ಶಿಡ್ಲಘಟ್ಟ: ವಿದ್ಯಾರ್ಥಿಗಳ ಸುಪ್ತ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಲು ಪ್ರತಿಭಾ ಕಾರಂಜಿಯ ಸ್ಪರ್ಧಿಗಳಿಗೂ ಅನುದಾನಕ್ಕೆ ಆಗ್ರಹ
ಶಿಡ್ಲಘಟ್ಟ,: ಶಾಲಾ ವಿದ್ಯಾಥಿಗಳಲ್ಲಿ ಸುಪ್ತವಾಗಿರುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಸಲುವಾಗಿ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ನಡೆಯುವ ಪ್ರತಿಭಾ ಕಾರಂಜಿಗಳ ಸ್ಪರ್ಧೆಗಳನ್ನು ಆಯೋಜಿಸಲು ನೀಡುವ ಅನುದಾನವನ್ನು ಕ್ಲಸ್ಟರ್ ಮಟ್ಟದಲ್ಲಿ ನಡೆಯುವ ಪ್ರತಿಭಾ ಕಾರಂಜಿ ಸ್ಪರ್ಧೆಗಳಿಗೆ ಸಹ ಬಿಡುಗಡೆ ಮಾಡಬೇಕೆಂದು ತಾಲೂಕಿನ ಜಂಗಮಕೋಟೆ ಸಿ.ಆರ್.ಪಿ ಸುಂದರಾಚಾರಿ ಒತ್ತಾಯಿಸಿದರು.
ತಾಲೂಕಿನ ಜಂಗಮಕೊಟೆಯ ಸರಕಾರಿ ಪ್ರೌಢಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಗ್ರಾಮೀಣ ಪ್ರದೇಶದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕೊರತೆಗಳಿಲ್ಲ ಆದರೇ ಸರಕಾರ ಮತ್ತು ಸಂಘ ಸಂಸ್ಥೆಗಳಿಂದ ಸೂಕ್ತ ರೀತಿಯಲ್ಲಿ ಪ್ರೋತ್ಸಾಹ ಮತ್ತು ಸಹಕಾರ ದೊರೆಯಬೇಕೆಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಹಮತ್ ಜಾನ್ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಶಾಲಾ ವಿದ್ಯಾರ್ಥಿಗಳಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆಗಳನ್ನು ಹೊರತರಲು ಪ್ರತಿಭಾ ಕಾರಂಜಿ ಕಾರ್ಯಕ್ರಮಗಳು ಸೂಕ್ತ ವೇದಿಕೆಯಾಗಿದೆ ಎಂದರು.
ಇದೇ ಸಂದರ್ಭದಲ್ಲಿ 17 ಶಾಲೆಗಳ ವಿದ್ಯಾರ್ಥಿಗಳು ಕೋಲಾಟ,ಜನಪದ ನೃತ್ಯ, ಖವಾಲಿ, ದೇಶಭಕ್ತಿ ಗೀತೆ, ರಸಪ್ರಶ್ನೆ ಕಾರ್ಯಕ್ರಮ, ಕಂಠಪಾಠ, ಚಿತ್ರಕಲೆ, ಪ್ಲೇಮಾಡಲಿಂಗ್, ಭಕ್ತಿಗೀತೆ, ಅಭಿನಯ ಗೀತೆ,ಆಶುಭಾಷಣ, ಛದ್ಮವೇಷ ಇನ್ನೂ ಮುಂತಾದ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದರು,
ಜಂಗಮಕೋಟೆ ಗ್ರಾಪಂ ಸದಸ್ಯ ಶ್ರೀನಿವಾಸ್,ಜೆ.ವೆಂಕಟಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ರಘು, ಪ್ರೌಡಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಬೈರಾರೆಡ್ಡಿ, ಸಂಘಟನಾ ಕಾರ್ಯದರ್ಶಿ ರುದ್ರೇಶ್ಮೂರ್ತಿ,ಪದಾಧಿಕಾರಿ ಸುಮಾ, ಬಿ.ಆರ್.ಸಿ ಶಾರದಮ್ಮ, ಸಿ.ಆರ್.ಪಿ ಸುಂದರಾಚಾರಿ, ಪ್ರೌಡಶಾಲೆಯ ಮುಖೋಪಾಧ್ಯಾಯ ಹೀರಯ್ಯ, ಸರಕಾರಿ ನೌಕರರ ಸಂಘದ ಗೌರವಾಧ್ಯಕ್ಷ ವಿಜಯಕುಮಾರ್, ಸಿಆರ್ಪಿ ನರಸಿಂಹರಾಜು ಮತ್ತಿತರರು ಉಪಸ್ಥಿತರಿದ್ದರು,