೆ ಒಂದು ಬ್ಯಾಂಕ್ ಶಾಖೆಯ ಅಗತ್ಯವಿದ್ದು ರೈತರು ಮತ್ತು ರೀಲರ್ಸ್ಗಳ ಅನುಕೂಲಕ್ಕಾಗಿ ಬೇಡಿಕೆಯನ್ನು ಈಡೇರಿಸಬೇಕೆಂದು ಮನವಿ ಮಾಡಿದರು.
ಜಿಲ್ಲಾ ರೇಷ್ಮೆ ಹಿತರಕ್ಷಣಾ ವೇದಿಕೆ ಸಂಚಾಲಕ ಯಲುವಳ್ಳಿ ಸೊಣ್ಣೇಗೌಡ, ಉಪಾಧ್ಯಕ್ಷ ಮಳ್ಳೂರು ಹರೀಶ್, ರೈತಸಂಘದ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ತಾಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಮಳಮಾಚನಹಳ್ಳಿ ದೇವರಾಜ್, ಅನ್ಸರ್ಖಾನ್,ರಾಮಕೃಷ್ಣಪ್ಪ, ಪಿಕಾರ್ಡ್ ಬ್ಯಾಂಕಿನ ಮಾಜಿ ಅಧ್ಯಕ್ಷ ತೋಪಡ ರಾಮಚಂದ್ರಪ್ಪ, ಮತ್ತಿತರರು ಉಪಸ್ಥಿತರಿದ್ದರು.