ಶಿಡ್ಲಘಟ್ಟ,ಜುಲೈ15: ತಾಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕ್ಷೇತ್ರಗಳನ್ನು ಸಮಗ್ರವಾಗಿ ಅಭಿವೃಧ್ಧಿಗೊಳಿಸಲು ಸರಕಾರದಿಂದ ಬಂದಿರುವ ಅನುದಾನ ಹಂಚಿಕೆಯಲ್ಲಿ ತಾಲೂಕು ಪಂಚಾಯಿತಿಯ ಅಧ್ಯಕ್ಷರು-ಉಪಾಧ್ಯಕ್ಷರು ತಾರತಮ್ಯ ನೀತಿಯನ್ನು ಅನುಸರಿಸಿದರೆ ಕಾನೂನು ರೀತಿಯಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ತಾಲೂಕು ಪಂಚಾಯಿತಿ ವಿರೋಧ ಪಕ್ಷದ ಸದಸ್ಯರು ಎಚ್ಚರಿಕೆ ನೀಡಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸುಧ್ಧಿಗಾರರೊಂದಿಗೆ ಮಾತನಾಡಿದ ಕಾಂಗ್ರೇಸ್ ಪಕ್ಷದ ತಾಲೂಕು ಪಂಚಾಯಿತಿ ಸದಸ್ಯರು ಕ್ಷೇತ್ರದ ಅಭಿವೃಧ್ಧಿಯ ದೃಷ್ಠಿಯಿಂದ ಸರಕಾರದಿಂದ ಬರುವ ಅನುದಾನಗಳನ್ನು ಕ್ಷೇತ್ರವಾರು ಹಂಚಿಕೆ ಮಾಡಬೇಕೆಂದು ಸದಸ್ಯರ ಒತ್ತಾಯಕ್ಕೆ ಪೂರಕವಾಗಿ ತಾಲೂಕು ಪಂಚಾಯಿತಿಯ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣರೆಡ್ಡಿ ಮತ್ತು ಉಪಾಧ್ಯಕ್ಷ ನರಸಿಂಹಯ್ಯ ಸ್ಪಂದಿಸುತ್ತಿಲ್ಲವೆಂದು ದೂರಿದ ವಿರೋಧ ಪಕ್ಷದ ಸದಸ್ಯರು ಸರಕಾರದಿಂದ ಅನುದಾನವನ್ನು ತಾಪಂ ಸದಸ್ಯರಿಗೆ ಕ್ಷೇತ್ರವಾರು ಹಂಚಿಕೆಯಲ್ಲಿ ತಾರತಮ್ಯ ಅಥವಾ ಪಕ್ಷಪಾತ ಧೋರಣೆಯನ್ನು ಅನುಸರಿಸಿದರೆ ಕಾನೂನು ರೀತಿಯಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದರು.
ಸಭೆಯಿಂದ ದೂರ: ತಾಲೂಕು ಪಂಚಾಯಿತಿಗೆ ಅನಿರ್ಭಂಧಿತ ಯೋಜನೆಯಡಿ 1 ಕೋಟಿ,ಅಭಿವೃಧ್ಧಿ ಅನುದಾನ 2 ಲಕ್ಷ 97 ಸಾವಿರ ಹಾಗೂ ರಸ್ತೆಗಳ ಡಾಂಬಿರೀಕರಣಕ್ಕಾಗಿ 2 ಲಕ್ಷ 34 ಸಾವಿರ ರೂಗಳು ಬಿಡುಗಡೆಯಾದರೂ ತಾಪಂ ಅಧ್ಯಕ್ಷ-ಉಪಾಧ್ಯಕ್ಷರು ಸರಕಾರದಿಂದ ಬಂದಿರುವ ಅನುದಾನದಲ್ಲಿ ಸಿಂಹಪಾಲು ತಮಗೆ ಸಿಗಬೇಕೆಂದು ಹಠಹಡಿದಿದ್ದಾರೆ, ಕ್ಷೇತ್ರದ ಅಭಿವೃಧ್ಧಿಯನ್ನು ಲೆಕ್ಕಿಸದೆ ಅನುದಾನದ ಹಂಚಿಕೆಯಲ್ಲಿ ತಾರತಮ್ಯ ನೀತಿಯನ್ನು ಅನುಸರಿಸಲು ತಾಪಂ ಅಧ್ಯಕ್ಷ-ಉಪಾಧ್ಯಕ್ಷರು ಸಿದ್ದತೆ ನಡೆಸುತ್ತಿದ್ದಾರೆ ಎಂಬ ಅನುಮಾನ ಮೂಡುವಂತಾಗಿದೆ ಸರಕಾರದಿಂದ ಬಂದಿರುವ ಅನುದಾನವನ್ನು ಸಮಾನವಾಗಿ ಕ್ಷೇತ್ರವಾರು ಸದಸ್ಯರಿಗೆ ಹಂಚಿಕೆ ಮಾಡಿ ಅಭಿವೃಧ್ಧಿ ಕೆಲಸಗಳನ್ನು ತೆಗೆದುಕೊಳ್ಳಬೇಕೆಂದು ತುರ್ತು ಸಭೆಯಲ್ಲಿ ಆಗ್ರಹಿಸಲಾಗಿದೆ ಒಂದು ವೇಳೆಯಲ್ಲಿ ಅನುದಾನ ಹಂಚಿಕೆ ವಿಚಾರದಲ್ಲಿ ಪಕ್ಷಪಾತ-ತಾರತಮ್ಮ ನೀತಿ ಅನುಸರಿಸಿದರೆ ಕಾನೂನಿನ ವ್ಯಾಪ್ತಿಯಲ್ಲಿ ಅನಿವಾರ್ಯವಾಗಿ ಹೋರಾಟ ಮಾಡಬೇಕಾಗುತ್ತದೆ ಎಂದು ಸದಸ್ಯರು ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ತಾಪಂ ಸದಸ್ಯರುಗಳಾದ ಜಂಗಮಕೋಟೆ ನಾಗರಾಜ್,ಅಬ್ಲೂಡು ಶ್ರೀನಿವಾಸ್,ಹೊಸಪೇಟೆ ಶೋಭಾ ಶಶಿಕುಮಾರ್,ಪಂಕಜ ನಿರಂಜನ್,ನರಸಿಂಹಪ್ಪ,ವಹೀದಾ ಸಮೀಉಲ್ಲಾ,ನಾಗವೇಣಿ ವೆಂಕಟೇಶ್,ರಾಜೀವ್ಗಾಂಧಿ ಪಂಚಾಯತ್ರಾಜ್ ಸಂಘಟನೆಯ ಜಿಲ್ಲಾ ಸಂಚಾಲಕ ನಿರಂಜನ್,ಹೊಸಪೇಟೆ ಶಶಿಕುಮಾರ್,ಜಂಗಮಕೋಟೆ ಗ್ರಾಪಂ ಮಾಜಿ ಅಧ್ಯಕ್ಷ ಗುಂಡಪ್ಪ,ಮುಖಂಡರಾದ ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.