ಮುಂಡಗೋಡ: ಗ್ರಾ.ಪಂ ವ್ಯಾಪ್ತಿಯ ಕೆಲಗ್ರಾಮಗಳಲ್ಲಿ ವಸತಿಯೋಜನೆಯಡಿಯಲ್ಲಿ ಮಂಜುರಾದ ಮನೆಗಳಿಗೆ ಪಟ್ಟನೀಡದೆ ಇರುವುದರಿಂದ ಫಲಾನುಭವಿಗಳು ತಾಪತ್ರೆ ಪಡುತ್ತಿದ್ದಾರೆ. ಬಡವರಿಗೆ ಪಟ್ಟಾ ಹಂಚಿಕೆಯಲ್ಲಿ ವಿಳಂಬ ನೀತಿಯನ್ನು ಅನುಸರಿಸುತ್ತಿದ್ದೀರೆಂದು ಜಿ.ಪಂ. ಸದಸ್ಯ ರವಿಗೌಡ ಪಾಟೀಲ ಪಂಚಾಯಿತಿ ಅಭಿವೃದ್ಧಿ ಅಧಿಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಅವರು ಗುರುವಾರ ಪಟ್ಟಣದ ತಾಲೂಕು ಪಂಚಾಯತ ಸಭಾಭವನದಲ್ಲಿ ನಡೆದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು. ಇದಕ್ಕೆ ಉತ್ತರಿಸಿದ ಪಿ.ಡಿ.ಒ.ಗಳು ಈಗಾಗಲೇ ಫಲಾನುಭವಿಗಳಿಗೆ ಪಟ್ಟಾ ವಿತರಣೆ ಮಾಡಲಾಗಿದೆ. 2016-17ನೇ ಸಾಲಿನ ಬಸವ ವಸತಿ ಯೋಜನೆಯಡಿಯಲ್ಲಿ ಮಂಜೂರಿ ಪತ್ರ ವಿತರಣೆಯಾದ 90ದಿನಗಳ ಒಳಗಾಗಿ ಜಿ.ಪಿ.ಎಸ್. ಮಾಡಿಸಿ ಕನಿಷ್ಠ ಒಂದಾದರೂ ಕಂತನ್ನು ತೆಗೆದುಕೊಳ್ಳಬೇಕು ಇಲ್ಲವಾದಲ್ಲಿ ಸ್ವಯಂಚಾಲಿತವಾಗಿ ಆನ್ಲೈನ್ನಲ್ಲಿ ಫಲಾನುಭವಿಗಳ ಖಾತೆಯು ಲಾಕ್ ಆಗುತ್ತದೆ ಎಂದು ಹೇಳಿದರು.
ನೀವು ಪಟ್ಟಾ ಇಟ್ಟುಕೊಂಡು ಸುಮ್ಮನೇ ಕುಳಿತುಕೊಳ್ಳಬೇಡಿ. ಈ ಸಮಸ್ಯೆಗಳ ಬಗ್ಗೆ ನೀವು ತಾ.ಪಂ., ಜಿ.ಪಂ.ಗಳಿಗೆ ಹಾಗೂ ನಿಗಮಕ್ಕೆ ಮಾಹಿತಿ ನೀಡಬೇಕು ಹಾಗೂ ತಾಲೂಕಿನ 16 ಗ್ರಾಮ ಪಂಚಾಯತಿ ಪಿ.ಡಿ.ಒ.ಗಳು ಶಾಸಕರಿಗೆ ಮತ್ತು ಮೇಲಾಧಿಕಾರಿಗಳಿಗೆ ಮಾಹಿತಿಯನ್ನು ನೀಡಬೇಕು ಎಂದು ರವಿಗೌಡ ಪಿ.ಡಿ.ಒ.ಗಳಿಗೆ ಸೂಚಿಸಿದರು.
ತಾಲೂಕಿನ ಟಿಬೇಟಿ ಕಾಲೋನಿ, ಯಲ್ಲಾಪುರ ಹಾಗೂ ಪಾಳಾ ರಸ್ತೆಯಲ್ಲಿರುವ ಆತಂಕ ಮರಗಳನ್ನು ಕಡಿಯಲು ಲೋಕೋಪಯೋಗಿ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸಭೆಯಲ್ಲಿ ತಾ.ಪಂ.ಸದಸ್ಯರು ಒತ್ತಾಯಿಸಿದರು.
