ಭಟ್ಕಳ: ಇಲ್ಲಿನ ಶಿರಾಲಿ ರಾಷ್ಟ್ರೀಯ ಹೆದ್ದಾರಿಯ 45 ಮೀ. ರಸ್ತೆ ಅಗಲೀಕರಣದ ವಿಚಾರವಾಗಿ ಶಿರಾಲಿ ಗ್ರಾಮ ಪಂಚಾಯತ್ ಸದಸ್ಯರುಗಳ ನಿಯೋಗವೂ 3ನೇ ಬಾರಿ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ 45 ಮೀ.ಗೆ ಅಗಲೀಕರಿಸುವಂತೆ ಮನವಿಯನ್ನು ಸಲ್ಲಿಸಲಾಯಿತು.
ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಎಸ್.ಎಸ್. ನಕುಲ ' ಶಿರಾಲಿಯಲ್ಲಿ 10 ರೈತರ ಭೂಮಿ ಕಳೆದುಕೊಂಡಿದ್ದು, 10 ರೈತರ ಪೈಕಿ 8 ಮಂದಿ 45 ಮೀ. ರಸ್ತೆ ಅಗಲೀಕಣಕ್ಕೆ ಒಪ್ಪಿಗೆ ನೀಡಿದ್ದು, ಇನ್ನುಳಿದ ಇಬ್ಬರು ರೈತರು (ಭೂ ಮಾಲೀಕರು) ಒಪ್ಪಿಗೆ ನೀಡಿದರೆ 45 ಮೀ. ರಸ್ತೆ ಅಗಲೀಕಣಕ್ಕೆ ನಾನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ಗ್ರಾಮ ಪಂಚಾಯತ ಸದಸ್ಯರ ನಿಯೋಗಕ್ಕೆ ತಿಳಿಸಿದರು.
ಈ ಬಗ್ಗೆ ಸ್ಥಳಿಯ ಸಾಮಾಜಿಕ ಹೋರಾಟಗಾರ,ಪತ್ರಕರ್ತ ಉಲ್ಲಾಸ ಶ್ಯಾನಭಾಗ ಜಿಲ್ಲಾಧಿಕಾರಿಗಳಿಗೆ ಕೇವಲ ಎರಡು ಭೂಮಾಲೀಕರಿಂದ ರಾಷ್ಟ್ರೀಯ ಹೆದ್ದಾರಿಯ ಅಗಲೀಕರಣಕ್ಕೆ ತೊಂದರೆ ಉಂಟಾಗಿದ್ದು, ಅವರಿಗೆ ನಾವು ಶಿರಾಲಿ ಜನತೆ ಹಾಗೂ ಪಂಚಾಯತ ವತಿಯಿಂದ ಇನ್ನೊಮ್ಮೆ ಅವರಿಗೆ ಮನವೊಲಿಸುವ ಪ್ರಯತ್ನಿಸಲಾಗುವುದು ಎಂದು ಮನವಿ ಮಾಡಿಕೊಂಡರು. ಈಗಾಗಲೇ ಅವಧಿ ಮೀರಿರುವುದರಿಂದ ತಕ್ಷಣವೇ ಎರಡು ಭೂಮಾಲೀಕರ ಒಪ್ಪಿಗೆ ಪಡೆಯಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ನಂತರದಲ್ಲಿ ಗ್ರಾ.ಪಂಚಾಯತ ಪರವಾಗಿ ಮೋಹನ ದೇವಾಡಿಗ 'ಶಿರಾಲಿಯಲ್ಲಿ ನಡೆಯುವ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಯ ನೀಲನಕ್ಷೆಯನ್ನು ತಕ್ಷಣ ಗ್ರಾಮಪಂಚಾಯತಗೆ ತಲುಪಿಸುವಂತೆ ಮನವಿ ಮಾಡಿಕೊಂಡರು.
ಈ ಸಂಧರ್ಭದಲ್ಲಿ ಗ್ರಾ.ಪಂ.ಸದಸ್ಯ ನಾಗಪ್ಪ ನಾಯ್ಕ, ಮಂಜುನಾಥ ನಾಯ್ಕ,ಕೇಶವ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.