ಸ್ವಾತಂತ್ರ್ಯೋತ್ಸದ ಪೂರ್ವಭಾವಿ ಸಭೆ:ಪ್ಲಾಸ್ಟಿಕ್ ಧ್ವಜದ ಬಳಕೆಗೆ ನಿಷೇಧ
ಭಟ್ಕಳ: ಸ್ವಾತಂತ್ರ್ಯೋತ್ಸವ ಹಬ್ಬವೂ ಜಾತಿ ಭೇದವಿಲ್ಲದ ಎಲ್ಲರ ನಾಗರಿಕರ ಹಬ್ಬವಾಗಿದ್ದು, ಸಂಭ್ರಮದಿಂದ ಹಬ್ವನ್ನು ಸುಂದರವಾಗಿ ಆಚರಿಸಬೇಕು ಎಂದು ಭಟ್ಕಳ ಸಹಾಯಕ ಆಯುಕ್ತ ಸಾಜಿದ್ ಅಹ್ಮದ್ ಮುಲ್ಲಾ ಹೇಳಿದರು.
ಅವರು ಸೋಮವಾರದಂದು ಇಲ್ಲಿನ ತಹಸೀಲ್ದಾರ ಕಛೇರಿಯಲ್ಲಿ ನಡೆದ ಅಗಸ್ಟ 15 ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ತಾಲೂಕಿನ ಎಲ್ಲಾ ಕಛೇರಿಯೊಳಗೆ ಮತ್ತು ಆವರಣ ಸೇರಿದಂತೆ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿರಿಸಿಕೊಳ್ಳಬೇಕು. ಕಛೇರಿಯ ಅಧಿಕಾರಿಗಳು ಸಿಬ್ಬಂದಿಗಳು ಸ್ವಚ್ಛತೆಯ ಬಗ್ಗೆ ಹೆಚ್ಚಿನ ಗಮನ ನೀಡಬೇಕು. ವಿಶೇಷ ದಿನವಾದ ಅಗಸ್ಟ 15ರಂದು ಆಯಾ ತಾಲೂಕಾ ವಿವಿಧ ಇಲಾಖೆ ಕಛೇರಿಯಲ್ಲಿ ಕಟ್ಟುನಿಟ್ಟಾಗಿ ಧ್ವಜಾರೋಹಣ ನೆರವೇರಿಸಬೇಕು ಹಾಗೂ ಅಂದು ಕಛೇರಿಯ ಅಧಿಕಾರಿಗಳು ಸಿಬ್ಬಂದಿಗಳು ಉಪಸ್ಥಿತರಿದ್ದು ಯಾವೊಬ್ಬರು ಗೈರಾಗದೇ ಆಚರಿಸಬೇಕು. ಅನಿವಾರ್ಯ ಕಾರಣವಿದ್ದರೆ ಮೊದಲೇ ರಜೆಯ ಬಗ್ಗೆ ಇಲಾಖೆ ಮೇಲಾಧಿಕಾರಿಗಳಿಗೆ ಮಾಹಿತಿ ತಿಳಿಸಬೇಕು. ಪ್ಲಾಸ್ಟಿಕ್ ಧ್ವಜದ ಬಳಕೆ ಕಡಿಮೆ ಆಗುವಂತೆ ಗಮನ ಹರಿಸಬೇಕು ಹಾಗೂ ಅಗಸ್ಟ 14 ಮತ್ತು 15 ರಂದು ಎಲ್ಲಾ ಇಲಾಖೆ ಕಛೇರಿಗಳನ್ನು ದೀಪಾಲಂಕಾರದಿಂದ ಶೃಂಗರಿಸಬೇಕೆಂದು ತಿಳಿಸಿದರು.
ಸಭೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದು ಸಹಾಯಕ ಆಯುಕ್ತರ ಸೂಚನೆಯನ್ನು ಪಡೆದುಕೊಂಡರು.
ಈ ಸಂದರ್ಭದಲ್ಲಿ ಇಲ್ಲಿನ ತಾಲೂಕಾ ಕ್ರೀಡಾಂಗಣದಲ್ಲಿ ನಡೆಯಲಿರುವ ಸ್ವಾತಂತ್ರೋತ್ಸವದ ಪೂರ್ವ ತಯಾರಿಯನ್ನು ತಹಸೀಲ್ದಾರ್ ವಿ.ಎನ್.ಬಾಡಕರ್ ಅವರು ಆಯಾ ಇಲಾಖೆಗೆ ಜವಾಬ್ದಾರಿಯನ್ನು ಸೂಚಿಸಿದರು.
ಸಭೆಯಲ್ಲಿ ಭಟ್ಕಳ ಸಿಪಿಐ ಕೆ.ಎಲ್.ಗಣೇಶ, ತಾ.ಕಾ.ನಿರ್ವಹಣಾಧಿಕಾರಿ ಸಿ.ಟಿ.ನಾಯ್ಕ, ಕ್ಷೇತ್ರ ಶಿಕ್ಷಣಾಧಿಕಾರಿ ಎಮ್.ಆರ್.ಮುಂಜಿ, ತಂಜೀಂ ಉಪಾಧ್ಯಕ್ಷ ಅಲ್ತಾಪ್ ಖರೂರಿ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಮುಖ್ಯಸ್ಥರು, ಶಾಲಾ-ಕಾಲೇಜು ಮುಖ್ಯಸ್ಥರು ಉಪಸ್ಥಿತರಿದ್ದರು