ಹೊಸದಿಲ್ಲಿ: ಇದೇ ಮೊದಲ ಬಾರಿಗೆ ಮನುವಾದ,ಬ್ರಾಹ್ಮಣವಾದ ಮತ್ತು ಹಿಂದುತ್ವದ ವಿರುದ್ಧ ತಮ್ಮ ಬಲವನ್ನು ಪ್ರದರ್ಶಿಸಲು ಸಹಸ್ರಾರು ಮಹಿಳೆಯರು ಮಾ.10ರಂದು ಆರೆಸ್ಸೆಸ್ನ ಕೇಂದ್ರ ಸ್ಥಾನವಾದ ಮಹಾರಾಷ್ಟ್ರದ ನಾಗ್ಪುರದಲ್ಲಿ ಸಮಾವೇಶಗೊಳ್ಳಲಿದ್ದಾರೆ.
ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಿಳಾ ಕಾರ್ಯಕರ್ತೆ ವಾಣಿ ಸುಬ್ರಮಣಿಯನ್ ಅವರು, ಮನುವಾದದಲ್ಲಿಯ ಗೊಡ್ಡು ಸಂಪ್ರದಾಯ ಮತ್ತು ಮೂಢನಂಬಿಕೆಗಳನ್ನು ಆಧರಿಸಿರುವ ಪುರುಷ ಪ್ರಧಾನ ಮನೋಸ್ಥಿತಿ ಮತ್ತು ಮಹಿಳೆಯರ ಸ್ವಾಂತಂತ್ರವನ್ನು ನಿರ್ಬಂಧಿಸುವ ಪುರುಷ ಪ್ರಾಧಾನ್ಯತೆಗಳಿಂದಾಗಿ ಮಹಿಳೆಯರು ಕಡೆಗಣಿಸಲ್ಪಟ್ಟಿದ್ದಾರೆ. ನಮ್ಮ ಸಂವಿಧಾನವು ನಮಗೆ ಖಚಿತಪಡಿಸಿರುವ ಹಕ್ಕುಗಳು ಮತ್ತು ರಕ್ಷಣೆಯ ಬಗ್ಗೆ ಧ್ವನಿಯೆತ್ತಲು ನಾವು ಒಂದಾಗಲಿದ್ದೇವೆ ಎಂದು ಹೇಳಿದರು.
19ನೇ ಶತಮಾನದ ಖ್ಯಾತ ಮಹಿಳಾ ಹಕ್ಕುಗಳ ಕಾರ್ಯಕರ್ತೆ ಮತ್ತು ಸಮಾಜ ಸುಧಾರಕಿ ಸಾವಿತ್ರಿಬಾಯಿ ಫುಲೆಯವರ 120ನೇ ಪುಣ್ಯತಿಥಿಯ ಅಂಗವಾಗಿ ಹಲವಾರು ಮಹಿಳಾ ಸಂಘಟನೆಗಳು ಮಾ.10ರಂದು ‘ಚಲೋ ನಾಗಪುರ ’ ರಾಷ್ಟ್ರವ್ಯಾಪಿ ಕರೆಯನ್ನು ನೀಡಿವೆ.