ನವದೆಹಲಿ, ಸೆ ೨೫: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ’ಸ್ವಚ್ಛ ಭಾರತ’ ಅಭಿಯಾನವನ್ನು ಇಂದಿನಿಂದ ಒಂದು ವಾರದವರೆಗೆ ದೇಶದಾದ್ಯಂತ ನಡೆಸಲಾಗುವುದು.
’ಸ್ವಚ್ಛ ಭಾರತ ವಾರ’ ಎಂಬ ಹಣೆಪಟ್ಟಿಯನ್ನು ಹೊತ್ತ ಈ ಅಭಿಯಾನ ಎರಡು ವರ್ಷದ ಹಿಂದೆ, ೨೦೧೧ರ ಗಾಂಧಿ ಜಯಂತಿಯಂದು ಪ್ರಾರಂಭವಾಗಿದ್ದು ಇದೇ ಅಭಿಯಾನದ ಹೆಸರಿನಲ್ಲಿ ಉದ್ಘಾಟನೆಗೊಂಡಿತ್ತು.
ಈ ಅಭಿಯಾನದ ಅಂಗವಾಗಿ ಸೆ. ೩೦ ರಂದು ವಿಜ್ಞಾನ ಭವನದಲ್ಲಿ India Sanitation Conference (INDOSAN-2016) ಎಂಬ ಸ್ವಚ್ಛತಾ ಕಾರ್ಯಕ್ರಮವನ್ನೂ ಆಯೋಜಿಸಲಾಗಿದೆ. ಈ ಅಭಿಯಾನವನ್ನು ನಗರಾಭಿವೃದ್ದಿ ಘಟಕ ಹಾಗೂ ಕುಡಿಯುವ ನೀರಿನ ಸಚಿವಾಲಯ ಹಮ್ಮಿಕೊಂಡಿದೆ.
ಇಂಡೋಸಾನ್ ಕಾರ್ಯಕ್ರಮವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಉದ್ಘಾಟಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಹಲವು ರಾಜ್ಯಗಳ ಮುಖ್ಯಮಂತ್ರಿಗಳೂ, ಪ್ರಮುಖ ನಗರಾಭಿವೃದ್ದಿ ಸಚಿವರು, ಜಿಲ್ಲಾಧಿಕಾರಿಗಳೂ ಆಗಮಿಸಲಿದ್ದಾರೆ.
ಈ ಸಂದರ್ಭದಲ್ಲಿ ದೇಶದಲ್ಲಿ ಸ್ವಚ್ಛತೆಗಾಗಿ ಕಾರ್ಯನಿರ್ವಹಿಸಿದ ಹನ್ನೊಂದು ವಿಭಾಗದ ಪ್ರಮುಖ ವ್ಯಕ್ತಿಗಳನ್ನು ಪ್ರಧಾನಿಯವರು ಸನ್ಮಾನಿಸಲಿದ್ದಾರೆ.