ಭಟ್ಕಳ ರೈಲ್ವೆ ನಿಲ್ದಾಣದ ಬಳಿ ವೈನ್ ಶಾಪ್; ಗ್ರಾಮಸ್ಥರಿಂದ ಪ್ರತಿಭಟನೆ

Source: sonews | By Staff Correspondent | Published on 24th August 2017, 6:55 PM | Coastal News | Incidents | Don't Miss |

ಭಟ್ಕಳ : ಇಲ್ಲಿನ ಮುಟ್ಟಳ್ಳಿ ರೈಲ್ವೆ ನಿಲ್ದಾಣದ ಬಳಿ ಮದ್ಯದ ಅಂಗಡಿಯೊಂದು ಆರಂಭಗೊಂಡಿದ್ದು ಇದನ್ನು ಕೂಡಲೆ ಬಂದ್ ಮಾಡುವಂತೆ ಆಗ್ರಹಿಸಿ ಅಂಗಡಿಯ ಮುಂದೆ ಪ್ರತಿಭಟನೆ ನಡೆಸಿದ ನೂರಾರು ಜನರು ಒಂದು ವೇಳೆ ಇದನ್ನು ಬಂದ್ ಮಾಡದೇ ಇದ್ದಲ್ಲಿ ಉಗ್ರಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆಯನ್ನು ನೀಡಿದ್ದಾರೆ.  

