ಜೈಪುರ: ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಉತ್ತಮ ಪ್ರದರ್ಶನ ನೀಡಿರುವ ಕಾಂಗ್ರೆಸ್ ರಾಜಸ್ಥಾನದಲ್ಲೂ ತನ್ನ ಅಸ್ತಿತ್ವವನ್ನು ಮತ್ತೊಮ್ಮೆ ಸಾಬೀತುಪಡಿಸುತ್ತಿದ್ದು ಇಲ್ಲಿ ನಡೆದ ಜಿಲ್ಲಾ ಪರಿಷತ್ ಚುನಾವಣೆಯಲ್ಲಿ ಎಲ್ಲಾ ನಾಲ್ಕು ಸ್ಥಾನಗಳನ್ನು ಬಿಜೆಪಿಯಿಂದ ಕಿತ್ತುಕೊಳ್ಳುವ ಮೂಲಕ ಜಯಭೇರಿ ಬಾರಿಸಿದೆ.
ಅಷ್ಟು ಮಾತ್ರವಲ್ಲದೆ, 27 ಪಂಚಾಯತ್ ಸಮಿತಿ ಸ್ಥಾನಗಳ ಪೈಕಿ 16 ಮತ್ತು ಆರು ನಗರಪಾಲಿಕೆ ಸ್ಥಾನಗಳನ್ನೂ ಕಾಂಗ್ರೆಸ್ ಗೆಲ್ಲುವ ಮೂಲಕ ಮರುಜೀವ ಪಡೆದುಕೊಂಡಿದೆ. ರಾಜ್ಯ ಚುನಾವಣಾ ಆಯೋಗದ ಪ್ರಕಟಣೆಯಂತೆ ರಾಜಸ್ಥಾನದ ಸ್ಥಳೀಯಾಡಳಿತ ಸ್ಥಾನಗಳಿಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ತೀವ್ರ ಮುಖಭಂಗ ಅನುಭವಿಸಿದ್ದು ತನ್ನ ಹಿಡಿತದಲ್ಲಿ ಎಲ್ಲಾ ನಾಲ್ಕು ಜಿಲ್ಲಾ ಪರಿಷತ್ ಸ್ಥಾನಗಳನ್ನು ಕಳೆದುಕೊಂಡಿದೆ. ಆಡಳಿತಾರೂಡ ಬಿಜೆಪಿ ಕೇವಲ ಹತ್ತು ಪಂಚಾಯತ್ ಸಮಿತಿ ಸ್ಥಾನಗಳಲ್ಲಿ ಜಯ ಗಳಿಸಲು ಸಫಲವಾಗಿದ್ದು ಏಳು ನಗರಪಾಲಿಕಾ ಸ್ಥಾನಗಳನ್ನು ಗೆದ್ದುಕೊಂಡಿದೆ. 19 ಜಿಲ್ಲೆಗಳ 27 ಪಂಚಾಯತ್ ಸಮಿತಿಗಳಿಗೆ, 12 ಜಿಲ್ಲೆಗಳ 14 ನಗರಪಾಲಿಕೆಗಳು ಮತ್ತು ನಾಲ್ಕು ಜಿಲ್ಲಾ ಪರಿಷತ್ಗಳಿಗೆ ಡಿಸೆಂಬರ್ 17ರಂದು ಉಪಚುನಾವಣೆ ನಡೆದಿತ್ತು.
ಪಕ್ಷದ ಗೆಲುವಿನ ನಂತರ ಮಾಧ್ಯಮಕ್ಕೆ ಹೇಳಿಕೆ ನೀಡಿದ ಕಾಂಗ್ರೆಸ್ ರಾಜ್ಯಾಧ್ಯಕ್ಷ ಸಚಿನ್ ಪೈಲಟ್, ಈ ಫಲಿತಾಂಶ ರಾಜಸ್ಥಾನದಲ್ಲಿ ಬಿಜೆಪಿಯ ಶಕೆ ಅಂತ್ಯವಾಗಲಿರುವ ಸೂಚನೆಯಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಕಾಂಗ್ರೆಸ್ ಜನಸಾಮಾನ್ಯರ ಭಾವನೆಗಳನ್ನು ವ್ಯಕ್ತಪಡಿಸುತ್ತಲೇ ಬಂದಿದೆ ಮತ್ತು ಜನರಿಗೆ ಕಾಂಗ್ರೆಸ್ ಮೇಲೆ ನಂಬಿಕೆಯಿದೆ ಎಂದು ತಿಳಿಸಿದ್ದಾರೆ.
