ಭಟ್ಕಳ: ಕೇವಲ ಗದ್ದೆ, ತೋಟ, ತರಕಾರಿಗಳನ್ನು ಬೆಳೆಯುವು ಮಾತ್ರ ಕೃಷಿಯಲ್ಲ, ನಾವು ಮಾಡುವ ಪ್ರತಿಯೊಂದು ಕಾರ್ಯವೂ ಕೂಡಾ ಕೃಷಿಯಾಗಿರಬೇಕು ಎಂದು ಕೃಷಿಕ ಸಮಾಜದ ಅಧ್ಯಕ್ಷ ಶ್ರೀಧರ ಹೆಬ್ಬಾರ್ ಹೇಳಿದರು.
ಅವರು ತೋಟಗಾರಿಕಾ ಇಲಾಖೆ, ಜಿಲ್ಲಾ ಪಂಚಾಯತ್ ಭಟ್ಕಳ ಇವುಗಳ ಸಂಯಕ್ತ ಆಶ್ರಯದಲ್ಲಿ ಸಮಗ್ರ ತೋಟಗಾರಿಕಾ ಅಭಿವೃದ್ಧಿ ಯೋಜನೆಯಡಿ ರೈತರಿಗೆ ತರಬೇತಿ, ಕೈತೋಟ ನಿರ್ಮಾಣ ಹಾಗೂ ನಿರ್ವಹಣೆ ಕುರಿತು ಇಲ್ಲಿನ ಭಟ್ಕಳ ಅರ್ಬನ್ ಬ್ಯಾಂಕ್ ಹಫಿಝ್ಕಾ ಹಾಲ್ನಲ್ಲಿ ಎರ್ಪಡಿಸಲಾಗಿದ್ದ ಒಂದು ದಿನದ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ನಾವು ಭೂಮಿ ತಾಯಿಯನ್ನು ಆರಾಧಿಸುವ ಬದಲು ಹಿಂಸಿಸಿ ಕೃಷಿ ಮಾಡುತ್ತಿದ್ದೇವೆ. ಆದುವೇ ಇಂದು ನಮಗೆ ವಿವಿಧ ಕಾಯಿಲೆಗಳು ಬರಲು ಕಾರಣವಾಗಿದೆ. ರಾಸಾಯನಿಕ ಇಲ್ಲದೇ ಕೃಷಿಯೇ ಇಲ್ಲ ಎನ್ನುವಷ್ಟರ ಮಟ್ಟಿಗೆ ನಾವದಕ್ಕೆ ಹೊಂದಿಕೊಂಡಿದ್ದೆವು. ಅದರ ದುಷ್ಪರಿಣಮವೇ ಇಂದು ನಾವು ಅನುಭವಿಸುತ್ತಿದ್ದೇವೆ ಎಂದ ಅವರು ಗೋವಿನ ಹೊರತಾಗಿ ಕೃಷಿ ಅಸಾಧ್ಯ. ಆದರೆ ಆಧುನಿಕ ಕೃಷಿಯನ್ನು ಮಾಡಿ ಕೈಸುಟ್ಟುಕೊಂಡ ನಾವು ಮತ್ತೆ ಸಾವಯವ ಕೃಷಿಯತ್ತ ಹೋಗಬೇಕಾಗಿದೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೃಷಿಕ ಸಮಾಜದ ಜಿಲ್ಲಾ ಪ್ರತಿನಿಧಿ ಕೇದಾರ ನಾರಾಯಣ ಕೊಲ್ಲೆ ತೋಟಗಾರಿಕಾ ಇಲಾಖೆಯಿಂದ ರೈತರಿಗೆ ಕೈತೋಟ ನಿರ್ಮಾಣ ಹಾಗೂ ನಿರ್ವಹಣಾ ಕಾರ್ಯಾಗಾರ ಎರ್ಪಡಿಸಿರುವುದು ಒಂದು ಉತ್ತಮ ಕಾರ್ಯವಾಗಿದ್ದು ಇದರ ಪ್ರಯೋಜನ ಪ್ರತಿಯೋರ್ವರೂ ಪಡೆಯಲಿ ಎಂದು ಕೃಷಿಕ ಸಮಾಜದ ಜಿಲ್ಲಾ ಪ್ರತಿನಿಧಿ ಕೇದಾರ ನಾರಾಯಣ ಕೊಲ್ಲೆ ಹೇಳಿದರು.