ತಾಲೂಕಿನಲ್ಲಿ ಕಳೆದ ವರ್ಷ ಭತ್ತ ಬೆಳೆಯುವ 9800ಹೆಕ್ಟೆರ್ ಪ್ರದೇಶದಲ್ಲಿ ಬೆಳೆಯಲಾಗಿತ್ತು ಈ ಬಾರಿ 9000ಹೆಕ್ಟೆರ್ ನಲ್ಲಿ ಬೆಳೆಯಲಾಗಿದೆ. ನೀರಿನ ಕೊರತೆಯಿಂದ ಭತ್ತದ ಬಿತ್ತನೆ ಕಡಿಮೆ ಪ್ರದೇಶದಲ್ಲಿಯಾಗಿದೆ ಎಂದರು. ಈವರೆಗೆ ಮಳೆ ಪ್ರಮಾಣ ವಾಡಿಕೆಗಿಂತ ಶೇ15ರಷ್ಟು ಕಡಿಮೆಯಾಗಿದೆ. ಭತ್ತಕ್ಕೆ ಬೆಂಕಿ ರೋಗ ಹರಡುವ ಸಂಭವವಿದೆ. ಇದನ್ನು ಹತೋಟಿ ತರಲು ಮುನ್ನೆಚ್ಚರಿಕೆ ವಹಿಸಲಾಗಿದೆ. 2016-17ನೇ ಸಾಲಿನ ಬೆಳೆ ವಿಮೆ 16ಕೋಟಿ ಬಂದಿದ್ದು 2017-18ನೇ ಸಾಲಿನ ವಿಮೆ ಇನ್ನೆರಡು ದಿನಗಳಲ್ಲಿ ಜಮಾ ಆಗಲಿದೆ ಎಂದು ಕೃಷಿ ಅಧಿಕಾರಿ ತಿಳಿಸಿದರು.
ಮಂಜೂರಾದ ಎಲ್ಲಾ ಕಾಮಗಾರಿಗಳನ್ನು ಮಳೆಗಾಲ ಇರುವುದರಿಂದ ಸ್ಥಗಿತ ಮಾಡಲಾಗಿದೆ. ತಾಲೂಕಿನ ಟಿಬೇಟಿ ಕಾಲೋನಿ, ಯಲ್ಲಾಪುರ ಹಾಗೂ ಪಾಳಾ ರಸ್ತೆಯಲ್ಲಿರುವ ಅಪಘಾತಕ್ಕೆ ಅಹ್ವಾನ ನೀಡುವ ಮರಗಳನ್ನು ಕಡಿಯಲು ಲೋಕೋಪಯೋಗಿ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ತಾ.ಪಂ.ಅಧ್ಯಕ್ಷೆ ದಾಕ್ಷಾಯಣಿ ಸುರಗೀಮಠ ಹಾಗೂ ತಾ.ಪಂ.ಸದಸ್ಯರು ಒತ್ತಾಯಿಸಿದರು.
ತಾಲೂಕಿನ ನ್ಯಾಸರ್ಗಿ ಗ್ರಾಮದ ಹೊಲ ಒಂದರಲ್ಲಿ ವಿದ್ಯುತ್ ಲೈನಗಳು ಜೋತು ಬಿದ್ದು ಮೃತ್ಯುವಿಗೆ ಆಹ್ವಾನ ನೀಡುವಂತಿದ್ದರೂ ಈವರೆಗೆ ಹೆಸ್ಕಾಂ ಇಲಾಖೆಯವರು ಗಮನ ಹರಿಸಿಲ್ಲ ಎಂದು ನ್ಯಾಸರ್ಗಿ ಗ್ರಾಮದ ರೈತ ಶಿವಾನಂದ ಕುರುಬರ ಸಭೆಯಲ್ಲಿ ದೂರಿದರು. ಅದಕ್ಕುತ್ತರವಾಗಿ ಹೆಸ್ಕಾಂ ಅಧಿಕಾರಿ ಶೀಘ್ರದಲ್ಲಿ ಸರಿಪಡಿಸುವುದಾಗಿ ಭರವಸೆ ನೀಡಿದರು.
ತಾ.ಪಂ.ಅಧ್ಯಕ್ಷೆ ದಾಕ್ಷಾಯಣಿ ಸುರಗೀಮಠ, ಕಾರ್ಯನಿರ್ವಹಣಾಧಿಕಾರಿ ಎಚ್.ಪೂಜೇರಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಜರೀನಾಬಾನು ನಾಗರೊಳ್ಳಿ, ತಾ.ಪಂ. ಸದಸ್ಯ ರಮೇಶ ರಾಯ್ಕರ, ಗಣಪತಿ ವಡ್ಡರ, ಹಸನಖಾನ ದುಂಡಶಿ , ಸೇರಿದಂತೆ ಕೆಲ ತಾ.ಪಂ.ಸದಸ್ಯರು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.