ಶಿಡ್ಲಘಟ್ಟ,ಆಗಸ್ಟ್24: ಸ್ವಚ್ಛಭಾರತ ಅಭಿಯಾನ ಯೋಜನೆಯಡಿ ಪ್ರತಿಯೊಂದು ಕುಟುಂಬದಲ್ಲಿ ಕಡ್ಡಾಯವಾಗಿ ಶೌಚಾಲಯಗಳನ್ನು ನಿರ್ಮಿಸಿ ಅಕ್ಟೋಬರ್ 2ರೊಳಗೆ ಶಿಡ್ಲಘಟ್ಟ ತಾಲೂಕನ್ನು ಬಯಲು ಬಹಿರ್ದೆಸೆ ಮುಕ್ತ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಪಂ ಉಪ ಕಾರ್ಯದರ್ಶಿ ಸಿದ್ದರಾಮಯ್ಯ ತಿಳಿಸಿದರು.
ನಗರದ ತಾಪಂ ಸಭಾಂಗಣದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಅಭಿವೃಧ್ಧಿ ಅಧಿಕಾರಿಗಳು/ಕಾರ್ಯದರ್ಶಿಗಳ ಸಭೆಯಲ್ಲಿ ಪ್ರಗತಿ ಪರಿಶೀಲಿಸಿ ಮಾತನಾಡಿದ ಅವರು ಪ್ರತಿಯೊಂದು ಕುಟುಂಬ ಸದಸ್ಯರು ಕಡ್ಡಾಯವಾಗಿ ಶೌಚಾಲಯವನ್ನು ನಿರ್ಮಿಸಿಕೊಳ್ಳಲು ಪ್ರೇರಿಪಿಸಬೇಕೆಂದು ಸೂಚನೆ ನೀಡಿದ ಅವರು ಸ್ವಚ್ಛಭಾರತ ಅಭಿಯಾನ ಯೋಜನೆಯಡಿ ಶೌಚಾಲಯಗಳನ್ನು ನಿರ್ಮಿಸಿ ಅಕ್ಟೋಬರ್ 2ರೊಳಗೆ ಶಿಡ್ಲಘಟ್ಟ ತಾಲೂಕನ್ನು ಬಯಲು ಬಹಿರ್ದೆಸೆ ಮುಕ್ತ ಮಾಡಬೇಕೆಂದು ಆದೇಶಿಸಿದರು.
ಗ್ರಾಮೀಣ ಪ್ರದೇಶದ ಅಭಿವೃಧ್ಧಿಗೆ ಪೂರಕವಾಗಿರುವ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಗ್ರಾಮಾಂತರ ಪ್ರದೇಶದಲ್ಲಿ ಮೂಲಭೂತ ಸೌಲಭ್ಯಗಳನ್ನು ಮೇಲ್ದಜೇಗೇರಿಸಿಕೊಳ್ಳಲು ಕ್ರಮ ಕೈಗೊಳ್ಳಬೇಕೆಂದ ಅವರು ಜಲಸಂಪನ್ಮೂಲಗಳನ್ನು ವೃಧ್ಧಿಗೊಳಿಸುವ ಯೋಜನೆಯನ್ನು ಅನುಷ್ಠಾನಕ್ಕೆ ತರಲು ಆದ್ಯತೆ ನೀಡಬೇಕೆಂದರು.
ಪ್ರಾಚೀನ ಕಾಲದಲ್ಲಿ ಪೂಜ್ಯರು ನಿರ್ಮಿಸಿರುವ ಕೆರೆ-ಗೋಕುಂಟೆಗಳನ್ನು ಅಭಿವೃಧ್ಧಿಗೊಳಿಸುವ ಜೊತೆಗೆ ಮಳೆಯ ನೀರನ್ನು ಸಂರಕ್ಷಣೆ ಮಾಡುವ ಬಹುಕಮಾನ್ ಚೆಕ್ಡ್ಯಾಂ,ಇಂಗುಬಾವಿಗಳು,ಕೊಳವೆಬಾವಿಗಳ ಪುನಶ್ಚೇತನಗೊಳಿಸಲು ಕ್ರಮ ಕೈಗೊಳ್ಳಬೇಕೆಂದರು.
ಶಿಡ್ಲಘಟ್ಟ ತಾಲೂಕಿನಲ್ಲಿ ಮಳೆನೀರು ಸಂರಕ್ಷಣೆ ಮಾಡುವ ಜೊತೆಗೆ ಸರಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಕಾಂಪೌಂಡ ನಿರ್ಮಾಣ, ಅಂಗನವಾಡಿ ಕೇಂದ್ರಗಳನ್ನು ನಿರ್ಮಿಸಲು ಆದ್ಯತೆ ನೀಡಬೇಕೆಂದು ಗ್ರಾಪಂ ಪಿಡಿಓಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ ಮಜಿನರೇಗಾ ಮತ್ತು ಸ್ವಚ್ಛಭಾರತ ಯೋಜನೆ ಸಹಿತ ಇನ್ನಿತರೆ ಯೋಜನೆಗಳನ್ನು ತಾಲೂಕಿನಲ್ಲಿ ಅನುಷ್ಠಾನಗೊಳಿಸಲಾಗಿದ್ದು ಮತ್ತಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿ ನಾಗರಿಕರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ತಾಲೂಕನ್ನು ಮಾದರಿಯಾಗಿ ಪರಿವರ್ತಿಸಬೇಕೆಂದರು.
ಸಭೆಯಲ್ಲಿ ತಾಪಂ ಇಓ ವೆಂಕಟೇಶ್, ಮಜಿನರೇಗಾ ಯೋಜನೆಯ ಸಹಾಯಕ ನಿರ್ದೇಶಕ ಶ್ರೀನಾಥ್ಗೌಡ, ಬೆಸ್ಕಾಂ ಇಲಾಖೆಯ ಎಇಇ ಅನ್ಸರ್ಬಾಷ ಮತ್ತಿತರರು ಉಪಸ್ಥಿತರಿದ್ದರು.
ಶಿಡ್ಲಘಟ್ಟದ ತಾಪಂ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ತಾಲ್ಲೂಕು ಮಟ್ಟದ ಅಧಿಕರಿಗಳು,ಗ್ರಾಪಂ ಪಿಡಿಓ/ ಕಾರ್ಯದರ್ಶಿಗಳು ಭಾಗವಹಿಸಿದರು.