ಕಾರ್ಯಾಗಾರದಲ್ಲಿ ಮಹಿಳೆಯರೇ ಹೆಚ್ಚಿರುವುದು ಇನ್ನಷ್ಟು ಸಂತಸದ ವಿಷಯವಾಗಿದ್ದು ಕೃಷಿಯಲ್ಲಿ ಮಹಿಳೆಯರ ಪಾತ್ರ ಬಹು ಮುಖ್ಯವಾಗಿದ್ದು ಅವರಿಗೆ ಎಲ್ಲಾ ಕ್ಷೇತ್ರಗಳಂತೆ ಕೃಷಿ ಕ್ಷೇತ್ರದಲ್ಲಿಯೂ ಕೂಡಾ ಗೌರವವನ್ನು ಕೊಡಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಧಾಕೃಷ್ಣ ಭಟ್ಟ, ಪ್ರಭಾರ ಸಹಾಯಕ ಕೃಷಿ ಅಧಿಕಾರಿ ಜಿ.ಎನ್.ನಾಯ್ಕ, ಮಹಿಳಾ ಒಕ್ಕೂಟಗಳ ನಾಗರತ್ನಾ ಶೇಟ್, ತಾ.ಪಂ.ಸದಸ್ಯ ವಿಷ್ಣು ದೇವಡಿಗ ಮಾತನಾಡಿದರು. ಮಹಿಳಾ ಸಂಘದ ಅಧ್ಯಕ್ಷೆ ನಾಗರತ್ನಾ ಪೈ ಉಪಸ್ಥಿತರಿದ್ದರು.
ಆಗಮಿಸಿದ ಎಲ್ಲರಿಗೂ ತೋಟಗಾರಿಕಾ ಇಲಾಖೆಯಿಂದ ಕೈತೋಟ ನಿರ್ಮಾಣಕ್ಕಾಗಿ ತರಕಾರಿ ಬೀಜ ಮತ್ತು ಉಪಕರಣಗಳುಳ್ಳ ಕಿಟ್ ಒಂದನ್ನು ವಿತರಿಸಲಾಯಿತು.
ಕೃಷಿ ವಿಜ್ಞಾನಿ ವಿಜೇಂದ್ರ ಹೆಗಡೆ ಕೈತೋಟ ನಿರ್ಮಾಣ ಹಾಗೂ ನಿರ್ವಹಣೆ ಕುರಿತು ಪ್ರಾತ್ಯಕ್ಷತೆಯ ಮೂಲಕ ಕಾರ್ಯಾಗಾರವನ್ನು ನಡೆಸಿಕೊಟ್ಟರು. ಪ್ರಾಸ್ತಾವಿಕವಾಗಿ ಮಾತನಾಡಿದ ಸಹಾಯಕ ತೋಟಗಾರಿಕಾ ಅಧಿಕಾರಿ ಶ್ವೇತಾ ಕರ್ಕಿ ತೊಟಗಾರಿಕಾ ಇಲಾಖೆಯಲ್ಲಿನ ಯೋಜನೆಗಳನ್ನು ವಿವರಿಸಿದರು. ತೋಟಗಾರಿಕಾ ಅಧಿಕಾರಿ ಸಂಧ್ಯಾ ಭಟ್ಟ ಪ್ರಾರ್ಥಿಸಿ, ಸ್ವಾಗತಿಸಿದರು.