ಭಟ್ಕಳ: ಶಾಂತಿ ಮಾನವೀಯತೆಗಾಗಿ ಶಮ್ಸ್ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಬೀದಿ ನಾಟಕ
ಭಟ್ಕಳ: ರಾಷ್ಟ್ರಾದ್ಯಂತ ನಡೆಯುತ್ತಿರುವ ಶಾಂತಿ ಮತ್ತು ಮಾನವೀಯತೆ ಅಭಿಯಾನದ ಅಂಗವಾಗಿ ಭಟ್ಕಳದ ಶಮ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲಾ ವಿದ್ಯಾರ್ಥಿಗಳು ಭಾನುವಾರ ನಗರದ ವಿವಿಧ ಭಾಗಗಳಲ್ಲಿ ಬೀದಿ ನಾಟಕವನ್ನು ಪ್ರದರ್ಶಿಸಿದರು.
ಸತ್ಯ, ಶಾಂತಿ, ಅಹಿಂಸೆ ಮಾನವೀಯತೆ ಸಾರುವ ಸನ್ನಿವೇಶಗಳನ್ನು ಬೀದಿನಾಟಕದ ಮೂಲಕ ಇಲ್ಲಿನ ಸಂತೆ ಮಾರುಕಟ್ಟೆ, ಶಮ್ಸುದ್ದೀನ್ ವೃತ್ತ, ಶಿರಾಲಿ ಸಂತೆ ಮಾರುಕಟ್ಟೆ, ಬಂದರ್, ಹಳೆ ಬಸ್ ನಿಲ್ದಾಣ ಹಾಗೂ ಹಾಗೂ ಹೋಟೆಲ್ ಸಮ್ಮರ್ ಬಳಿ ಪ್ರದರ್ಶಿಸಿದರು.
ಈ ಸಂದರ್ಭದಲ್ಲಿ ಅಭಿಯಾನದ ಜಿಲ್ಲಾ ಸಂಚಾಲಕ ಎಂ.ಆರ್.ಮಾನ್ವಿ ಭಾರತ ದೇಶ ಶಾಂತಿ ಸೌಹಾರ್ಧತೆಯ ಸಂಗಮವಾಗಿದ್ದು ಇಲ್ಲಿ ವೈವಿದ್ಯತೆಯಲ್ಲಿ ಏಕತೆಯೊಂದಿಗೆ ಹಿಂದು, ಮುಸ್ಲಿಮ, ಕ್ರೈಸ್ತರು ಪರಸ್ಪರ ಒಟ್ಟಾಗಿ ಬಾಳುತ್ತಿದ್ದಾರೆ. ನಮ್ಮಲ್ಲಿ ಅಶಾಂತಿಯನ್ನು ಹರಡುವ ಪ್ರಯತ್ನಗಳು ನಡೆಯುತ್ತಿದ್ದು ದೇಶದ ಶಾಂತಿ ಭಂಜಕರ ವಿರುದ್ಧ ನಾವು ಒಂದಾಗಿ ಸಮರ ಸಾರಬೇಕಾಗಿದೆ ಎಂದು ಕರೆ ನೀಡಿದರು.
ಅಭಿಯಾನದ ಭಟ್ಕಳ ತಾಲೂಕು ಸಂಚಾಲಕ ಯೂನೂಸ್ ರುಕ್ನುದ್ದೀನ್, ಜಿಲ್ಲಾ ಸ್ವಾಗತ ಸಮಿತಿ ಸಂಚಾಲಕ ತಲ್ಹಾ ಸಿದ್ದಿಬಾಪ, ಅಶ್ರಫ್ ಬರ್ಮಾವರ್, ಮೌಲಾನ ಸೈಯದ್ಯ ಝುಬೈರ್, ಅಬ್ದುಲ್ ಜಬ್ಬಾರ್ ಅಸದಿ, ಫಾರುಖ್ ಮಾಸ್ಟರ್, ಸಲಾಹುದ್ದೀನ್ ಎಸ್.ಕೆ. ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಅಸ್ಬಾ ಉದ್ಯಾವರ್, ಅಬ್ದುಲ್ ಮಾಜೀದ್, ಮುಹಮ್ಮದ್ ಎಸ್.ಜೆ.ಮುಂತಾದವರು ಬೀದಿನಾಟಕವನ್ನು ಪ್ರದರ್ಶಿಸಿದರು.