ಹೊಸದಿಲ್ಲಿ: ಸಂಜಯ್ ಲೀಲಾ ಭನ್ಸಾಲಿ ನಿರ್ದೇಶನದ ‘ಪದ್ಮಾವತಿ’ ಚಿತ್ರದ ಬಿಡುಗಡೆ ದಿನಾಂಕ ವಿವಾದಗಳ ಕಾರಣದಿಂದಾಗಿ ಈಗಾಗಲೇ ಮುಂದೂಡಲ್ಪಟ್ಟಿದೆ. ಆದರೆ ಈ ನಡುವೆ ಬಿಜೆಪಿ ನಾಯಕರೊಬ್ಬರು ಸಂಜಯ್ ಲೀಲಾ ಭನ್ಸಾಲಿ ಹಾಗು ದೀಪಿಕಾ ಪಡುಕೋಣೆ ತಲೆ ಕಡಿಯುವವರಿಗೆ 10 ಕೋಟಿ ರೂ. ನೀಡುವುದಾಗಿ ಘೋಷಿಸಿ ಹೊಸ ವಿವಾದವನ್ನು ಸೃಷ್ಟಿಸಿದ್ದಾರೆ.
“ಭನ್ಸಾಲಿ ಹಾಗು ದೀಪಿಕಾರ ತಲೆ ಕಡಿದರೆ 5 ಕೋಟಿ ರೂ, ನೀಡುವುದಾಗಿ ಘೋಷಿಸಿದ್ದ ಮೀರತ್ ನ ಯುವಕನನ್ನು ನಾನು ಅಭಿನಂದಿಸುತ್ತೇನೆ. ಅವರಿಬ್ಬರ ತಲೆ ಕಡಿದವರಿಗೆ ನಾವು 10 ಕೋಟಿ ರೂ. ನೀಡುತ್ತೇವೆ ಹಾಗು ಅವರ ಕುಟುಂಬವನ್ನೂ ನೋಡಿಕೊಳ್ಳುತ್ತೇವೆ” ಎಂದು ಬಿಜೆಪಿಯ ಮುಖ್ಯ ಮಾಧ್ಯಮ ಸಂಯೋಜಕ ಪಾಲ್ ಅಮು ಎಂಬವರು ಹೇಳಿದ್ದಾರೆ.
ರಣವೀರ್ ಸಿಂಗ್, ದೀಪಿಕಾ ಪಡುಕೋಣೆ ಹಾಗು ಶಾಹಿದ್ ಕಪೂರ್ ಮುಖ್ಯಭೂಮಿಕೆಯ ಈ ಚಿತ್ರದ ವಿರುದ್ಧ ರಜಪೂತ ಸಮುದಾಯ ಭಾರೀ ಆಕ್ರೋಶ ವ್ಯಕ್ತಪಡಿಸುತ್ತಿದೆ. ಈ ವಿವಾದಗಳ ಹಿನ್ನೆಲೆಯಲ್ಲಿ ಪದ್ಮಾವತಿ ಚಿತ್ರದ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ.