ಹೊಸದಿಲ್ಲಿ: ಖ್ಯಾತ ಸಾಹಿತ್ಯ ವಿಮರ್ಶಕ ಹಾಗೂ ಉರ್ದು ಲೇಖಕ ಅಬ್ದುಲ್ ಖವಿ ದೆಸ್ನವಿ ಅವರ 87ನೇ ಜನ್ಮದಿನಾಚರಣೆಯಂದು ಗೂಗಲ್ ಅವರಿಗೆ ಡೂಡಲ್ ಮೂಲಕ ಗೌರವ ಸಮರ್ಪಿಸಿದೆ. ಡೂಡಲ್ ನಲ್ಲಿ ಅಬ್ದುಲ್ ಅವರು ಸಾಹಿತ್ಯ ರಚನೆಯಲ್ಲಿ ತೊಡಗಿರುವುದನ್ನು ತೋರಿಸಲಾಗಿದೆ, ಹಿನ್ನೆಲೆಯಲ್ಲಿ ಉರ್ದು ಭಾಷೆಯ ಬರಹಗಳೂ ಇವೆ. ಬಿಹಾರದ ದೆಸ್ನಾ ಗ್ರಾಮದಲ್ಲಿ 1930ರಲ್ಲಿ ಹುಟ್ಟಿದ್ದ ಅಬ್ದುಲ್ ಖವಿ ಅವರು ಭಾರತದಲ್ಲಿ ಉರ್ದು ಸಾಹಿತ್ಯದ ಅಭಿವೃದ್ಧಿಗೆ ಸಾಕಷ್ಟು ಶ್ರಮ ಪಟ್ಟವರಾಗಿದ್ದರು. ಅವರು ಜುಲೈ 7, 2011ರಂದು ನಿಧನರಾಗಿದ್ದರು.
ಸುಮಾರು ಐದು ದಶಕಗಳಿಗೂ ಹೆಚ್ಚು ಕಾಲ ಉರ್ದು ಸಾಹಿತ್ಯ ಕ್ಷೇತ್ರದಲ್ಲಿ ಕೈಯಾಡಿಸಿದ್ದ ಅವರು ಹಲವಾರು ಉರ್ದು ಕಾದಂಬರಿಗಳು, ಜೀವನಚರಿತ್ರೆ, ಕವನ ಸಂಕಲನಗಳನ್ನು ರಚಿಸಿದ್ದರು. ಸ್ವಾತಂತ್ರ್ರ ಹೋರಾಟಗಾರ ಮೌಲಾನ ಅಬುಲ್ ಕಲಾಂ ಆಝಾದ್ ಅವರ ಜೀವನಾಧರಿತ ‘ಹಯಾತ್-ಎ-ಅಬುಲ್ ಕಲಾಂ ಆಜಾದ್’ ಅವರ ಮಹೋನ್ನತ ಕೃತಿಯಾಗಿತ್ತು. ಅಬ್ದುಲ್ ಖವಿ ಅವರ ಇತರ ಪ್ರಮುಖ ಸಾಹಿತ್ಯ ಕೃತಿಗಳೆಂದರೆ ‘ಸತ್ ತಹ್ರಿರೆನ್,’ ‘ಮೊತಾಲ-ಇ-ಖೂತೂತ್ ಘಾಲಿಬ್,’ ಹಾಗೂ ‘ತಲಾಶ್-ಎ-ಆಝಾದ್.’
ಖ್ಯಾತ ಮುಸ್ಲಿಂ ವಿದ್ವಾಂಸ ಸಯ್ಯದ್ ಸುಲೈಮಾನ್ ನದ್ವಿ ಕುಟುಂಬದಲ್ಲಿ ಜನಿಸಿದ್ದ ಅಬ್ದುಲ್ ಖವಿ ಅವರು ಭೋಪಾಲದ ಸೈಫಿಯ ಸ್ನಾತ್ತಕೋತ್ತರ ಕಾಲೇಜಿನ ಉರ್ದು ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು. ಉರ್ದು ಸಾಹಿತ್ಯ ಕ್ಷೇತ್ರದ ಹಲವು ಖ್ಯಾತನಾಮರಾದ ಜಾವೇದ್ ಅಖ್ತರ್ ಹಾಗೂ ಇಖ್ಬಾಲ್ ಮಸೂದ್ ಅವರ ಶಿಷ್ಯರಾಗಿದ್ದರು.