ರೋಣ ಜುಲೈ 15. ನಿರಂತರ ಪರಿಶ್ರಮ ಮತ್ತು ಸಾಧನೆಯಿಂದ ಜೀವನದಲ್ಲಿ ಶ್ರೇಯಸ್ಸು ಕಾಣಲು ಸಾಧ್ಯ. ಕರ್ತವ್ಯದ ಕಾಲು ದಾರಿ ಕೀರ್ತಿಯ ಹೆದ್ದಾರಿ. ಕಾಯಕ ಮತ್ತು ದಾಸೋಹದ ಮೂಲಕ ಮಠಗಳು ಅಭಿವೃದ್ಧಿಯಾಗಲು ಸಾಧ್ಯವಾಗುತ್ತದೆ. ಕ್ರಿಯಾಶೀಲ ಬದುಕು ಜೀವನ ಉನ್ನತಿಗೆ ಸೋಪಾನವೆಂದು ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಜಗದ್ಗುರು ಡಾ|| ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯಪಟ್ಟರು.
ಅವರು ತಾಲೂಕಿನ ಅಬ್ಬಿಗೇರಿ ಹಿರೇಮಠದಲ್ಲಿ
ನೂತನವಾಗಿ ನಿರ್ಮಾಣಗೊಂಡ ಶ್ರೀ ಜಗದ್ಗುರು ರೇಣುಕಾಚಾರ್ಯ ಸಾಂಸ್ಕøತಿಕ ಭವನದ ಉದ್ಘಾಟನೆ, ಮಾತೋಶ್ರೀ ಬಸಮ್ಮ ತಾಯಿ ಪ್ರಸಾದ ನಿಲಯ ಉದ್ಘಾಟನೆ ಮತ್ತು ಲಿಂ. ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮಿಗಳವರ 48ನೇ ಪುಣ್ಯಾರಾಧನಾ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಮಾನವ ಜೀವನ ವಿಕಾಸಕ್ಕೆ ಧರ್ಮ ಪ್ರಜ್ಞೆ ಅವಶ್ಯಕ. ಅರಿವು ಆಚಾರಗಳ ಪಾಲನೆಯಿಂದ ಬದುಕಿನಲ್ಲಿ ಸುಖ ಶಾಂತಿಯ ಬದುಕು ರೂಪಿತಗೊಳ್ಳಲು ಸಾಧ್ಯ. ಹುಟ್ಟು ಸಹಜವಾದರೂ ಮೃತ್ಯು ನಿಶ್ಚಿತ. ಹುಟ್ಟು ಮತ್ತು ಮೃತ್ಯುವಿನ ಮಧ್ಯೆ ಇರುವ ಬದುಕು ಸಮೃದ್ಧಗೊಳ್ಳಬೇಕೆಂಬುದು ಎಲ್ಲರ ಆಶಯ. ಶ್ರೀಗುರುವಿನ ಜ್ಞಾನ ಬೋಧಾಮೃತದಿಂದ ಜೀವನ ಉಜ್ವಲಗೊಳ್ಳಲು ಸಹಕಾರಿಯಾಗುತ್ತದೆ. ವೀರಶೈವ ಧರ್ಮದಲ್ಲಿ ಜ್ಞಾನ ಕ್ರಿಯಾತ್ಮಕ ಬದುಕಿನೊಂದಿಗೆ ಸಾಮಾಜಿಕ ಸಂವೇದನಾಶೀಲನಾಗಿ ಬಾಳಲು ಸದಾ ಪ್ರೇರೆಪಣೆಯನ್ನು ನೀಡಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಕಾಯಕವೇ ಕಳಾಚೈತನ್ಯವೆಂದು ಸಾರಿದರೆ ಶರಣರು ಕಾಯಕವೇ ಕೈಲಾಸವೆಂದು ಸಾರಿದ್ದಾರೆ. ಮಠದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಸಾಂಸ್ಕøತಿಕ ಭವನ ಮತ್ತು ಮಾತೋಶ್ರೀ ಬಸಮ್ಮ ತಾಯಿ ಪ್ರಸಾದ ನಿಲಯ ನಿರ್ಮಿಸಿ ಉದ್ಘಾಟಿಸಿರುವುದು ಸೋಮಶೇಖರ ಶಿವಾಚಾರ್ಯರ ಪರಿಶ್ರಮ ಸಾಧನೆಗೆ ಸಾಕ್ಷಿಯಾಗಿದೆ. ಲಿಂ. ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮಿಗಳವರ ಪುಣ್ಯ ಸ್ಮರಣೋತ್ಸವ ಪ್ರತಿ ವರುಷ ಆಚರಿಸಿಕೊಂಡು ಬರುತ್ತಿರುವುದು ಅವರ ಗುರುಭಕ್ತಿ ಧರ್ಮ ನಿಷ್ಠೆಗೆ ಸಾಕ್ಷಿಯಾಗಿದೆ ಭವಿಷ್ಯತ್ತಿನ ದಿನಗಳಲ್ಲಿ ಹಿರೇಮಠ ಮತ್ತಷ್ಟು ಪ್ರಗತಿ ಹೊಂದಿ ಭಕ್ತರ ಬಾಳಿಗೆ ಬೆಳಕು ಬೀರಲೆಂದು ಬಯಸಿದ ಶ್ರೀ ರಂಭಾಪುರಿ ಜಗದ್ಗುರುಗಳು ಶ್ರೀಗಳವರಿಗೆ ರೇಶ್ಮೆ ಮಡಿ ಫಲಪುಷ್ಪವನ್ನಿತ್ತು ಶುಭ ಹಾರೈಸಿದರು.
