ಭಟ್ಕಳದಲ್ಲಿ 2 ಪ್ರತ್ಯೇಕ ಅಪಘಾತ: ಮೂವರ ದುರ್ಮರಣ
ಭಟ್ಕಳ: ತಾಲೂಕಿನಲ್ಲಿ ಬುಧವಾರ ನಡೆದ 2 ಪ್ರತ್ಯೇಕ ಅಪಘಾತದಲ್ಲಿ ಮೂವರು ಮೃತ ಪಟ್ಟಿದ್ದಾರೆ.
ಸೈಕಲ್ ಹಿಡಿದುಕೊಂಡು ಹೆದ್ದಾರಿ ದಾಟುತ್ತಿದ್ದ ವ್ಯಕ್ತಿಯೋರ್ವನಿಗೆ ಚಲಿಸುತ್ತಿದ್ದ ಕ್ರೇನ್ ಬಡಿದಿದ್ದು, ಗಂಭೀರವಾಗಿ ಗಾಯಗೊಂಡ ಅವರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಬುಧವಾರ ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಇಲ್ಲಿನ ಪಿಎಲ್ಡಿ ಬ್ಯಾಂಕ್ ಮುಖ್ಯ ಕಚೇರಿಯ ಮುಂದೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ತಾಲೂಕಿನ ಮುಠ್ಠಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ರಮೇಶ ವಾಮನ ಪ್ರಭು (71) ಎಂದು ಗುರುತಿಸಲಾಗಿದೆ. ಭಟ್ಕಳ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಸಂಜೆ 3 ಗಂಟೆಯ ಸುಮಾರಿಗೆ ನಡೆದ ಟೆಂಪೋ ಹಾಗೂ ಎಕ್ಟಿವಾ ದ್ವಿಚಕ್ರ ವಾಹನಗಳ ನಡುವೆ ನಡೆದ ಮುಖಾಮುಖಿ ಢಿಕ್ಕಿಯಲ್ಲಿ ಎಕ್ಟಿವಾ ಸವಾರ ಹಾಗೂ ಆತನ ಸಹೋದರಿ ಸಾವನ್ನಪ್ಪಿದ್ದು, ಆಕೆಯ ಇಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿರುವ ಘಟನೆ ಬೈಲೂರು ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಮೃತ ವ್ಯಕ್ತಿಗಳನ್ನು ಹೊನ್ನಾವರ ಮಂಕಿಯ ನಿವಾಸಿಗಳಾದ ಮಹ್ಮದ್ ಕೈಫ್ ಮುಕ್ತೇಸರ (19) ಹಾಗೂ ಆಫ್ರೀನ್ ಮುಕ್ತೇಸರ(30) ಎಂದು ಗುರುತಿಸಲಾಗಿದೆ.
ಗಾಯಗೊಂಡ ಅಹ್ಮದ್ (3) ಹಾಗೂ ಅಜ್ಮತ್ (7)ರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಸಾಗಿಸಲಾಗಿದೆ. ಇವರೆಲ್ಲರೂ ಭಟ್ಕಳದಿಂದ ಮಂಕಿಯತ್ತ ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಮುರುಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.