ಭಟ್ಕಳ: ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣಕ್ಕೆ 125 ವರ್ಷ ತುಂಬಿದ ಸವಿನೆನಪಿಗಾಗಿ ಅ.1ರಂದು ಮತ್ತೊಮ್ಮೆ ದಿಗ್ವಿಜಯ ರಥಯಾತ್ರೆ ಆಗಮಿಸಲಿದ್ದು, ಚಕ್ರವರ್ತಿ ಸೂಲಿಬೆಲೆ ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದು ಭಟ್ಕಳ ಯುವ ಬ್ರಿಗೇಡ ಪ್ರಮುಖ ರಾಮನಾಥ ಬಳಗಾರ ಹೇಳಿದರು.
ಅವರು ಗುರುವಾರದಂದು ಇಲ್ಲಿನ ಸಾಗರ ರಸ್ತೆಯ ಅಮಿತಾಕ್ಷ ಯೋಗ ಕೇಂದ್ರದಲ್ಲಿ ಪತ್ರಕರ್ತರ ಜೊತೆಗೆ ಮಾತನಾಡುತ್ತಿದ್ದರು.
‘ಇದೊಂದು ರಾಜಕೀಯ ಪ್ರೇರಿತವಲ್ಲದ ಕಾರ್ಯಕ್ರಮವಾಗಿದೆ. ಆಗಸ್ಟ 31ರಂದು ಬೆಂಗಳುರಿನ ಆನೆಕಲನಿಂದ ಆರಂಭವಾದ ಮತ್ತೊಮ್ಮೆ ದಿಗ್ವಿಜಯ ರಥಯಾತ್ರೆಯೂ ಅ.28ರಂದು ಇಳೆಕಲ್ನಲ್ಲಿ ಕಾರ್ಯಕ್ರಮದ ಮೂಲಕ ಮುಕ್ತಾಯಗೊಂಡು ರಾಜ್ಯಾದ್ಯಂತ ಸಂಚರಿಸಿ ಧರ್ಮದ ಬಗ್ಗೆ ಜನರಲ್ಲಿ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಸೆ.30ರಂದು ಸಂಜೆ ಇಲ್ಲಿನ ಮೂಡಭಟ್ಕಳ ಚಿತ್ತರಂಜನ ಸರ್ಕಲನಲ್ಲಿ ರಥಯಾತ್ರೆಗೆ ಸ್ವಾಗತ ಮಾಡಿ ಶ್ರೀ ಚೆನ್ನಪಟ್ಟಣ ದೇವಸ್ಥಾನಕ್ಕೆ ಕರೆತರಲಾಗುವುದು. ಅ.1ರಂದು ದೇವಸ್ಥಾನದ ರಥಬೀದಿಯಲ್ಲಿ ಬೆಳಿಗ್ಗೆ 8.30ಕ್ಕೆ ಹೂವಿನ ಪೇಟೆ ಮಾರ್ಗವಾಗಿ ಮಾರಿಕಟ್ಟೆ,ಹಳೆ ಬಸ್ ನಿಲ್ದಾಣ, ಸಂಶುದ್ದೀನ ಸರ್ಕಲ ಮಾರ್ಗವಾಗಿ ಗುರು ಸುಧೀಂದ್ರ ಕಾಲೇಜು ಮೈದಾನಕ್ಕೆ ಶೋಭಾಯಾತ್ರೆ ತೆರಳಲಿದೆ. ಯಾತ್ರೆಯೂದ್ದಕ್ಕೂ ವಿಶೇಷವಾಗಿ ಮಹಿಳೆಯರಿಂದ ಪೂರ್ಣ ಕುಂಭ ಸ್ವಾಗತ, ವಿಶೇಷ ಚಂಡೆ ವಾದನ ಮೂಲಕ ಸಂಚರಿಸಲಿದೆ ಎಂದು ಹೇಳಿದರು.
