ಮನುಷ್ಯನನ್ನು ಕೊಲ್ಲುವುದು ಯಾವ ಆರ್ಟ್ ಆಫ್ ಲಿವಿಂಗ್?
ಮುಂಬೈ: ತನ್ನ ಮುಖವಾಣಿ ಸಾಮ್ನಾದಲ್ಲಿ ಆರ್ಟ್ ಆಫ್ ಲಿವಿಂಗ್ನ ಶ್ರೀ ರವಿಶಂಕರ್ರನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಶಿವಸೇನೆ ಅಯೋಧ್ಯೆ ವಿಷಯದಲ್ಲಿ ಮೂಗುತೂರಿಸದಂತೆ ಆಧ್ಯಾತ್ಮಿಕ ಗುರುವಿಗೆ ಸೂಚಿಸಿದೆ.
ಬಾಬರಿ ಮಸೀದಿ-ರಾಮ ಮಂದಿರ ವಿವಾದವನ್ನು ಶೀಘ್ರದಲ್ಲಿ ಬಗೆಹರಿಸದಿದ್ದರೆ ಭಾರತವು ಸಿರಿಯವಾಗಲಿದೆ ಎಂದು ಹೇಳುವ ಮೂಲಕ ಶ್ರೀ ರವಿಶಂಕರ್ ಅವರು ಹಿಂಸಾಚಾರ ಮತ್ತು ಗೊಂದಲಕ್ಕೆ ಪರವಾನಿಗೆ ನೀಡಿದ್ದಾರೆ ಎಂದು ಶಿವಸೇನೆ ತಿಳಿಸಿದೆ. ರಾಮ ಮಂದಿರ ವಿಷಯವನ್ನು ಐಸಿಸ್ ಜೊತೆ ಥಳುಕು ಹಾಕುವ ಮೂಲಕ ರವಿಶಂಕರ್ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ್ದಾರೆ. ಒಂದು ಆಧ್ಯಾತ್ಮಿಕ ಗುರುವಿಗೆ ಇದು ಹೊಂದುವುದಿಲ್ಲ ಎಂದು ಸಾಮ್ನಾದ ಸಂಪಾದಕೀಯದಲ್ಲಿ ಬರೆಯಲಾಗಿದೆ. ರಾಮ ಮಂದಿರ ವಿಷಯವನ್ನು ರವಿಶಂಕರ್ ಸುದ್ದಿಯಲ್ಲಿರುವ ಸಲುವಾಗಿ ಬಳಸುತ್ತಿದ್ದಾರೆ. ಮನುಷ್ಯನನ್ನು ಕೊಲ್ಲುವುದು ಅಥವಾ ಅಂಥ ಬೆದರಿಕೆ ಹಾಕುವುದು ಯಾವ ರೀತಿಯ ಆರ್ಟ್ ಆಫ್ ಲಿವಿಂಗ್?, ಭಾರತ ಎಂದೂ ಸಿರಿಯ ಆಗಲು ಸಾಧ್ಯವಿಲ್ಲ. ಅದನ್ನು ಅವರು ಮೊದಲು ಅರಿಯಬೇಕು. ಈ ಗುರು ಮೊದಲು ತಮ್ಮ ಖಾಸಗಿ ವಿಮಾನದಲ್ಲಿ ಇರಾಕ್ ಮತ್ತು ಸಿರಿಯಗೆ ಹೋಗಿ ಅಲ್ಲಿ ತಮ್ಮ ಆರ್ಟ್ ಆಫ್ ಲಿವಿಂಗ್ ಮೂಲಕ ಶಾಂತಿಯ ಸಂದೇಶವನ್ನು ಹರಡಬೇಕು ಎಂದು ಸಾಮನಾದಲ್ಲಿ ಬರೆಯಲಾಗಿದೆ.