ಶಾಂತಿ ಮತ್ತು ಮಾನವೀಯತೆ ಅಭಿಯಾನ ರ್ಯಾಲಿಯಲ್ಲಿ ವಿದ್ಯಾರ್ಥಿಗಳಿಂದ ಶಾಂತಿಗಾಗಿ ಪಣ
ಭಟ್ಕಳ: ದೇಶದ ಭವಿಷ್ಯವಾದ ನಾವು ಎಲ್ಲಾ ಮಕ್ಕಳನ್ನು ಪ್ರೀತಿಸುವೆವು. ಯಾರನ್ನೂ ದ್ವೇಷಿಸಲಾರೆವು ಎಂದು ವಿದ್ಯಾರ್ಥಿಗಳು ಪ್ರತಿಜ್ಞೆ ಮಾಡುವುದರ ಮೂಲಕ ತಾವು ಈ ದೇಶದ ಅಭಿವೃದ್ಧಿಗೆ ಪೂರಕವಾಗಿದ್ದೇವೆ ಎನ್ನುವುದನ್ನು ಸಾಬೀತುಗೊಳಿಸಿದರು.
ಭಟ್ಕಳದ ಜಮಾಅತೆ ಇಸ್ಲಾಮಿ ಹಿಂದ್ ಸಂಘಟನೆ ಶಾಂತಿ ಮತ್ತು ಮಾನವೀಯತೆ ಅಭಿಯಾನದ ಂಗವಾಗಿ ಆಯೋಜಿಸಿದ್ದ ವಿದ್ಯಾರ್ಥಿಗಳ ಶಾಂತಿ ಮೆರವಣೆಗೆಯ ನಂತರ ಪ್ರತಿಜ್ಞೆಗೈದರು.
ನಾವು ನಮ್ಮ ತಂದೆ ತಾಯಂದಿರು, ಸಹೋದರ ಸಹೋದರಿಯರು ಮತ್ತು ಅಧ್ಯಾಪಕರನ್ನು ಗೌರವಾದರಗಳೊಂದಿಗೆ ನೋಡುವೆವು. ನಾವು ನಮ್ಮ ನಾಲಗೆಯಿಂದ ಸತ್ಯ ಮತ್ತು ಮಧುರ ಮಾತುಗಳನ್ನೇ ಆಡುವೆವು. ಯಾರ ಮನಸ್ಸನ್ನೂ ಅನ್ಯಾಯವಾಗಿ ನೋಯಿಸಲಾರೆವು. ನಾವು ದುರ್ಬಲರ ಸಹಾಯ ಮಾಡುವೆವು ಹಾಗೂ ಇತರರ ಸೇವೆ ಮಾಡುವೆವು. ನಾವು ನಮ್ಮ ದೇಶದ ಸೇವೆಯನ್ನು ತನುಮನದಿಂದ ನಿರ್ವಹಿಸುವೆವು. ನಾವು ನಮ್ಮ ಮನೆ, ಕುಟುಂಬ, ಧರ್ಮ ಮತ್ತು ದೇಶದ ಹೆಸರನ್ನು ಬೆಳಗಿಸುವೆವು ಎಂದು ಪತ್ರಿಜ್ಞೆಗೈದರು.
ಇಲ್ಲಿನ ಶಮ್ಸುದ್ದೀನ್ ವೃತ್ತರಿಂದ ಆರಂಭಗೊಂಡ ರ್ಯಾಲಿಯು ಹಳೆ ಬಸ್ ನಿಲ್ದಾಣದ ಮೂಲಕ ಚೌಕ್ ಬಝಾರ್ ತಲುಪಿ ಅಲ್ಲಿಂದ ಸಾರ್ವಜನಿಕ ಗಣೇಶೋತ್ಸವ ಮೈದಾನದಲ್ಲಿ ಮುಕ್ತಾಯಗೊಂಡಿತು. ಶಾಂತಿ ಮತ್ತು ಮಾನವೀಯತೆ ಕುರಿತಂತೆ ವಿದ್ಯಾರ್ಥಿಗಳು ಘೋಷಣೆ ಕೋಗಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸ್ವಾಗತ ಸಮಿತಿ ಸಂಚಾಲಕ ತಲ್ಹಾ ಸಿದ್ದಿಬಾಪ, ತಾಲೂಕು ಸಮಿತಿ ಸಂಚಾಲಕ ಮುಜಾಹಿದ್ ಮುಸ್ತಫಾ, ಭಾಸ್ಕರ್ ನಾಯ್ಕ, ಯೂನೂಸ್ ರುಕ್ನುದ್ದೀನ್, ಸೈಯ್ಯದ ಅಶ್ರಫ್ ಬರ್ಮಾವರ್, ಸಲಾಹುದ್ದೀನ್, ಮೌಲಾನ ಝುಬೈರ್ ಫಾರೂಖ್ ಮಾಸ್ಟರ್ ಮುಂತಾದವರು ಉಪಸ್ಥಿತರಿದ್ದರು.