ಕಾರವಾರ: ವಿಕಲ ಚೇತನರಿಗೆ ಸರಕಾರವು ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅವರ ಅಭಿವೃದ್ದಿಗಾಗಿ ಬಹಳಷ್ಟು ಶ್ರಮಿಸುತ್ತಿದೆ. ಅವರಿಗೆ ಕೇವಲ ಸರಕಾರದ ಮಾತ್ರವಲ್ಲ ಸಂಘ ಸಂಸ್ಥೆಗಳ ಹಾಗೂ ಸಮುದಾಯದವರ ಸಹಕಾರವು ಅಗತ್ಯವಾಗಿದೆ ಎಂದು ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿಗಳಾದ ಸತೀಶ ಎನ್.ನಾಯ್ಕ ತಿಳಿಸಿದರು.
ಅವರು ಆಝಾದ್ ಯುಥ್ ಕ್ಲಬ್ ಕಾರವಾರ ಹಾಗೂ ಕಲ್ಲೂರ್ ಎಜ್ಯುಕೇಶನ್ ಟ್ರಸ್ಟ್ ಕಾರವಾರದವರು ಸಂಯುಕ್ತವಾಗಿ ‘ವಿಶ್ವ ಅಂಗವಿಕಲ’ರ ದಿನಾಚರಣೆಯ ನಿಮಿತ್ತ ಹಮ್ಮಿಕೊಂಡ ಸನ್ಮಾನ ಹಾಗೂ ದವಸ ಧಾನ್ಯಗಳನ್ನು ವಿತರಿಸುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಇನ್ನೋರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕಾರವಾರ ರೋಟರಿ ಕ್ಲಬ್ನ ಅಧ್ಯಕ್ಷರಾದ ಅನಮೋಲ್ ರೇವಣ್ಕರ್ ಮಾತನಾಡಿ ಇದೊಂದು ಉತ್ತಮವಾದ ಕಾರ್ಯಕ್ರಮ. ವಿಕಲ ಚೇತನರು ಬೇರೆ ಬೇರೆ ಅಂಗವೈಕಲ್ಯದಿಂದ ಬಳಲುತ್ತಿದ್ದರೂ ತಮ್ಮ ಹೊಟ್ಟೆಪಾಡಿಗಾಗಿ ಒಂದಲ್ಲ ಒಂದು ಕೆಲಸಮಾಡಿ ಜೀವನವನ್ನು ನಡೆಸುತ್ತಿದ್ದಾರೆ. ಅವರಿಗೆ ಅನುಕಂಪದ ಅವಶ್ಯಕತೆ ಇಲ್ಲ. ಸಹಾಯ ಸಹಕಾರದ ಅವಶ್ಯಕತೆ ಇದೆ. ನಾವೆಲ್ಲರೂ ಸೇರಿ ಅವರ ಉಜ್ವಲ ಭವಿಷ್ಯಕ್ಕಾಗಿ ಶ್ರಮಿಸಬೇಕಾಗಿದೆ ಎಂದು ಹೇಳಿದರು. ಅಧ್ಯಕ್ಷತೆಯನ್ನು ವಹಿಸಿದ್ದ ಆಝಾದ್ ಯುಥ್ ಕ್ಲಬ್ನ ಚೀಫ್ ಪ್ಯಾಟ್ರನ್ ಇಬ್ರಾಹಿಂ ಕಲ್ಲೂರ್ ಮಾತನಾಡಿ ಅಂಗವಿಕಲತೆ ಎನ್ನುವುದು ಶಾಪವಲ್ಲ. ಅಂಗವಿಕಲರೂ ಸಹ ಸಾಮಾನ್ಯ ಜನರಂತೆ ಜೀವನವನ್ನು ನಡೆಸಬಹುದು. ಅವರಿಗೆ ನಮ್ಮೆಲ್ಲರ ಮಾರ್ಗದರ್ಶನ ಅಗತ್ಯ ಎಂದು ಹೇಳಿದರು. ಅತಿಥಿಗಳಾಗಿ ರಾಷ್ಟ್ರ ಹಾಗೂ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ನಜೀರ್ ಅಹಮದ್ ಯು.ಶೇಖ್, ಲಯನ್ಸ್ ಕ್ಲಬ್ನ ಮಾಜಿ ಅಧ್ಯಕ್ಷ ಲ.ಮಂಜುನಾಥ ಪವಾರ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಭಾರತೀಯ ರೆಡ್ಕ್ರಾಸ್ನ ಅಜೀವ ಸದಸ್ಯೆ ಫೈರೋಜಾ ಬೇಗಂ ಶೇಖ್ ಸ್ವಾಗತಿಸಿದರು. ಕೊನೆಯಲ್ಲಿ ಕ್ಲಬ್ನ ಕಾರ್ಯದರ್ಶಿ ಮೊಹಮ್ಮದ್ ಉಸ್ಮಾನ್ ಶೇಖ್ ವಂದಿಸಿದರು.
ಇದೇ ಸಂದರ್ಭದಲ್ಲಿ ಕೋಡಿಬಾಗದ ಸರ್ವೋದಯ ನಗರದ ನಿವಾಸಿಯಾಗಿರುವ ಕಾಲಿನ ಅಂಗ ವೈಕಲ್ಯತೆಯಿದ್ದರೂ ಮೀನು ಮಾರಾಟ ಮಾಡಿ, ವ್ರತ್ತ ಪತ್ರಿಕೆಗಳನ್ನು ಮಾರಾಟಮಾಡಿ ಜೀವನವನ್ನು ನಡೆಸುತ್ತಿರುವ ಮಂಜುನಾಥ ನಾಗಪ್ಪ ಬಾನಾವಳಿಗೆ ಶಾಲು ಹೊದಿಸಿ ಫಲ ಪುಷ್ಪ ಪ್ರಮಾಣ ಪತ್ರ ಹಾಗೂ ದವಸ ಧಾನ್ಯಗಳನ್ನು ನೀಡಿ ಸನ್ಮಾನಿಸಲಾಯಿತು.