ಕಾರವಾರ: ವಿವಿಧ ವಲಯಗಳಿಗೆ ಸಂಬಂಧಪಟ್ಟಂತೆ ಒಟ್ಟು 5131. 18 ಕೋಟಿ ರೂ. ಮೊತ್ತದ ಸಂಭವನೀಯ ಸಾಲ ಯೋಜನೆ ವರದಿಯನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ರೋಶನ್ ಅವರು ಶುಕ್ರವಾರ ಬಿಡುಗಡೆ ಮಾಡಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ 2019-20ನೇ ಸಾಲಿನ ಸಂಭವನೀಯ ಸಾಲ ಯೋಜನೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಅರ್ಹ ಫಲಾನುಭವಿಗಳಿಗೆ ಸಾಲ ತಲುಪಲು ಹಾಗೂ ಸರಕಾರದ ಉದ್ದೇಶಿತ ಗುರಿಯನ್ನು ಮುಟ್ಟಲು ಎಲ್ಲಾ ಇಲಾಖೆಗಳ ಸಹಕಾರದೊಂದಿಗೆ ಪ್ರತಿ ಬ್ಯಾಂಕ ಶಾಖೆ, ವಿವಿಧ ಸಾಲ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಬೇಕು . ವಿವಿಧ ಇಲಾಖೆಗಳಲ್ಲಿ ಲಭ್ಯವಿರುವ ಯೋಜನೆಗಳ ಅನುಷ್ಟಾನಕ್ಕೆ ಫಲಾನುಭವಿಗಳಿಗೆ ಸೂಕ್ತ ಸಮಯದಲ್ಲಿ ಸಾಲ ಸೌಲಭ್ಯ ದೊರೆಯುವಂತೆ ನೋಡಿಕೊಳ್ಳಬೇಕು. ಬ್ಯಾಂಕ್ಗಳು ಸಾಲ ನೀಡುವ ಪ್ರಕ್ರಿಯೆಯನ್ನು ಸರಳಗೊಳಿಸಿ, ಆದಷ್ಟು ಬೇಗನೆ ಸಾಲ ಸೌಲಭ್ಯ ಅರ್ಹರಿಗೆ ದೊರೆಯುವುದನ್ನು ಖಾತ್ರಿಪಡಿಸಬೇಕು ಎಂದು ಹೇಳಿದರು.
ವಿವಿಧ ಇಲಾಖೆಗಳ ಸಾಲ ಯೋಜನೆಯಡಿ ಸಾಲಕ್ಕೆ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಂದ ಸಾಕಷ್ಟು ಪ್ರಮಾಣದಲ್ಲಿ ವಿವಿಧ ಬ್ಯಾಂಕಗಳ ವಿರುದ್ದ ದೂರುಗಳು ಬಂದಿದ್ದು ಫಲಾನುಭವಿಗಳಿಂದ ಸೂಕ್ತ ದಾಖಲೆಗಳನ್ನು ಪಡೆದು ಸಾಲವನ್ನು ಬಿಡುಗಡೆ ಮಾಡಿ ಎಂದು ತಿಳಿಸಿದರು.
2019-20ನೇ ಸಾಲಿನ ಉತ್ತರ ಕನ್ನಡ ಜಿಲ್ಲಾ ಸಂಭವನೀಯ ಸಾಲ ಯೋಜನೆಯಲ್ಲಿ ಆದ್ಯತಾ ವಲಯಕ್ಕೆ 5131.18 ಕೋಟಿ ರೂ, ಹಾಗೂ ಇತರ ವಲಯಕ್ಕೆ 358 ಕೋಟಿ ರೂ. ನಿಗದಿಪಡಿಸಲಾಗಿದೆ. ಆದ್ಯತಾ ವಲಯದಲ್ಲಿ ಬಹುಮುಖ್ಯವಾಗಿ ಕೃಷಿ ಕ್ಷೇತ್ರಕ್ಕೆ 1881.06 ಕೋಟಿ ರೂ, ಹಾಗೂ ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೆಗಳಿಗೆ 1567.32 ಕೋಟಿ ರೂ. ನಿಗದಿಪಡಿಸಲಾಗಿದೆ. ಗೃಹ ಸಾಲ 678.30 ಕೋಟಿ, ಶೈಕ್ಷಣಿಕ ಸಾಲ 200 ಕೋಟಿ, ಮರುಬಳಕೆ ಶಕ್ತಿಗಳ ಸಾಲ 279 ಕೋಟಿ ರೂ ಮತ್ತು ಆಮದು ಮತ್ತು ರಫ್ತು ಸಾಲಕ್ಕಾಗಿ 255 ಕೋಟಿ ರೂ. ಗುರಿ ನಿಗದಿಪಡಿಸಲಾಗಿದೆ. ಪ್ರಸ್ತುತ ಹಣಕಾಸು ಸಾಲಿನ ವಾರ್ಷಿಕ ಸಾಲ ಯೋಜನೆ ಮೊತ್ತ 2018-19 ನೇ ಸಾಲಿಗಿಂತ 654 ಕೋಟಿ ರೂ. ಅಧಿಕವಾಗಿದೆ ಎಂದು ನಬಾರ್ಡ್ ಕಾರವಾರದ ಡಿಡಿಎಂ ಎಲ್.ಯೋಗೇಶ್ ಹೇಳಿದರು.
ಬೆಂಗಳೂರು ಆರ್.ಬಿ.ಐ ಬ್ಯಾಂಕಿನ ಎಜಿಎಮ್ ಪಟ್ನಾಯಕ, ಉ.ಕ ಎಲ್ಡಿಸಿಎಮ್ ಪಿ.ಎಮ್.ಪಿಂಜಾರ ಜಿಲ್ಲಾ ಪಂಚಾಯತ್ನ ಶ್ಯಾಮಲಾ ಮಹಾಲೆ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.