ಮುಂಡಗೋಡ: ತೀವ್ರ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಈ ಸಂದರ್ಭದಲ್ಲಿಯು ಕೂಡ ಪಾಳಾ, ಮಳಗಿ, ಕೋಡಂಬಿ ಸೇರಿದಂತೆ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ತಾಲೂಕಿನ ಮಳಗಿ ಧರ್ಮಾ ಜಲಾಶಯದಿಂದ ಏಕಾ ಏಕಿ ಹಾನಗಲ್ ತಾಲೂಕಿಗೆ ಕಳೆದ ಎರಡು ದಿನಗಳಿಂದ ನೀರು ಬಿಡಲಾಗಿದ್ದು, ಸ್ಥಳಿಯ ರೈತ ಹಾಗೂ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಬಿಸಿಲಿನ ತಾಪಮಾನದಿಂದ ಬೋರವೆಲ್ ಹಾಗೂ ಬಾವಿಗಳ ನೀರು ಬತ್ತಿ ಹೋಗಿದ್ದು, ಕುಡಿಯುವ ನೀರಿನ ಪರಿಸ್ಥಿತಿ ಹೇಗಪ್ಪ ಎಂದು ಇಲ್ಲಿಯ ಜನ ಚಿಂತಿಸುತ್ತಿರುವಾಗಲೇ ಹಾನಗಲ್ ಚಿಕ್ಕನೀರಾವರಿ ಇಲಾಖೆಯವರು ಜಲಾಶಯದಿಂದ ಹಾನಗಲ್ ತಾಲೂಕಿಗೆ ನೀರು ಹರಿಸಿಕೊಂಡಿದ್ದರಿಂದ ಸ್ಥಳಿಯರು ತೀವ್ರ ಅಸಮಾದಾನಗೊಂಡಿದ್ದಾರೆ. ಸಮರ್ಪಕ ಮಳೆಯಾಗದ ಕಾರಣದಿಂದ ಸ್ಥಳಿಯರಿಗೆ ಕುಡಿಯುವ ನೀರಿನ ಸಮಸ್ಯೆಯಾಗುತ್ತದೆ ಎಂದು ಸ್ಥಳಿಯ ರೈತರು ಹಾಗೂ ಸಾರ್ವಜನಿಕರು ಹಾನಗಲ್ ತಾಲೂಕಿಗೆ ನೀರು ಬಿಡದಂತೆ ಈ ಹಿಂದೆ ಪ್ರತಿಭಟನೆ ಕೂಡ ಮಾಡಿದ್ದರು. ಆಗಲೇ ಸಾಕಷ್ಟು ಗೊಂದಲ ಸೃಷ್ಟಿಯಾಗಿತ್ತು. ಆದರೆ ಈಗ ಮತ್ತೆ ಜಲಾಶಯದ ಗೇಟ್ ತೆಗೆದು ನೀರು ಬಿಡಲಾಗಿದ್ದು, ಸ್ಥಳಿಯರನ್ನು ಮತ್ತಷ್ಟು ಕೆರಳಿಸಿದೆ.
ಸ್ಥಳಿಯರ ದೂರಿನ ಮೆರೆಗೆ ಮುಂಡಗೋಡ ತಹಸೀಲ್ದಾರ ಅಶೋಕ ಗುರಾಣ ಶುಕ್ರವಾರ ಸ್ಥಳಕ್ಕೆ ಬೇಟಿ ನೀಡಿ ತಾಲೂಕಿನಲ್ಲಿಯೇ ಸಾಕಷ್ಟು ಕುಡಿಯುವ ನೀರಿನ ಅಭಾವ ಇದೆ. ಇಂತಹ ಪರಿಸ್ಥಿತಿಯಲ್ಲಿ ನೀರು ಬಿಡಲಾಗುವುದಿಲ್ಲ ಎಂದು ಪೊಲೀಸ ಭದ್ರತೆಯ ನಡುವೆ ಸದ್ಯ ನೀರು ಹರಿಸುವುದನ್ನು ಸ್ಥಗಿತಗೊಳಿಸಿದ್ದಾರೆ.
ಹೇಳಿಕೆ: ತಮ್ಮ ಗಮನಕ್ಕೆ ತಾರದೇ ಹಾನಗಲ್ ತಾಲೂಕಿನ ಚಿಕ್ಕನೀರಾವರಿ ಇಲಾಖೆಯವರು ಧರ್ಮಾ ಜಲಾಶಯದಿಂದ ನೀರು ಬಿಟ್ಟುಕೊಂಡಿದ್ದರು. ಸದ್ಯ ನೀರು ಹರಿಸುವುದನ್ನು ಬಂದ್ ಮಾಡಲಾಗಿದೆ. ಹಾನಗಲ್ ಪಟ್ಟಣಕ್ಕೆ ಕುಡಿಯುವ ನೀರಿನ ಸಮಸ್ಯೆ ಇದೆ ಹಾಗಾಗಿ ನೀರು ಬಿಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಸ್ಥಳಿಯ ಉಪವಿಭಾಗಾಧಿಕಾರಿಗಳ ಅನುಮತಿ ಪಡೆದುಕೊಂಡು ಬನ್ನಿ ಎಂದು ಅವರಿಗೆ ತಿಳಿಸಲಾಗಿದೆ.
ಅಶೋಕ ಗುರಾಣ , ಮುಂಡಗೋಡ ತಹಸೀಲ್ದಾರ
ಹೇಳಿಕೆ: ನೀರು ಸರಬರಾಜು ಮಾಡುವ ಸಿಬ್ಬಂದಿ ಹಾಗೂ ಹಾನಗಲ್ ತಾಲೂಕಿನ ಚಿಕ್ಕ ನೀರಾವರಿ ಇಲಾಖೆ ಅಧಿಕಾರಿಗಳು ಯಾರ ಗಮನಕ್ಕೂ ತಾರದೇ ನಿರಂತರ ನೀರು ಬಿಟ್ಟುಕೊಳ್ಳುತ್ತಿದ್ದಾರೆ. ಇದರಿಂದ ಕೆಲವೇ ದಿನಗಳಲ್ಲಿ ಜಲಾಶಯದ ನೀರು ಸಂಪೂರ್ಣ ಖಾಲಿಯಾಗಲಿದೆ. ಹಾಗೇನಾದರು ಆದಲ್ಲಿ ಇಲ್ಲಿಯ ಜನ ಜಾನುವಾರುಗಳು ಕುಡಿಯುವ ನೀರಿಗೆ ಪರದಾಡಬೇಕಾಗುತ್ತದೆ. ಹಾಗಾಗಿ ಸ್ಥಳಿಯ ಅಧಿಕಾರಿಗಳು ಕಾನೂನು ರೀತಿ ದಿಟ್ಟ ನಿರ್ಧಾರ ಕೈಗೊಂಡು ಜಲಾಶಯದ ನೀರು ಉಳಿಸಬೇಕಿದೆ.
ರಾಜೇಂದ್ರ ನಾಯ್ಕ, ರೈತ ಮುಖಂಡ