ಶಿವಮೊಗ್ಗ: ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯಾದ್ಯಂತ ವ್ಯವಸ್ಥಿತ ಚುನಾವಣೆ ನಡೆಯುವುದರ ಜೊತೆಗೆ ಶೇ.100ಮತದಾನ ಆಗುವಂತೆ ಬೂತ್ ಮಟ್ಟದ ಅಧಿಕಾರಿಗಳು ಮತದಾರರಲ್ಲಿ ಮತದಾನ ಮಹತ್ವದ ಕುರಿತು ಅರಿವು ಮೂಡಿಸಬೇಕೆಂದು ಮಹಾನಗರಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್ ಅವರು ಹೇಳಿದರು.
ಅವರು ಇಂದು ಮಹಾನಗರಪಾಲಿಕೆಯ ವತಿಯಿಂದ ನಗರದ ಡಾ|| ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಎಲ್ಲಾ ಮತಗಟ್ಟೆ ಮಟ್ಟದ ಕಾರ್ಯಕರ್ತರಿಗಾಗಿ ಏರ್ಪಡಿಸಲಾಗಿದ್ದ ಮತದಾರರ ಜಾಗೃತಿ ಸಮಿತಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
ತರಬೇತಿ ಪಡೆದ ಕಾರ್ಯಕರ್ತರು ತಮ್ಮ ವಾರ್ಡ್ ಅಥವಾ ಮತಗಟ್ಟೆ ಪ್ರದೇಶದ ವ್ಯಾಪ್ತಿಯಲ್ಲಿನ ಮತದಾರರಿಗೆ ಮತದಾನ ಮಹತ್ವದ ಕುರಿತು ಅರಿವು ಮೂಡಿಸುವುದರ ಜೊತೆಗೆ ಪ್ರತಿಯೊಬ್ಬರೂ ಯಾವುದೇ ಆತಂಕವಿಲ್ಲದೇ ನಿರ್ಭೀತಿಯಿಂದ ಸ್ವತಂತ್ರವಾಗಿ ಮತಗಟ್ಟೆಗೆ ತೆರಳಿ ಮತ ಚಲಾಯಿಸಲು ಮುಂದಾಗಬೇಕು. ಯಾವುದೇ ಆಸೆ, ಆಮಿಷಗಳಿಗೆ ಒಳಗಾಗದಂತೆ ಅವರು ಇದೆ ಸಂದರ್ಭದಲ್ಲಿ ತಿಳಿಸಿದರು.
ಮತದಾನಕ್ಕಾಗಿ ಆಮಿಷ ನೀಡುವುದು ಹಾಗೂ ಹಣ, ಮದ್ಯ ಹಂಚುವುದು ಕಾನೂನು ಪ್ರಕಾರ ಅಕ್ಷಮ್ಯ ಅಪರಾಧ. ಈ ಸಂಬಂಧ ಮತದಾರರಲ್ಲಿ ಜಾಗೃತಿಯನ್ನು ಮೂಡಿಸಲು ಎಲ್ಲಾ ಮತಗಟ್ಟೆ ವ್ಯಾಪ್ತಿಯಲ್ಲಿ ಮತದಾರರ ಜಾಗೃತಿ ಸಮಿತಿಗಳನ್ನು ಈಗಾಗಲೇ ರಚಿಸಲಾಗಿದೆ. ಮತದಾರರ ಜಾಗೃತ ಕುರಿತಾಗಿ ಕೈಗೊಂಡಿರುವ ಕ್ರಮಗಳು ಹಾಗೂ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅವರು ಮಾಹಿತಿ ನೀಡಿದರು.
ಈ ಅವಧಿಯಲ್ಲಿ ಸಾರ್ವಜನಿಕರು ಮತ ಚಲಾಯಿಸಲು ಕೈಗೊಳ್ಳಬೇಕಾದ ಕ್ರಮಗಳು, ಮಾದರಿ ನೀತಿ ಸಂಹಿತೆ ಕುರಿತು ಅರಿವು ಮೂಡಿಸುವುದು, ನೀತಿಸಂಹಿತೆ ಉಲ್ಲಂಘನೆಗಳ ಬಗ್ಗೆ ದೂರುಗಳನ್ನು ನೀಡಲು ಪ್ರೇರೇಪಿಸುವುದು, ಶಾಂತಿಯುತ ಮತದಾನಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಕಾರ್ಯಕರ್ತರಿಗೆ ಮಾಹಿತಿ ನೀಡಿದರು.
ಚುನಾವಣಾ ಅಕ್ರಮಗಳ ಕುರಿತು ಜಿಲ್ಲಾ ಚುನಾವಣಾ ಶಾಖೆಗೆ ಮಾಹಿತಿ ನೀಡಲು ಸಿ-ವಿಜಿಲ್ ಎಂಬ ಮೊಬೈಲ್ ತಂತ್ರಾಂಶವಿದ್ದು, ಆ್ಯಂಡ್ರಾಯ್ಡ್ ಮೊಬೈಲ್ ಬಳಸಿ ತಂತ್ರಾಂಶವನ್ನು ಬಳಸಿ, ಚುನಾವಣಾ ಅಕ್ರಮಗಳ ಕುರಿತು ಚಿತ್ರೀಕರಿಸಿದ ಮಾಹಿತಿಯನ್ನು ರವಾನಿಸಬಹುದಾಗಿದೆ ಎಂದವರು ನುಡಿದರು. ಈ ಸಂದರ್ಭದಲ್ಲಿ ಮಹಾನಗರಪಾಲಿಕೆಯ ಕೌನ್ಸಿಲ್ ಸೆಕ್ರೆಟರಿ ಗಣಪತಿ ಕಟ್ಟಿನಕೆರೆ ಹಾಗೂ ಪಾಲಿಕೆಯ ಅಧಿಕಾರಿ-ಸಿಬ್ಬಂಧಿಗಳು ಉಪಸ್ಥಿತರಿದ್ದರು.