ನವದೆಹಲಿ, ಸೆ ೧೯: ಇತ್ತೀಚಿನ ವರ್ಷಗಳಲ್ಲಿಯೇ ಅತ್ಯಂತ ಭೀಕರವಾದ ಧಾಳಿಯಲ್ಲಿ ಭಾನುವಾರ ಹದಿನೇಳು ಯೋಧರು ಹುತಾತ್ಮರಾಗಿ ಹನ್ನೊಂಭತ್ತು ಯೋಧರು ಗಾಯಗೊಂಡಿದ್ದಾರೆ. ಗಾಯಗೊಂಡ ಯೋಧರಲ್ಲಿ ಓರ್ವರು ಭಾನುವಾರ ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದು ಸಾವಿನ ಸಂಖ್ಯೆ 18ಕ್ಕೇರಿದೆ. ಈ ಧಾಳಿಯಲ್ಲಿ ನಾಲ್ವರು ಭಯೋತ್ಪಾದಕರೂ ಹತರಾಗಿದ್ದಾರೆ.
ಹತರಾದ ನಾಲ್ವರೂ ಭಯೋತ್ಪಾದಕರ ಮೃತದೇಹದಲ್ಲಿ ಹಲವಾರು ವಸ್ತುಗಳಿದ್ದು ಇವುಗಳಲ್ಲಿ ಪಾಕಿಸ್ತಾನದ ಗುರುತುಗಳಿವೆ. ಮೇಲ್ನೋಟಕ್ಕೆ ಈ ಭಯೋತ್ಪಾದಕರು ಜೈಶ್ ಎ ಮೊಹಮ್ಮದ್ ತಂಜೀಮ್ ಸಂಘಟನೆಗೆ ಸೇರಿದವರಾಗಿದ್ದಾರೆ, ಈ ವಿಷಯವನ್ನು ಪಾಕಿಸ್ತಾನಾದ ಉನ್ನತ ಮಿಲಿಟರಿ ಅಧಿಕಾರಿ DGMO ರವರಿಗೆ ತಿಳಿಸಿದ್ದೇನೆ ಎಂದು ಭಾರತದ ಸೇನಾಪಡೆಯ ಲೆ. ಜೆನರಲ್ ಸಿಂಗ್ ರವರು ತಿಳಿಸಿದ್ದಾರೆ.
ನಿನ್ನೆ ಈ ಧಾಳಿಯ ಬಗ್ಗೆ ತಮ್ಮ ಕಳವಳವನ್ನು ತೋರ್ಪಡಿಸಿರುವ ಪ್ರಧಾನಿ ಮೋದಿಯವರು ಉನ್ನತ ಸಚಿವರ ತುರ್ತು ಸಭೆಯನ್ನು ಕರೆದು ಈ ವಿಷಯದಲ್ಲಿ ಸಮಾಲೋಚಿಸಿದರು. ಗೃಹಮಂತ್ರಿ ರಾಜನಾಥ ಸಿಂಗ್, ರಕ್ಷಣಾ ಸಚಿವ ಮನೋಹರ್ ಪರಿಕ್ಕರ್, ವಾಣಿಜ್ಯ ಸಚಿವ ಅರುಣ್ ಜೈಟ್ಲೀ, ರಾಷ್ಟ್ರೀಯ ಸುರಕ್ಷಾ ಸಲಹಾಕಾರ ಅಜಿತ್ ಡೋವಲ್, ಭೂಸೇನಾ ಜನರಲ್ ದಲಬೀರ್ ಸಿಂಗ್ ಸುಹಾಗ್ ಸಹಿತ ಹಲವು ಪ್ರಮುಖ ಅಧಿಕಾರಿಗಳು ಈ ಸಭೆಯಲ್ಲಿ ಉಪಸ್ಥಿತರಿದ್ದರು.
ಈ ಸಭೆಯಲ್ಲಿ ಪಾಕಿಸ್ತಾನದಿಂದ ನಡೆದ ಧಾಳಿಯನ್ನು ತೀವ್ರವಾಗಿ ಖಂಡಿಸಿರುವ ಪ್ರಧಾನಿಯವರು ಇದಕ್ಕೆ ಕಾರಣವಾದ ಮೂಲನಗರ ಇಸ್ಲಾಮಾಬಾದ್ ಅನ್ನು ವಿಶ್ವಮಟ್ಟದಲ್ಲಿ ಪ್ರತ್ಯೇಕಗೊಳಿಸುವಂತೆ ಕರೆನೀಡಿದರು.
ಭಾರತೀಯ ಸುರಕ್ಷಾ ಮತ್ತು ಮಾಹಿತಿ ದಳಕ್ಕೆ ಈ ಬಗ್ಗೆ ಸಾಧ್ಯವಾದ ಎಲ್ಲಾ ಮಾಹಿತಿಗಳನ್ನು ಸಂಗ್ರಹಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಯೋತ್ಪಾದನೆಗೆ ಆ ದೇಶ ನೀಡುತ್ತಿರುವ ಸಹಕಾರ ಅಥವಾ ಪ್ರೋತ್ಸಾಹದ ಬಗ್ಗೆ ವಿವರಗಳನ್ನು ತಿಳಿಸುವಂತೆ, ತನ್ಮೂಲಕ ಭಯೋತ್ಪಾದನೆಯ ಹಿಂದಿನ ಉದ್ದೇಶಗಳು ಬಯಲಾಗುವಂತೆ ಆದೇಶಿಸಿದ್ದಾರೆ.