ಮುಂದೆ ಅಲ್ವಾರ್, ಮಂಡಲ್ಘಡ್ ಮತ್ತು ಅಜ್ಮೇರ್ನ ಲೋಕಸಭಾ ಸ್ಥಾನಗಳಿಗೆ ನಡೆಯಲಿರುವ ಉಪಚುನಾವಣೆಯಲ್ಲೂ ಕಾಂಗ್ರೆಸ್ ಜಯಗಳಿಸಲಿದೆ ಎಂದು ಪೈಲಟ್ ಭವಿಷ್ಯ ನುಡಿದಿದ್ದಾರೆ. ಬಿಜೆಪಿ ಇಬ್ಬರು ಸಂಸದರು ಮತ್ತು ಒಬ್ಬ ಶಾಸಕ ಸಾವನ್ನಪ್ಪಿದ ಪರಿಣಾಮವಾಗಿ ಈ ಮೂರು ಸ್ಥಾನಗಳಲ್ಲಿ ಉಪಚುನಾವಣೆ ನಡೆಸುವುದು ಅನಿವಾರ್ಯವಾಗಿದೆ.
ಪೌರಾಡಳಿತ ಉಪ ಚುನಾವಣೆಯ ಫಲಿತಾಂಶ ಬಿಜೆಪಿಗೆ ದೊಡ್ಡ ಆಘಾತ ನೀಡಿದೆ. ಮುಖ್ಯವಾಗಿ ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೆಯವರ ಮಗ ದುಶ್ಯಂತ್ ಸಿಂಗ್ ಹಿಡಿತದಲ್ಲಿದ್ದ ಬರನ್ ಜಿಲ್ಲೆಯ ಎರಡು ನಗರಪಾಲಿಕೆಗಳು ಕೂಡಾ ಕೈತಪ್ಪಿರುವುದು ಬಿಜೆಪಿಗೆ ಮುಜುಗರ ಉಂಟುಮಾಡಿದೆ. ಈ ಸೋಲಿಗೆ ಪ್ರತಿಕ್ರಿಯಿಸಿರುವ ರಾಜ್ಯ ಬಿಜೆಪಿ ವಕ್ತಾರ ಆನಂದ್ ಶರ್ಮಾ, ಫಲಿತಾಂಶ ಬಿಜೆಪಿ ಪಾಲಿಗೆ ಉತ್ತಮವಾಗಿದ್ದು ಈ ಹಿಂದೆ ಕಾಂಗ್ರೆಸ್ ಅಧೀನದಲ್ಲಿದ್ದ ಸ್ಥಾನಗಳನ್ನು ಬಿಜೆಪಿ ಕಸಿದುಕೊಂಡಿದೆ ಎಂದು ತಿಳಿಸಿದ್ದಾರೆ. ಆಗಸ್ಟ್ನಲ್ಲಿ ನಡೆದ ನಗರ ಸ್ಥಳೀಯಾಡಳಿತ ಮತ್ತು ಪಂಚಾಯತ್ ರಾಜ್ ಉಪಚುನಾವಣೆಯಲ್ಲಿ 37 ಸ್ಥಾನಗಳ ಪೈಕಿ ಕಾಂಗ್ರೆಸ್ 19ರಲ್ಲಿ ಜಯ ಗಳಿಸಿತ್ತು. ಬಿಜೆಪಿ ಹತ್ತು ಸ್ಥಾನಗಳಿಗೆ ತೃಪ್ತಿಪಟ್ಟಿತ್ತು.