ಯುವಾ ಬ್ರಿಗೇಡ ಪ್ರಮುಖ ವೈದ್ಯ ಪಾಂಡುರಂಗ ನಾಯಕ ಮಾತನಾಡಿ ‘ ಸ್ವಾಮಿ ವಿವೇಕಾನಂದರ ವಿಚಾರಧಾರೆಯನ್ನು ಎಲ್ಲೆಡೆ ಹಂಚುವ ಉದ್ದೇಶ ರಥಯಾತ್ರೆಯದ್ದಾಗಿದೆ. ಸನಾತನ ಸಂಸ್ಕøತಿಯನ್ನು ಬೆಳೆಸಿದ ವಿವೇಕಾನಂದರು ಭಾರತೀಯ ಪರಂಪರೆಯನ್ನು ಎಲ್ಲೆಡೆ ಪರಿಚಿಯಿಸಿದ್ದಾರೆ. ಈ ಹಿನ್ನೆಲೆ ಈ ಎಲ್ಲಾ ಅಂಶದ ಬಗ್ಗೆ ರಾಜ್ಯಾದ್ಯಂತ ರಥಯಾತ್ರೆ ಸಂಚರಿಸಿ ಪ್ರತಿಯೊಬ್ಬ ವ್ಯಕ್ತಿಗೆ ವಿಚಾರಧಾರೆ ತಲುಪಬೇಕಾಗಿದೆ. ಎಂದರು.
ಇನ್ನೋರ್ವ ಯುವಾ ಬ್ರಿಗೇಡ ಪ್ರಮುಖ ಕೇಧಾರ ಕೊಲ್ಲೆ ‘ ಈ ರೀತಿಯ ಕಾರ್ಯಕ್ರಮದಿಂದ 125ವರ್ಷದ ಇತಿಹಾಸವನ್ನು ಇಂದಿನ ಪೀಳಿಗೆಗೆ ತಿಳಿಯಪಡಿಸಲು ಸಾಧ್ಯ. ಈಗಿನ ಸಂಘಟಕರೇ ಮುಂದಿನ ಮಾರ್ಗದರ್ಶಕರಾಗುತ್ತಾರೆ. ಪೀಳಿಗೆಯಿಂದ ಪೀಳಿಗೆಗೆ ಧರ್ಮ ಜಾಗೃತಿ ಬಗ್ಗೆ ಅರಿವು ಹುಟ್ಟಬೇಕು. ಪಠ್ಯ ಪುಸ್ತಕದಲ್ಲಿ ಧರ್ಮ ಬಗ್ಗೆ ಯಾವುದೇ ಮಾಹಿತಿ ಸಿಗದ ಹಿನ್ನೆಲೆ ವಿದ್ಯಾರ್ಥಿಗಳು ಈ ರೀತಿಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಇತಿಹಾಸದ ಬಗ್ಗೆ ತಿಳಿದುಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿಶೇಷವಾಗಿ ಯುವ ಬ್ರಿಗೇಡ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ಅವರು ದಿಕ್ಸೂಚಿ ಭಾಷಣ ಮಾಡಲಿದ್ದು, ವೇದಿಕೆಯಲ್ಲಿ ನಿವೃತ್ತ ಅಂಚೆ ಸಿಬ್ಬಂದಿ ನಾರಾಯಣ ಪೈ ಹಾಗೂ ನಿವೃತ್ತ ಯೋಧ ಎಂ.ಡಿ.ಫಕ್ಕಿ ಅವರನ್ನು ಗುರುತಿಸುವ ಕಾರ್ಯ ಮಾಡಲಿದ್ದಾರೆ. ಹಾಗೂ ‘125 ವರ್ಷದ ಮೊದಲು ಹಾಗೂ ನಂತರ’ ಎಂಬ ವಿಷಯದ ಬಗ್ಗೆ ಪದವಿ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ರಥಯಾತ್ರೆಯೂ ಅಂದೇ ಭಟ್ಕಳದಿಂದ ಹೊರಟು ಮುರ್ಡೇಶ್ವರ, ಹೊನ್ನಾವರ ಹಾಗೂ ಸಂಜೆ ಕುಮಟಾಕ್ಕೆ ಸಂಚರಿಸಿ ರಥಯಾತ್ರೆ ಮುಂದುವರೆಯಲಿದೆ.
ಈ ಸಂಧರ್ಭದಲ್ಲಿ ಭಟ್ಕಳ ಯುವಾ ಬ್ರಿಗೇಡ ಘಟಕದ ಅಧ್ಯಕ್ಷ ಸತೀಶ ಶೇಟ್, ಕಾರ್ಯಕರ್ತರಾದ ಶಂಕರ ಶೆಟ್ಟಿ, ಸಂತೋಷ ಶೇಟ್, ಸುನೀಲ ಕಾಮತ, ವೆಂಕಟೇಶ ನಾಯ್ಕ, ಹೇರಂಬ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.