ಶಿಡ್ಲಘಟ್ಟ,ಸೆಪ್ಟೆಂಬರ್21: ನಗರಕ್ಕೆ ಹೊಂದುಕೊಂಡಿರುವ ಅಮಾನಿಕೆರೆಯನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ತಹಶೀಲ್ದಾರ್ ಅಜೀತ್ಕುಮಾರ್ ರೈ ಮತ್ತು ಅಧಿಕಾರಿಗಳು ದಿಡೀರ್ ಭೇಟಿ ನೀಡಿ ಪರಿಶೀಲಿಸಿದರು.
ನಗರ ಸೇರಿದಂತೆ ತಾಲೂಕಿನಾದ್ಯಂತ ಇತ್ತೀಚಿಗೆ ಸುರಿದ ಮಳೆಯಿಂದ ನೀರು ಸರಾಗವಾಗಿ ಹರಿಯದೆ ತಗ್ಗುಪ್ರದೇಶಗಳಲ್ಲಿ ನೀರು ನುಗ್ಗಿರುವ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ತಾಲೂಕು ಆಡಳಿತ ಒತ್ತುವರಿಯಾಗಿರುವ ರಾಜಕಾಲುವೆ-ಕೆರೆಗಳನ್ನು ತೆರವುಗೊಳಿಸುವ ನಿಟ್ಟಿನಲ್ಲಿ ಬಿಗಿ ಕ್ರಮ ಕೈಗೊಂಡಿದೆ ಈ ಹಿನ್ನೆಯಲ್ಲಿ ತಹಶೀಲ್ದಾರ್ ಅಜೀತ್ಕುಮಾರ್ ರೈ ಗ್ರಾಮ ಪಂಚಾಯಿತಿ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ನಗರದ ಅಮಾನಿಕೆರೆಗೆ ಭೇಟಿ ನೀಡಿ ಒತ್ತುವರಿಯಾಗಿರುವುದನ್ನು ಕಣ್ಣಾರೇ ಕಂಡು ದಿಗ್ಭ್ರಮೆ ವ್ಯಕ್ತಪಡಿಸಿ ಅತಿ ಶೀಘ್ರದಲ್ಲಿ ಒತ್ತುವರಿಯನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ನಗರದ ಅಮಾನಿಕೆರೆ ಮತ್ತು ಗೌಡನಕೆರೆಗಳಲ್ಲಿ ಉದ್ದಗಲಕ್ಕೂ ಜಾಲಿ ಮರಗಳು ಬೆಳೆದು ನಿಂತು ಕೆರೆಯ ಕಾಣದಾಗಿದೆ ಕೆರೆಯು ತನ್ನ ಅಸ್ತಿತ್ವವನ್ನೆ ಕಳೆದುಕೊಳ್ಳುವ ಸ್ಥಿತಿಗೆ ಬಂದಿದೆ ನೀರು ಹರಿಯುವ ರಾಜಕಾಲುವೆಗಳನ್ನು ಸಹ ಒತ್ತುವರಿದಾರರು ಬಿಟ್ಟಿಲ್ಲ ಇದರಿಂದಾಗಿ ಕೆರೆಗೆ ನೀರು ಹರಿಯದ ಪರಿಸ್ಥಿತಿ ನಿರ್ಮಾಣವಾಗಿದೆ ಇದು ಸಾಲದು ಎಂಬಂತೆ ಕೆರೆಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ತಹಶೀಲ್ದಾರ್ ಅವರಿಗೆ ರೈತ ಮುಖಂಡರು ಮಾಹಿತಿ ನೀಡಿ ಕೂಡಲೇ ಒತ್ತುವರಿಯನ್ನು ತೆರವುಗೊಳಿಸಬೇಕೆಂದು ಮನವಿ ಮಾಡಿದರು.
ರೈತರ ಪ್ರತಿನಿಧಿಗಳ ಆಹ್ವಾಲುಗಳನ್ನು ಆಲಿಸುವ ಜೊತೆಗೆ ಕೆರೆಗೆ ಸಂಬಂಧಿಸಿದ ನಕ್ಷೆ, ಎಲ್ಲೆಗಳನ್ನು ಪರಿಶೀಲಿಸಿದ ತಾಲೂಕು ದಂಡಾಧಿಕಾರಿಗಳು ನಂತರ ಕೆರೆಯ ಒತ್ತುವರಿ ಹಾಗೂ ಅಚ್ಚು ಕಟ್ಟು ಪ್ರದೇಶವನ್ನು ವೀಕ್ಷಿಸಿದರು ಈ ಹಿಂದೆಯೆ ಕೆರೆಯ ಅಚ್ಚುಕಟ್ಟನ್ನು ಗುರ್ತಿಸಿ ಟ್ರಂಚ್ ನಿರ್ಮಿಸಿದ್ದರೂ ಸುತ್ತ ಮುತ್ತಲಿನ ರೈತರು ಟ್ರಂಚ್ನ ಕಾಲುವೆಯನ್ನು ದಾಟಿ ಕೆರೆಯ ಭಾಗದ ಒತ್ತುವರಿಯನ್ನು ಮಾಡಿಕೊಂಡಿರುವುದನ್ನು ಪತ್ತೆಹಚ್ಚಿದರಲ್ಲದೆ ಕೆರೆಯ ಅಂಗಳದಲ್ಲಿನ ಜಾಲಿ ಮರಗಳನ್ನು ಹಂಡಿಗನಾಳ ಗ್ರಾಮ ಪಂಚಾಯಿತಿಯವರಿಗೆ ಹರಾಜು ಪ್ರಕ್ರಿಯೆ ಮೂಲಕ ಕಡಿದು ಮಾರಾಟ ಮಾಡಲು ಸೂಚಿಸಿ ನಂತರ ಕೆರೆಯ ಅಂಗಳದಲ್ಲಿ ಜಾಲಿ ಮರಗಳ ಬದಲಿಗೆ ಪರಿಸರ ಸ್ನೇಹಿ ಸಸಿಗಳನ್ನು ನೆಟ್ಟು ಬೆಳೆಸಬೇಕೆಂದು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಹಂಡಿಗನಾಳ ಗ್ರಾಮ ಪಂಚಾಯಿತಿ ಸದಸ್ಯರದ ಜಯರಾಂ, ತ್ಯಾಗರಾಜ್, ರೈತ ಸಂಘದ ಅಧ್ಯಕ್ಷ ರವಿಪ್ರಕಾಶ್,ಜೆ.ವಿ.ವೆಂಕಟಸ್ವಾಮಿ, ರವಿಪ್ರಕಾಶ್, ಪ್ರತೀಶ್, ಮುರಳಿ ಮತ್ತಿತರರು ಉಪಸ್ಥಿತರಿದ್ದರು..