ಮುಂಡಗೋಡ: ಗೋವಿನಜೋಳ ಗದ್ದೆಯಲ್ಲಿ ಬೆಳದಿರುವ ಹುಲ್ಲು ( ಹಸಿರು ಮೇವು) ತಿಂದು ಸುಮಾರು ೨೨ ಜಾನುವಾರಗಳು ಅಸ್ವಸ್ಥಗೊಂಡಿದ್ದು ಅವುಗಳಲ್ಲಿ ಹತ್ತ ಜಾನುವಾರಗಳು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.
ತಾಲೂಕಿನ ಇಂದೂರ, ಕೊಪ್ಪ, ಇಂದಿರಾನಗರ, ಮಜ್ಜಿಗೇರಿ, ನ್ಯಾಸರ್ಗಿ ಗ್ರಾಮದಲ್ಲಿ ಕಳೆದ ಒಂದು ವಾರದ ಅವಧಿಯಲ್ಲಿ ಹತ್ತರಷ್ಟು ಎತ್ತುಗಳು, ಕಳೆನಾಶಕ ಸಿಂಪಡಿಸಿದ ಮೇವು ತಿಂದು ಮೃತಪಟ್ಟಿದ್ದು, ಇಂದೂರ-೨, ಇಂದಿರಾನಗರ-೨, ಮಂಜ್ಜಿಗೇರಿ-೩, ನ್ಯಾಸರ್ಗಿ-೨, ನಂದಿಗಟ್ಟಿ-೧. ಒಟ್ಟೂ ೧೦ ಹಸುಗಳು ಸಾವನ್ನಪ್ಪಿವೆ. ೨೫ಕ್ಕೂ ಹೆಚ್ಚು ಜಾನುವಾರುಗಳಿಗೆ ಚಿಕಿತ್ಸೆ ನೀಡಲಾಗಿದೆ.
ತಾಲೂಕಿನ ಮುಂಡಗೋಡ ಹೋಬಳಿಯ ಕೆಲವೆಡೆ ಗೋವಿನಜೋಳ ಬೆಳೆಯಲಾಗಿದ್ದು, ಅದರಲ್ಲಿ ಬೆಳದಿರುವ ಹುಲ್ಲು ನಶಿಸಲಿ ಎಂದು ರೈತರು ಲಾಡಸ್, ಸ್ಟಿಜರ್(ಕಳೆನಾಶಕ ಔಷಧಿ) ಎಣ್ನೆಯನ್ನು ಸಿಂಪರಣೆ ಮಾಡಿದ್ದು, ಸಿಂಪರಣೆ ಮಾಡಿ ಐದಾರು ದಿನಗಳವರಗೆ ಹುಲ್ಲು ಹಸಿರಾಗಿಯೇ ಇರುತ್ತದೆ. ನಂತರ ಒಣಗುತ್ತಾ ಹೋಗುತ್ತದೆ. ಆದರೆ ಕಳೆನಾಶಕ ಸಿಂಪಡಿಸಿದ ಮೇವನ್ನು ಜಾನಿವಾರು ತಿಂದು ಅಸ್ವಸ್ಥಗೊಂಡು ಸಾಯುತ್ತಿವೆ. ಇದರಿಂದ ಇಲ್ಲಿನ ರೈತರು ಆತಂಕಗೊಂಡಿದ್ದಾರೆ.
ರೈತರಲ್ಲಿ ಜಾಗೃತಿ..
ಗೋವಿನಜೋಳ ಜಮೀನಿನಲ್ಲಿ ಕಳೆನಾಶಕ ಸಿಂಪರಣೆ ಮಾಡಿ ಅದೆ ಹುಲ್ಲನ್ನು ಜಾನುವಾರುಗಳಿಗೆ ಮೇವಿನ ರೂಪದಲ್ಲಿ ಹಾಕುವುದಾಗಲಿ. ಗದ್ದೆಯಲ್ಲಿ ಮೇಯಿಸುವುದಾಗಲಿ ಮಾಡಬಾರದು ಎಂದು ಇಂದೂರ ಗ್ರಾಮದ ಸುತ್ತ-ಮುತ್ತಲಿನ ಗ್ರಾಮಗಳಲ್ಲಿ ಡಂಗುರ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ.
ಪಶು ವೈದ್ಯರ ಹೇಳಿಕೆ...