ಹಳದೀಪುರದ ಹೆದ್ದಾರಿ ಬದಿಯಲ್ಲಿದ್ದ ವೈನ್‌ಶಾಪೊಂದು  ೫೦೦ ಮೀಟರ್ ವ್ಯಾಪ್ತಿಯಲ್ಲಿದ್ದಿದ್ದರಿಂದ ಸುಪ್ರೀಂ ಕೋರ್ಟ ಆದೇಶದ ಪ್ರಕಾರ  ಇತ್ತೀಚೆಗೆ ಸ್ಥಗಿತಗೊಂಡಿತ್ತು. ಸ್ಥಗಿತಗೊಂಡ  ವೈನ್‌ಶಾಪ್‌ನ್ನು ಭಟ್ಕಳದ ಮುಟ್ಟಳ್ಳಿಯಲ್ಲಿರುವ ರೈಲ್ವೆ ನಿಲ್ದಾಣಕ್ಕೆ ಹೋಗುವ ರಸ್ತೆಯಲ್ಲಿರುವ ಬಾಡಿಗೆ ಕಟ್ಟಡವೊಂದಕ್ಕೆ ಮಂಗಳವಾರ ಸ್ಥಳಾಂತರಿಸಿ ಬುಧವಾರ ಬೆಳಿಗ್ಗೆಯಿಂದಲೇ ಮದ್ಯದ ವ್ಯಾಪಾರ ಆರಂಭಿಸಲಾಗಿತ್ತು. ಈ ಬಗ್ಗೆ ವಿಷಯ ತಿಳಿದ ಮಹಿಳೆಯರು,ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಸ್ಥಳಕ್ಕಾಗಮಿಸಿ ಮುಟ್ಟಳ್ಳಿಯಲ್ಲಿ ಯಾವುದೇ ಕಾರಣಕ್ಕೂ ವೈನ್‌ಶಾಪ್ ನಡೆಸಲು ಅವಕಾಶ ಕೊಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಮದ್ಯದಂಗಡಿ ಮಾಲಿಕರು, ಕಟ್ಟಡ ಮಾಲಿಕ ಮತ್ತು ಪ್ರತಿಭಟನಾಕಾರರ ಮಧ್ಯೆ ತೀವ್ರ ವಾಗ್ವಾದ ನಡೆಯಿತು. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿರುವ ಹಂತದಲ್ಲಿ ಪೊಲೀಸರು ಹಾಗೂ ಅಬಕಾರಿ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಪರಿಸ್ಥಿತಿ ಹತೋಟಿಗೆ ತಂದರು. ಅಬಕಾರಿ ಇನ್ಸಪೆಕ್ಟರ್ ವೈನ್‌ಶಾಪ್ ಪರವಾಗಿ ಮಾತನಾಡಿದ್ದರಿಂದ ಸಾರ್ವಜನಿಕರು ಮತ್ತು ಅವರ ಮಧ್ಯೆ ತೀವ್ರ ಮಾತಿನ ಚಕಮಕಿ ನಡೆಯಿತು. ನೀವು ನಮ್ಮೂರಲ್ಲಿ ಯಾರನ್ನು ಕೇಳಿ ಬಾರ್‌ಗೆ ಪರವಾನಿಗೆ ನೀಡಿದ್ದೀರಿ ಎಂದು ಇನ್ಸಪೆಕ್ಟರ್‌ನ್ನು ಮಹಿಳೆಯರು ತರಾಟೆಗೆ ತೆಗೆದುಕೊಂಡರು. ಈ ಸಂದರ್ಭದಲ್ಲಿ ಸಿಪಿ‌ಐ ಸುರೇಶ ನಾಯಕ, ನಗರ ಠಾಣೆಯ ಪಿ‌ಎಸೈಗಳಾದ ಅಣ್ಣಪ್ಪ ಮೊಗೇರ, ಹೆಚ್ ಬಿ ಕುಡಕುಂಟಿ ಹಾಗೂ ಸಿಬ್ಬಂದಿಗಳು ಆಕ್ರೋಶಗೊಂಡಿದ್ದ ಪ್ರತಿಭಟನಾಕಾರರನ್ನು ಸಮಾಧಾನಿಸಿದರು. ಪ್ರತಿಭಟನಾಕಾರರು ವೈನ್‌ಶಾಪ್ ಆರಂಭಿಸಲು ಯಾವುದೇ ಕಾರಣಕ್ಕೂ ಬಿಡವುದಿಲ್ಲ. ಇಲ್ಲಿ ಮದ್ಯದಂಗಡಿ ಆರಂಭಿಸಿದರೆ ಮಕ್ಕಳೂ ಕೂಡ ಕುಡಿಯುವ ಚಟ ಬೆಳೆಸಿಕೊಳ್ಳಬಹುದು. ನಮ್ಮೂರಿಗೆ ಮದ್ಯದಂಗಡಿ ಬೇಡವೇ ಬೇಡ ಎಂದು ಪಟ್ಟು ಹಿಡಿದರು. ಪ್ರತಿಭಟನಾಕಾರರು ಪಟ್ಟು ಸಡಿಲಿಸದೇ ಮದ್ಯದಂಗಡಿ ಬಂದ್ ಮಾಡಲೇಬೇಕು ಎಂದು ಒತ್ತಾಯಿಸಿದಾಗ ಸಿಪಿ‌ಐ ಸುರೇಶ ನಾಯ್ಕ ಮೊಬೈಲ್ ಮೂಲಕ ಎಸಿಯವರನ್ನು ಸಂಪರ್ಕಿಸಿದರು. ಎಸಿಯವರು ಮದ್ಯದಂಗಡಿಯನ್ನು ಬಂದ್ ಮಾಡಿ ಗುರುವಾರ ಈ ಬಗ್ಗೆ ಸಭೆ ಕರೆದು ಚರ್ಚೆ ಮಾಡೋಣ ಎಂದು ತಿಳಿಸಿದ್ದನ್ನು ಸಿಪಿ‌ಐ ಪ್ರತಿಭಟನಾಕಾರರಿಗೆ ತಿಳಿಸಿದಾಗ ಇದಕ್ಕೆ ಎಲ್ಲರೂ ಒಪ್ಪಿ ಪ್ರತಿಭಟನೆ ಕೈಬಿಟ್ಟರು. ಕಟ್ಟೇವೀರ ಸ್ಪೋರ್ಟ್ಸ ಕ್ಲಬ್‌ನ ಅಧ್ಯಕ್ಷ ಶ್ರೀಧರ ನಾಯ್ಕ, ಗ್ರಾ.