ಗದಗ ಜಿ.ಪಂ. ಉಪಾಧ್ಯಕ್ಷೆ ರೂಪಾ ಟಿ.ಆರ್.ಮಧುಸೂದನ, ತಾ.ಪಂ. ಸದಸ್ಯೆ ಶಕುಂತಲಾ ನಿಡಗುಂದಿ, ಗ್ರಾ.ಪಂ.ಅಧ್ಯಕ್ಷ ಯಲ್ಲಪ್ಪ ಹಿರೇಮನಿ, ಉಪಾಧ್ಯಕ್ಷೆ ವಿಜಯಲಕ್ಷ್ಮಿ ದ್ವಾಸಲ ಮೊದಲಾದ ಗಣ್ಯರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಸಮಾರಂಭದಲ್ಲಿ ಸೂಡಿ ಜುಕ್ತಿ ಹಿರೇಮಠದ ಡಾ|| ಕೊಟ್ಟೂರ ಬಸವೇಶ್ವರ ಶಿವಾಚಾರ್ಯರು, ನರೇಗಲ್ಲ-ಸವದತ್ತಿಯ ಮಲ್ಲಿಕಾರ್ಜುನ ಶಿವಾಚಾರ್ಯರು, ಸುಳ್ಳದ ಶಿವಸಿದ್ಧರಾಮೇಶ್ವರ ಶಿವಾಚಾರ್ಯರು, ಸಂಗೊಳ್ಳಿ ಗುರುಲಿಂಗ ಶಿವಾಚಾರ್ಯರು ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು.
ಸಮಾರಂಭದ ಸಮ್ಮುಖವನ್ನು ಮುಕ್ತಿಮಂದಿರದ ವಿಮಲ ರೇಣುಕ ವೀರಮುಕ್ತಿಮುನಿ ಶಿವಾಚಾರ್ಯರು ವಹಿಸಿದ್ದರು. ನೇತೃತ್ವವನ್ನು ಮಠಾಧ್ಯಕ್ಷರಾದ ಸೋಮಶೇಖರ ಶಿವಾಚಾರ್ಯರು ವಹಿಸಿದ್ದರು. ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯರು ಸಮಾರಂಭದ ಸಂಚಾಲಕತ್ವ ವಹಿಸಿ ಕಾರ್ಯ ನಿರ್ವಹಿಸಿದರು.
ರೋಣ ಕ್ಷೇತ್ರದ ಶಾಸಕ ಜಿ.ಎಸ್.ಪಾಟೀಲ ಸಮಾರಂಭದ ಅಧ್ಯಕ್ಷತೆ ವಹಿಸಿ ಧರ್ಮ ಸಂಸ್ಕøತಿ ಮತ್ತು ಮಠಗಳ ಪಾತ್ರ ಕುರಿತು ತಮ್ಮ ಅಭಿಮಾನದ ನುಡಿಗಳನ್ನು ಸಲ್ಲಿಸಿದರು. ಹಲವಾರು ಗಣ್ಯರಿಗೆ-ದಾನಿಗಳಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗೌರವ ಗುರುರಕ್ಷೆ ನೀಡಿ ಆಶೀರ್ವದಿಸಿದರು.
ಇದೇ ಸಂದರ್ಭದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಸಾಂಸ್ಕøತಿಕ ಭವನವನ್ನು ಶಾಸಕ ಜಿ.ಎಸ್.ಪಾಟೀಲ ಉದ್ಘಾಟಿಸಿದರು. ಮಾತೋಶ್ರೀ ಬಸಮ್ಮ ತಾಯಿ ಪ್ರಸಾದ ನಿಲಯವನ್ನು ಶ್ರೀ ರಂಭಾಪುರಿ ಜಗದ್ಗುರುಗಳು ಉದ್ಘಾಟಿಸಿದರು.
ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲದ ಸಾಧಕರಿಂದ ವೇದಘೋಷ, ಡಾ|| ಆರ್.ಕೆ.ಗಚ್ಚಿನಮಠ ಇವರಿಂದ ಸ್ವಾಗತ ಜರುಗಿತು. ಅಂದಪ್ಪ ವೀರಾಪುರ ನಿರೂಪಣೆ ಮಾಡಿದರು. ಬಸವರಾಜ ಹನುಮನಾಳ ಸಂಗೀತ ಸೇವೆ ಸಲ್ಲಿಸಿದರು.