ಗೋವಿನಜೋಳದ ಗದ್ದೆಯಲ್ಲಿ ಬೆಳೆದಿರುವ ಹಸಿರು ಹುಲ್ಲನ್ನು ತಿಳಿಯದೇ, ಕೆಲವರು ಕೊಯ್ಲು ಮಾಡಿಕೊಂಡು ಜಾನುವಾರುಗಳಿಗೆ ಹಾಕುವುದರಿಂದ ಇಂತಹ ಘಟನೆಗಳು ಜರುಗುತ್ತಿವೆ. ಕಳೆನಾಶಕ ಸಿಂಪಡಿಸಿದ ಹಸಿರು ಮೇವು ತಿನ್ನುವುದರಿಂದ, ಜಾನುವಾರುಗಳ ಬಾಯಲ್ಲಿ ಜೊಲ್ಲು ಜೋರುವುದು, ನಡುಕ ಉಂಟಾಗುವುದು, ಹೊಟ್ಟೆ ಉಬ್ಬುವುದು, ದೇಹದ ಉಷ್ಣತೆಯಲ್ಲಿ ಏರಿಳಿತ ಉಂಟಾಗಿ ಸಾಯುತ್ತಿವೆ. ಬೆಳಿಗ್ಗೆಯಿಂದ ಮೇಯ್ದು ಸಂಜೆಯ ವೇಳೆಗೆ ಮೇಲಕು ಹಾಕುವ ಸಂಸರ್ಭದಲ್ಲಿ ರಸ ಒಡೆದು, ರಕ್ತದಲ್ಲಿ ವಿಷದ ಅಂಶ ಸೇರುತ್ತದೆ ಇದರಿಂದ ಏಕಾಏಕಿ ಸಾವನ್ನಪ್ಪುತ್ತವೆ ಎಂದು ವೈದ್ಯರು ತಿಳಿಸಿದರು.
ಮಜ್ಜಿಗೇರಿ ಗ್ರಾಮದಲ್ಲಿ ಮೂರು ಹಸಿರು ಜಾನುವಾರು ಹಸಿರು ಮೇವು ತಿಂದು ಮೃತಪಟ್ಟಿವೆ. ಇದಲ್ಲದೆ ನ್ಯಾಸರ್ಗಿ, ಇಂದಿರಾನಗರ, ಇಂದೂರು, ನಂದಿಗಟ್ಟಿ ಗ್ರಾಮದಲ್ಲಿ ಇಂತಹ ಘಟನೆಗಳು ಜರುಗಿವೆ. ಈ ಬಗ್ಗೆ ರೈತರಲ್ಲಿ ತಿಳುವಳಿಕೆ ಮೂಡಿಸಲಾಗುತ್ತಿದ್ದು, ಗೋವಿನಜೋಳ ಗದ್ದೆಯಲ್ಲಿರುವ ಹಸಿರು ಹುಲ್ಲನ್ನು ಜಾನುವಾರುಗಳಿಗೆ ಹಾಕದಂತೆ ಸೂಚಿಸಲಾಗುತ್ತಿದೆ. ಈ ಬಗ್ಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಡಂಗುರ ಹೊಡೆಸಿ ಜಾಗೃತಿ ಮೂಡಿಸಲಾಗುತ್ತದೆ ಎಂದು ತಾಲ್ಲೂಕು ಪಶು ವೈದ್ಯಾಧಿಕಾರಿ ಅರವಿಂದ ಹುಜರಿತ್ತಿ ಹೇಳಿದರು.
‘ಗೋವಿನಜೋಳ ಹೊ ಬೀಡುವ ವರಗೆ ರೈತರು ಗೋವಿನಜೋಳ ಸೇರಿದಂತೆ ಕಳೆನಾಶಕ ಸಿಂಪರಣೆ ಮಾಡಿದ ಹುಲ್ಲನ್ನು ಜಾನುವಾರುಗಳಿಗೆ ತಿನ್ನಿಸಬಾರದು, ಕಳೆನಾಶಕ ಸಿಂಪರಣೆ ಮಾಡಿದ ಮೇವು ತಿನ್ನುವುದರಿಂದ ಎತ್ತುಗಳ ಹೊಟ್ಟೆ ಉಬ್ಬಿ ಸಾಯುತ್ತಿವೆ’
ಡಾ.ಜಯಚಂದ್ರ ಕೆಂಪಶಿ ಪಶುವೈದ್ಯ ಇಂದೂರ.
‘ಸಾಲಾ ಮಾಡಿ ಕಷ್ಟಪಟ್ಟು ಹಸು ತಂದಿದ್ದೆ ಆದರೆ ಪ್ರತಿ ವರ್ಷದಂತೆ ಈ ವರ್ಷವು ಗೋವಿನಜೋಳದಲ್ಲಿ ಬೆಳದಿರುವ ಮೇವನ್ನು ಹಸುಗೆ ತಿನ್ನಿಸಿದೆ, ತಿಂದು ಒಂದೆ ದಿನದಲ್ಲಿ ಹಸು ಸಾವನ್ನಪ್ಪಿದೆ ಇದರಿಂದ ಮನಸಿಗೆ ತುಂಬಾ ಆಘಾತವಾಗಿದೆ...’
ಯಲ್ಲಪ್ಪ ಓಣಿಕೇರಿ ಇಂದೂರ ರೈತ.