ಪಂ.ಸದಸ್ಯ ಜಟ್ಟಪ್ಪ ನಾಯ್ಕ ಸೇರಿದಂತೆ ಹಲವು ಮಹಿಳೆಯರು ಮುಟ್ಟಳ್ಳಿಯಲ್ಲಿ ಮದ್ಯದಂಗಡಿ ತೆರೆಯುವುದು ಬೇಡವೇ ಬೇಡ ಎಂದು ಆಗ್ರಹಿಸಿದರು. ಸುದ್ದಿಗಾರರ ಜೊತೆ ಮಾತನಾಡಿದ ವೈನ್‌ಶಾಪ್ ಮಾಲಿಕ ಅಭಿಷೇಕ, ನಾವು ಇಲಾಖೆ ಅನುಮತಿಯಂತೆ ಕಾಯ್ದೆ ಪ್ರಕಾರ ವೈನ್‌ಶಾಪ್‌ನ್ನು ಸ್ಥಳಾಂತರಿಸಿದ್ದೇವೆ. ಆದರೆ ವೈನ್‌ಶಾಪ್ ಮುಚ್ಚುವಂತೆ ಪ್ರತಿಭಟನೆ ಮಾಡಲಾಗುತ್ತಿದೆ. ಪ್ರತಿಭಟನಾಕಾರರು ನಮ್ಮ ವೈನ್‌ಶಾಪ್‌ಗೆ ನುಗ್ಗಿ ಮದ್ಯ ನಾಶ ಮಾಡಲು ಮುಂದಾಗಿದ್ದರು. ನಮ್ಮದು ಅಧಿಕೃತ ಮದ್ಯದಂಗಡಿಯಾಗಿದ್ದು, ಹೀಗೆಲ್ಲಾ ಮಾಡುವುದು ಸರಿಯಲ್ಲ. ವೈನ್‌ಶಾಪ್ ತೆರೆಯಲು ತಕರಾರಿಲ್ಲ ಎಂಬ ಕುರಿತು ನಮ್ಮ ಬಳಿ ಗ್ರಾಮಸ್ಥರ ಸಹಿ ಇರುವ ಪತ್ರವಿದೆ ಎಂದರು. ಅಬಕಾರಿ ಇನ್ಸಪೆಕ್ಟರ್ ಸುಭದಾ ನಾಯಕ ಮಾತನಾಡಿ ಕಾನೂನು ಪ್ರಕಾರವೇ ವೈನ್‌ಶಾಪ್‌ನ್ನು ಸ್ಥಳಾಂತರಿಸಲಾಗಿದೆ. ಸ್ಥಳಾಂತರದ ಪೂರ್ವ ಕಟ್ಟಡದ ಜಿಪಿ‌ಎಸ್ ಸರ್ವೆ ಕೂಡ ಮಾಡಲಾಗಿದೆ. ಇಲ್ಲಿ ವೈನ್‌ಶಾಪ್ ಆದರೆ ಕಳ್ಳಭಟ್ಟಿ ದಂಧೆ ತಡೆಯಬಹುದಾಗಿದೆ. ವೈನ್‌ಶಾಪ್‌ನಿಂದ ಸರಕಾರಕ್ಕೆ ಆದಾಯ ಬರುತ್ತಿದೆ ಎಂದರು. ಅಧಿಕೃತವಾಗಿ ವೈನ್‌ಶಾಪ್ ಆರಂಭಿಸಿದ ಮೇಲೆ ವ್ಯಾಪಾರ ಮಾಡಲು ಬಿಡುವುದಿಲ್ಲ ಎಂದು ಹೇಳುತ್ತಿರುವುದು ಸರಿಯಲ್ಲ ಎಂದರು. ಈ ಹಿಂದೆ ಮುಟ್ಟಳ್ಳಿಯ ಕಟ್ಟಡವೊಂದರಲ್ಲಿ ಬಂದರ ರಸ್ತೆಯಲ್ಲಿದ್ದ  ವೈನ್‌ಶಾಪ್‌ನ್ನು ಸ್ಥಳಾಂತರಿಸಿದ ಸಂದರ್ಭದಲ್ಲೂ ಸಹ ಸಾರ್ವಜನಿಕರು ಅದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ ಬಂದ್ ಮಾಡಿಸಿದ್ದರು. 

Read These Next

ಕೇಂದ್ರದಲ್ಲಿ ನಮ್ಮದೇ ಸರ್ಕಾರ, ನಮ್ಮದೇ ಪ್ರಧಾನಿ ಡಾ. ಅಂಜಲಿ ನಿಂಬಾಳ್ಕರ್ ಮಂತ್ರಿಯಾಗ್ತಾರೆ- ಸಚಿವ ಮಾಂಕಾಳ್ ಭವಿಷ್ಯ

ಭಟ್ಕಳ: ನಾವು ಸುಳ್ಳು ಹೇಳುವುದಿಲ್ಲ. ಹೇಳಿದನ್ನು ಮಾಡಿ ತೋರಿಸಿದ್ದೇವೆ. ನುಡಿದಂತೆ ನಡೆದಿದ್ದೇವೆ. ರಾಜ್ಯದಲ್ಲಿ ಐದು ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...