ಮುಂಡಗೋಡ: ತಾಲೂಕಿನ ಚವಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರವಳ್ಳಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಕಾಡಾನೆಗಳ ಹಿಂಡು ತೋಟ ಮತ್ತು ಗದ್ದೆಗಳಿಗೆ ನುಗ್ಗಿ ಬಾಳೆಯನ್ನು ನಾಶ ಮಾಡಿರುವುದಲ್ಲದೇ ಗದ್ದೆಗಳಲ್ಲಿನ ಭತ್ತದ ಪೈರು ನಾಶ ಮಾಡಿವೆ. ಮುಂದುವರೆದ ಕಾಡಾನೆಗಳ ದಾಳಿಯಿಂದ ಸುತ್ತಮುತ್ತಲಿನ ಗ್ರಾಮದ ರೈತರು ಮತ್ತಷ್ಟು ಆತಂಕಕ್ಕೀಡಾಗಿದ್ದಾರೆ.
ಮೂರು ಕಾಡಾನೆಗಳ ಗುಂಪು ಸೇರಿ ಕರವಳ್ಳಿಯ ಎನ್.ವಿ.ಫಿಲಿಪ್ ಎಂಬುವರಿಗೆ ಸೇರಿದ ತೋಟದಲ್ಲಿ ಸುಮಾರು 200ಬಾಳೆಗಿಡಗಳನ್ನು ನೆಲಕ್ಕುರುಳಿಸಿ ನಾಶ ಮಾಡಿವೆ. ಇದಲ್ಲದೇ ಇದೇ ಗ್ರಾಮದ ನಂದಾ ಬೆಂಡಲಗಟ್ಟಿ ಎಂಬುವರ ಸುಮಾರು ಒಂದೂವರೆ ಎಕರೆಯಷ್ಟು ಭತ್ತದ ಗದ್ದೆಯನ್ನು ತಿಂದು ತುಳಿದು ನಾಶ ಮಾಡಿವೆ. ಈ ರೀತಿ ಪ್ರತಿ ವರ್ಷ ನಡೆಯುತ್ತಿರುವ ಕಾಡಾನೆಗಳ ದಾಳಿಯಿಂದ ತಮ್ಮ ಬೆಳೆಯು ನಾಶವಾಗುತ್ತಿರುವುದನ್ನು ಕಂಡ ರೈತರು ರೋಸಿ ಹೋಗಿದ್ದಾರೆ.
ನಮ್ಮ ಭಾಗದಲ್ಲಿಯೂ ಶುಕ್ರವಾರ ರಾತ್ರಿ ಸುಮಾರು 13ಕಾಡಾನೆಗಳ ಹಿಂಡು ರೈತರೊಬ್ಬರ ಕಟಾವು ಮಾಡುವ ಹಂತದಲ್ಲಿದ್ದ ಅರ್ಧ ಎಕರೆಯಷ್ಟು ನಾಟಿ ಭತ್ತದ ಗದ್ದೆ ನಾಶ ಮಾಡಿವೆ ಮತ್ತು ಇತ್ತೀಚಿನ ದಿನಗಳಲ್ಲಿ ತಾಲೂಕಿನ ಚವಡಳ್ಳಿ, ಗುಂಜಾವತಿ, ಮೈನಳ್ಳಿ ಮತ್ತು ನಾಗನೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಡಾನೆಗಳ ದಾಳಿ ಹೆಚ್ಚಾಗುತ್ತಿದ್ದು ಇದನ್ನು ನಿಯಂತ್ರಿಸುವಲ್ಲಿ ಅರಣ್ಯ ಇಲಾಖೆಯವರು ವಿಫಲರಾಗಿದ್ದಾರೆ ಎಂದು ಮೈನಳ್ಳಿ ರೈತ ಸಿ.ಕೆ.ಅಶೋಕ ಪತ್ರಿಕೆಗೆ ತಿಳಿಸಿ ಅರಣ್ಯ ಇಲಾಖೆಯಿಂದ ಇದಕ್ಕೊಂದು ಶಾಶ್ವತ ಪರಿಹಾರವಾಗಬೇಕು ಎಂದು ಆಗ್ರಹಿಸಿದರು.