ಹೊಸದಿಲ್ಲಿ: ಮಾನ್ಯತೆ ಪಡೆಯದ ಪತ್ರಕರ್ತರು ಕೂಡ ನ್ಯಾಯಾಲಯಕ್ಕೆ ಮೊಬೈಲ್ ಫೋನ್ ಒಯ್ಯುವ ಅವಕಾಶವನ್ನು ಸುಪ್ರೀಂ ಕೋರ್ಟ್ ನೀಡಿದೆ. ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಸೋಮವಾರ ಈ ಬಗ್ಗೆ ಸುತ್ತೋಲೆ ಹೊರಡಿಸಿದ್ದಾರೆ. ಮಾನ್ಯತೆ ಹೊಂದಿದ ಪತ್ರಕರ್ತರಿಗೆ ಮಾತ್ರ ನ್ಯಾಯಾಲಯಕ್ಕೆ ಮೊಬೈಲ್ ಫೋನ್ ತೆಗೆದುಕೊಂಡು ಹೋಗಲು ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಪತ್ರಕರ್ತರು ಸುಪ್ರೀಂ ಕೋರ್ಟ್ಗೆ ಮೊರೆ ಹೋಗಿದ್ದರು.
ಅಸಿಸ್ಟೆಂಟ್ ರಿಜಿಸ್ಟ್ರಾರ್ ಡಾ. ಸುಶೀಲ್ ಕುಮಾರ್ ಶರ್ಮಾ ಸೋಮವಾರ ಈ ಸುತ್ತೋಲೆ ಬಿಡುಗಡೆ ಮಾಡಿದ್ದಾರೆ. ನ್ಯಾಯಾಲಯದ ಒಳಗೆ ಸೈಲೆಂಟ್ ಮೋಡ್ನಲ್ಲಿ ಮೊಬೈಲ್ ಫೋನ್ಗಳನ್ನು ತೆಗೆದುಕೊಂಡು ಹೋಗಲು ರಿಜಿಸ್ಟ್ರಿಯಿಂದ ಆರು ತಿಂಗಳ ಪಾಸ್ ಪಡೆದ ಮಾಧ್ಯಮ ವ್ಯಕ್ತಿ ಹಾಗೂ ಪತ್ರಕರ್ತರಿಗೆ ಅವಕಾಶ ನೀಡಬೇಕು ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ತಿಳಿಸಿದ್ದಾರೆ ಎಂದು ಶರ್ಮಾ ಸುತ್ತೋಲೆಯಲ್ಲಿ ಹೇಳಿದ್ದಾರೆ.
ಆದಾಗ್ಯೂ, ನ್ಯಾಯಾಲಯದ ಕಲಾಪದ ಸಂದರ್ಭ ಅಡಚಣೆ ಉಂಟಾದಲ್ಲಿ ಮೊಬೈಲ್ ಅನ್ನು ವಶಪಡಿಸಿಕೊಳ್ಳಲಾಗುವುದು ಎಂದು ಎಂದು ನೋಟಿಸ್ ಹೇಳಿದೆ.