ಭಟ್ಕಳ: ಅಪ್ರಾಪ್ತ ಬಾಲಕಿಯನ್ನು ಮದುವೆಯಾಗುತ್ತೆನೆಂದು ನಂಬಿಸಿ ಕಳೆದ ಒಂದು ವರ್ಷದಿಂದ ನಿರಂತರ ಅತ್ಯಾಚಾರ ನಡೆಸಿ ಗರ್ಭಿಣಿಯಾಗಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು ಈ ಬಗ್ಗೆ ಯುವಕನ ಮೇಲೆ ಮುರ್ಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಲ್ಲಿನ ಮುರ್ಡೇಶ್ವರ ವ್ಯಾಪ್ತಿಯ ಉತ್ತರಕೊಪ್ಪದ ಕಾಮೇಶ್ವರ ಗ್ರಾಮದ ಸಂತೋಷ ಎಂಕ ಮರಾಠೆ(23) ಅತ್ಯಾಚಾರ ನಡೆಸಿದ ಆರೋಪಿಯಾಗಿದ್ದಾನೆ. ಈತನು ಅಪ್ರಾಪ್ತ ಬಾಲಕಿಯ ಜೊತೆಗೆ ಮದುವೆಯಾಗುತ್ತೇನೆಂದು ಹೇಳಿ ಆಕೆಯ ಜೊತೆಗೆ ಲೈಂಗಿಕ ಸಂಪರ್ಕ ಬೆಳೆಸಿ ಕಳೆದ ಒಂದು ವರ್ಷದ ಹಿಂದೆ ಬಾಲಕಿ ಮನೆಯ ಹಿಂದಿನ ಕಾಡಿಗೆ ಕರೆದೊಯ್ದು ಅತ್ಯಾಚಾರ ಎಸೆಗಿದ್ದಾನೆಂದು ತಿಳಿದು ಬಂದಿದೆ. ನಂತರ ಮದುವೆ ಆಗುವುದಾಗಿ ಪುಸಲಾಯಿಸಿ ಕಳೆದ ಒಂದು ವರ್ಷಗಳಿಂದ ನಿರಂತರ ಅತ್ಯಾಚಾರ ಎಸಗುತ್ತಿದ್ದ ಎನ್ನಲಾಗಿದೆ. ಈಗ ಬಾಲಕಿ 6 ತಿಂಗಳ ಗರ್ಭಿಣಿಯಾಗಿದ್ದು ಪ್ರಕರಣ ಬೆಳಕಿಗೆ ಬಂದಿದೆ. ಈ ಕುರಿತು ಬಾಲಕಿ ತಾಯಿ ಮುರ್ಡೇಶ್ವರ ಗ್ರಾಮೀಣ ಠಾಣೆಯಲ್ಲಿ ದೂರು ನೀಡಿದ್ದಾರೆ.
ಪ್ರಕರಣವನ್ನು ಡಿವೈಎಸ್ಪಿ ವೆಲೈಂಟೆನ್ ಡಿಸೊಜಾ ನೇತೃತ್ವದಲ್ಲಿ ಮುರ್ಡೇಶ್ವರ ಪಿಎಸ್ಐ ನಾಗವ್ವ ಎಂ. ಪಾಟೀಲ್ ದಾಖಲಿಸಿಕೊಂಡಿದ್ದು ಆರೋಪಿ ನಾಪತ್ತೆಯಾಗಿದ್ದು ಆತನ ಪತ್ತೆಗಾಗಿ ಬಲೆ ಬೀಸಿದ್ದಾರೆ.