ಹೊಸದಿಲ್ಲಿ:ಖಾಸಗಿತನ ಮೂಲಭೂತ ಹಕ್ಕು ಎಂಬ ಚಾರಿತ್ರಿಕ ತೀರ್ಪು ಹಾಗೂ ಮಹಾರಾಷ್ಟ್ರದಲ್ಲಿ ಹಸು ಹಾಗೂ ಎತ್ತುಗಳ ಹತ್ಯೆ ನಿಷೇಧ ವಿಷಯದ ಮಧ್ಯೆ ಸಂಬಂಧ ಇರಬಹುದು ಎಂದು ಸುಪ್ರೀಂಕೋರ್ಟ್ ತಿಳಿಸಿದೆ.
ಮಹಾರಾಷ್ಟ್ರ ಪ್ರಾಣಿ ಸುರಕ್ಷಾ ಕಾಯ್ದೆ (ತಿದ್ದುಪಡಿ), 1995ರ ಸೆಕ್ಷನ್ 5(ಡಿ) ಮತ್ತು 9(ಬಿ)ಯನ್ನು ಕಳೆದ ವರ್ಷದ ಮೇ 6ರಂದು ಬಾಂಬೆ ಹೈಕೋರ್ಟ್ ರದ್ದುಗೊಳಿಸಿತ್ತು .
ಸೆಕ್ಷನ್ 5(ಡಿ)ರ ಪ್ರಕಾರ , ಮಹಾರಾಷ್ಟ ರಾಜ್ಯದ ಹೊರಗಡೆ ಹತ್ಯೆ ಮಾಡಲಾದ ಹಸು, ಕೋಣ ಅಥವಾ ಎತ್ತಿನ ಮಾಂಸವನ್ನು ಹೊಂದಿರುವುದು ಅಪರಾಧವಾಗಿದೆ. ಸೆಕ್ಷನ್ 9 (ಬಿ) ಪ್ರಕಾರ , ವ್ಯಕ್ತಿಯೋರ್ವ ತನ್ನ ಬಳಿ ಇರುವ ಮಾಂಸ ಹಸು, ಎತ್ತು ಅಥವಾ ಕೋಣದ ಮಾಂಸ ಅಲ್ಲವೆಂದು ದೃಢಪಡಿಸುವುದು ಕಡ್ಡಾಯವಾಗಿದೆ.
ಹೈಕೋರ್ಟ್ನ ತೀರ್ಪನ್ನು ಮರುಪರಿಶೀಲಿಸಬೇಕೆಂದು ಕೋರಿ ರಾಜ್ಯ ಸರಕಾರ ಸುಪ್ರೀಂಕೋರ್ಟ್ನಲ್ಲಿ ಮನವಿ ಸಲ್ಲಿಸಿತ್ತು. ರಾಜ್ಯದಿಂದ ಹೊರಗೆ ಹತ್ಯೆ ಮಾಡಲಾಗಿರುವ ಪ್ರಾಣಿಗಳ ಮಾಂಸವನ್ನು ಹೊಂದಿರುವುದು ಅಪರಾಧವಲ್ಲ ಎಂಬ ಬಾಂಬೆ ಹೈಕೋರ್ಟ್ನ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಮನವಿಯ ವಿಚಾರಣೆ ಸಂದರ್ಭ ವಕೀಲರ ತಂಡವೊಂದು , ವ್ಯಕ್ತಿಯೋರ್ವ ತನ್ನ ಆಯ್ಕೆಯ ಆಹಾರವನ್ನು ತಿನ್ನುವ ಹಕ್ಕನ್ನು ಇದೀಗ ‘ಖಾಸಗಿತನದ ಹಕ್ಕು’ ತೀರ್ಪಿನಡಿ ರಕ್ಷಿಸಲಾಗಿದೆ ಎಂದು ನ್ಯಾಯಮೂರ್ತಿಗಳಾದ ಎ.ಕೆ.ಸಿರ್ಕಿ ಮತ್ತು ಅಶೋಕ್ ಭೂಷಣ್ ಅವರಿದ್ದ ನ್ಯಾಯಪೀಠಕ್ಕೆ ತಿಳಿಸಿತು.
ಈ ಪ್ರಕರಣದ ತೀರ್ಪು ನೀಡುವ ಮೊದಲು ‘ಖಾಸಗಿತನದ ತೀರ್ಪು’ ಕುರಿತೂ ಪರಿಶೀಲನೆ ನಡೆಸಬೇಕು ಎಂದು ಹಿರಿಯ ವಕೀಲ ಸಿ.ಯು.ಸಿಂಗ್ ಮನವಿ ಮಾಡಿದರು. ಈ ಸಂದರ್ಭ ಹೇಳಿಕೆ ನೀಡಿದ ನ್ಯಾಯಾಲಯ ಪೀಠವು, ಹೌದು .. ಖಾಸಗಿತನದ ಹಕ್ಕು ಮತ್ತು ಈ ವಿಷಯಕ್ಕೆ ಸಂಬಂಧವಿರಬಹುದು ಎಂದು ತಿಳಿಸಿತು.
ಏನನ್ನು ತಿನ್ನಬೇಕು ಮತ್ತು ಯಾವ ಬಟ್ಟೆ ಧರಿಸಬೇಕು ಎಂಬುದನ್ನು ಯಾರೂ ಬಲವಂತಪಡಿಸಲಾಗದು. ಇದು ಖಾಸಗಿತನದ ಹಕ್ಕಿನಡಿ ಬರುತ್ತದೆ ಎಂದು ಸುಪ್ರೀಂಕೋರ್ಟ್ ಗುರುವಾರ ತಿಳಿಸಿತ್ತು. ಅಲ್ಲದೆ ಅನುತ್ಪಾದಕ ಪಶುಗಳನ್ನು ಕೂಡಾ ಕೊಲ್ಲಬಾರದು ಎಂದು 2005ರಲ್ಲಿ ಸುಪ್ರೀಂಕೋರ್ಟ್ನ ಪೀಠವೊಂದು ನೀಡಿದ್ದ ತೀರ್ಪಿನ ಮರುಪರಿಶೀಲನೆ ಆಗಬೇಕು ಎಂದು ವಿಚಾರಣೆ ಸಂದರ್ಭ ನ್ಯಾಯಾಧೀಶರು ಅಭಿಪ್ರಾಯಪಟ್ಟರು.
ನಿಮ್ಮ ಆಯ್ಕೆಯ ಆಹಾರವನ್ನು ತಿನ್ನುವ ಹಕ್ಕನ್ನು ಈಗ ಖಾಸಗಿತನದ ಹಕ್ಕಿನಡಿ ಸಂರಕ್ಷಿಸಲಾಗಿದೆ. ತಿನ್ನುವ ಹಕ್ಕು ಈಗ ನಮ್ಮ ಮೂಲಭೂತ ಹಕ್ಕು ಎಂದು ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಹೇಳಿದ್ದಾರೆ.