ಶಿಡ್ಲಘಟ್ಟ,ಸೆಪ್ಟೆಂಬರ್24: ಸಮಾಜದಲ್ಲಿ ಪ್ರತಿಯೊಬ್ಬರು ತಮ್ಮ ತಮ್ಮ ಮನೆಗಳ ಸುತ್ತಮುತ್ತ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಆರೋಗ್ಯವಂತ ಸಮಾಜವನ್ನು ನಿರ್ಮಿಸಲು ಸಹಕಾರ ನೀಡಬೇಕೆಂದು ಶಾಸಕ ರಾಜಣ್ಣ ಮನವಿ ಮಾಡಿದರು.
ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸ್ವಚ್ಛಭಾರತ ಅಭಿಯಾನದ ಅಂಗವಾಗಿ ಸ್ವಚ್ಛತಾ ಆಂದೋಲನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಗರಸಭೆಯ ವ್ಯಾಪ್ತಿಯಲ್ಲಿ ಮೂಲಭೂತವಾಗಿ ಕುಡಿಯುವ ನೀರು,ರಸ್ತೆ,ಬೀದಿದೀಪ ಮತ್ತು ನೈರ್ಮಲ್ಯವನ್ನು ಕಾಪಾಡಲು ನಾಗರಿಕರು ಸಹಕಾರ ನೀಡಬೇಕೆಂದು ಮನವಿ ಮಾಡಿದ ಅವರು ರೇಷ್ಮೆ ನಗರದಲ್ಲಿ ಕಸಕಡ್ಡಿಗಳ ವಿಲೇವಾರಿಗೆ ವಿಶೇಷ ಆದ್ಯತೆ ನೀಡಬೇಕೆಂದು ಸಲಹೆ ನೀಡಿದರು.
ನಗರಸಭೆಯ ಅಧ್ಯಕ್ಷ ಬಿ.ಅಫ್ಸರ್ಪಾಷ ಮಾತನಾಡಿ ಸಾರ್ವಜನಿಕ ಆಸ್ಪತ್ರೆಯ ಮೂಲಕ ನಗರದಲ್ಲಿ ಸ್ವಚ್ಛತಾ ಆಂದೋಲನಕ್ಕೆ ಚಾಲನೆ ನೀಡಲಾಗಿದ್ದು ನಗರದ ಎಲ್ಲಾ ವಾರ್ಡ್ಗಳಲ್ಲಿ ನೈರ್ಮಲ್ಯ ಕಾಪಾಡಲು ಪ್ರಥಮ ಆದ್ಯತೆ ನೀಡಲಾಗಿದೆ ಆಸ್ಪತ್ರೆಯಲ್ಲಿ ಅಶುಚಿತ್ವದ ಕುರಿತು ಅಸಮಾಧಾನ ವ್ಯಕ್ತಪಡಿಸಿ ಒಳ್ಳೆಯವರು ಬಂದರು ಸಹ ಇಲ್ಲಿ ರೋಗಿಗಳಾಗುವ ಶೋಚನೀಯ ಪರಿಸ್ಥಿತಿ ನಿರ್ಮಾಣಗೊಂಡಿರುವುದನ್ನು ನೋಡಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದ ಅವರು ಸ್ವಚ್ಛನಗರ ನಿರ್ಮಲ ನಗರ ನಿರ್ಮಾಣಕ್ಕಾಗಿ ನಾಗರಿಕರು ಸಹಕಾರ ನೀಡಬೇಕೆಂದು ಕೋರಿದರು.
ಈ ಸಂದರ್ಭದಲ್ಲಿ ನಗರಸಭೆಯ ಸ್ಥಾಯಿ ಸಮಿತಿಯ ಅಧ್ಯಕ್ಷ ನಂದಕಿಶನ್(ನಂದು),ಕರವೇ ನಗರ ಘಟಕದ ಅಧ್ಯಕ್ಷ ಸೈಯದ್ಬಾಬಾ,ಅಕ್ರಂ,ಆರೀಫ್,ನಗರಸಭೆಯ ಸದಸ್ಯ ಸುಹೇಲ್,ಪರಿಸರ ಅಭಿಯಂತರ ದಿಲೀಪ್,ಆರೋಗ್ಯ ನಿರೀಕ್ಷಕ ಬಾಲರಾಜ್,ಮುರಳಿ,ಅಪ್ಪಿ ಮತ್ತಿತರರು ಉಪಸ್ಥಿತರಿದ್ದರು.
ಶಿಡ್ಲಘಟ್ಟದ ಸಾರ್ವಜನಿಕ ಆಸ್ಪತ್ರೆಯಲ್ಲಿ ನಗರಸಭೆಯ ಅಧ್ಯಕ್ಷ ಬಿ.ಅಫ್ಸರ್ಪಾಷ ನೇತೃತ್ವದಲ್ಲಿ ಪೌರಕಾರ್ಮಿಕರು ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವುದು.