ಟಿಪ್ಪು ಜಯಂತಿಗೆ ವಿರೋಧ; ಅನಂತ್ ಕುಮಾರ್ ನಂತರ ಈಗ ಸುನಿಲ್ ನಾಯ್ಕ ರ ಸರದಿ
ಭಟ್ಕಳ: ಕನರಾ ಲೋಕಸಭಾ ಕ್ಷೇತ್ರದ ಸಂಸದ ಅನಂತ್ ಕುಮಾರ್ ಹಗಡೆಯನ್ನು ತನ್ನ ರಾಜಕೀಯ ಗುರು ಎಂದು ನಂಬಿರುವ ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ಸುನಿಲ್ ನಾಯ್ಕ ಈಗ ತಮ್ಮ ಗುರುವಿನ ಹಾದಿ ತುಳಿಯಲ್ಲೆ ತಮ್ಮ ಹೆಜ್ಜೆಗಳನ್ನಿಡುತ್ತಿದ್ದು ಟಿಪ್ಪು ಸುಲ್ತಾನ್ ಓರ್ವ ಮತಾಂಧನೆಂದು ಜರೆದು ಟಿಪ್ಪು ಜಯಂತಿಯ ಆಮಂತ್ರಣ ಪತ್ರಿಕೆಯಲ್ಲಿ ತಮ್ಮ ಹೆಸರಲು ಅಚ್ಚು ಹಾಕದಂತೆ ಜಿಲ್ಲಾಡಳಿತಕ್ಕೆ ಪತ್ರ ಬರೆದಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ.
ಕಳೆದ ಬಾರಿಯಂತೆ ಈ ಬಾರಿಯೂ ಟಿಪ್ಪು ಸುಲ್ತಾನ್ ಜಯಂತಿ ಆಚರಣೆಯ ಆಮಂತ್ರಣ ಪತ್ರಿಕೆಯಲ್ಲಿ ತಮ್ಮ ಹೆಸರನ್ನು ಹಾಕದಂತೆ ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವ ಅನಂತಕುಮಾರ ಹೆಗಡೆ ಈಗಾಗಲೇ ಜಿಲ್ಲಾಡಳಿತಕ್ಕೆ ಪತ್ರದ ಮೂಲಕ ತಿಳಿಸಿದ್ದು ಈಗ ಅವರದೆ ಶಿಷ್ಯನೆಂದು ಗುರುತಿಸಿಕೊಂಡಿರುವ ಭಟ್ಕಳದ ಶಾಸಕ ಸುನಿಲ್ ನಾಯ್ಕ ಕೂಡ ಟಿಪ್ಪು ಜಯಂತಿಗೆ ಭಾರಿ ವಿರೋಧ ವ್ಯಕ್ತಪಡಿಸಿ ತಮ್ಮ ಹೆಸರನ್ನು ಆಮಂತ್ರಣ ಪತ್ರಿಕೆಯಲ್ಲಿ ಪ್ರಕಟಿಸದಿರುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಹೇಳಲಾಗುತ್ತಿದೆ.
'ಟಿಪ್ಪು ಜಯಂತಿ ಆಚರಣೆಗೆ ನನ್ನ ವಿರೋಧ ಇದ್ದು, ಆಮಂತ್ರಣ ಪತ್ರಿಕೆಯಲ್ಲಿ ಜಿಲ್ಲಾಡಳಿತವು ನನ್ನ ಹೆಸರನ್ನು ಹಾಕಬಾರದು' ಎಂದು ಅವರು ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ.
'ಟಿಪ್ಪು ಒಬ್ಬ ಮತಾಂಧ, ಇಸ್ಲಾಂ ಧರ್ಮವನ್ನು ಒಪ್ಪದ ಹಿಂದೂಗಳು ಮತ್ತು ಕ್ರೈಸ್ತರನ್ನು ಮಾರಣ ಹೋಮ ಮಾಡಿರುವ ವ್ಯಕ್ತಿ.
ಅಲ್ಲದೇ ಹೈಕೋರ್ಟ್ ಕೂಡ ಆತ ಸ್ವಾತಂತ್ರ್ಯ ಹೋರಾಟಗಾರ ಅಲ್ಲ ಎಂದಿದೆ. ಹೀಗಿರುವಾಗ ರಾಜ್ಯ ಸರ್ಕಾರ ಕೇವಲ ಒಂದು ಸಮಾಜದ ಓಲೈಕೆಗಾಗಿ ಟಿಪ್ಪು ಜಯಂತಿಯನ್ನು ಆಚರಿಸುತ್ತಿದೆ. ಇದಕ್ಕೆ ನನ್ನ ವಿರೋಧವಿದೆ' ಎಂದು ಅವರು ತಮ್ಮ ಆಪ್ತ ಸಹಾಯಕರ ಮೂಲಕ ಪತ್ರ ರವಾನಿಸಿದ್ದಾರೆ.