• ಪ್ರಧಾನಮಂತ್ರಿ ಎಲ್.ಪಿ.ಜಿ.ಪಂಚಾಯತ್ ಕಾರ್ಯಕ್ರಮವನ್ನು ಉದ್ಘಾಟನೆ
ಭಟ್ಕಳ: ದೇಶದ ಪ್ರಧಾನಿ ನರೇಂದ್ರ ಮೋದಿಯವರು ಹಳ್ಳಿ ತಾಯಂದಿರ ಕಣ್ಣಿರ ಒರೆಸುವ ಕೆಲಸ ಮಾಡುತ್ತಿದ್ದಾರೆ ಎಂದು ಕೆನರಾ ಲೋಕಸಭಾ ಕ್ಷೇತ್ರದ ಸಂಸದ ಹಾಗೂ ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗಡೆ ಹೇಳಿದರು.
ಅವರು ಶುಕ್ರವಾರ ಇಲ್ಲಿನ ಬೆಳಕೆ ಪಂಚಾಯತ್ ವ್ಯಾಪ್ತಿಯ ಸರಕಾರಿ ಪ್ರೌಢಶಾಲೆ ಸಭಾಭವನದಲ್ಲಿ ನಡೆದ ಪ್ರಧಾನಮಂತ್ರಿ ಎಲ್.ಪಿ.ಜಿ.ಪಂಚಾಯತ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಗ್ರಾಮೀಣ ಭಾಗದಲ್ಲಿನ ಮಹಿಳೆಯರು ಅಡುಗೆ ಮಾಡುವಾಗ ಕಣ್ಣಲ್ಲಿ ನೀರು ಬರಬಾರದೆಂಬ ಉದ್ದೇಶವೂ ಪ್ರಧಾನ ಮಂತ್ರಿ ಉಜ್ವಲ ಯೋಜನೆಯದ್ದಾಗಿದ್ದು, ಜನರಿಂದ ಒಳ್ಳೆಯ ಸೂಚನೆ ಅಭಿಪ್ರಾಯ ಸಿಕ್ಕಮೇಲೆ ಕಾರ್ಯಕ್ರಮ ಯೋಜನೆಯ ಫಲಾನುಭವಿಗಳ ಸಂಖ್ಯೆಯನ್ನು ವಿಸ್ತರಿಸಿದ್ದೇವೆ ಎಂದ ಅವರು ‘ಈ ಯೋಜನೆ ದೇಶಕ್ಕೆ ಒಂದು ಹೊಸ ಕಲ್ಪನೆಯನ್ನು ತಂದುಕೊಟ್ಟಿದ್ದು, ತಾಯಂದಿರ ಕಣ್ಣಿರು ಒರೆಸುವ ಉತ್ತಮ ಯೋಜನೆಯಾಗಿದೆ. ಈಗಾಗಲೇ ದೇಶದ 5.70ಕೋಟಿ ಜನರಿಗೆ ಉಚಿತ ಗ್ಯಾಸ ಸಂಪರ್ಕ ನೀಡಿದ್ದು, ಫಲಾನುಭವಿಗಳಿಗೆ ಅನೂಕೂಲವಾಗಲೆಂದು ಯೋಜನೆಯ ಫಲವನ್ನು ವಿಸ್ತರಿಸಿದ್ದೇವೆ. ಯಾವದೇ ಜನಪರ ಯೋಜನೆ ನೀಡುವ ಪೂರ್ವದಲ್ಲಿ ಬದ್ಧತೆಯಿರಬೇಕು ಆಗ ಮಾತ್ರ ಸರಕಾರದ ಮೇಲೆ ಜನರಿಗೆ ವಿಶ್ವಾಸ ಹುಟ್ಟುತ್ತದೆ.ಈ ವಿಶ್ವಾಸ ಈಗ ಕೇಂದ್ರ ಸರಕಾರದ ಮೇಲೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು ಯೋಜನೆಯ ಫಲ ಸಿಗದಿದ್ದರೆ ಜನರೇ ಕೇಳಿ ಪಡೆದುಕೊಳ್ಳಬೇಕು ಅದು ನಿಮ್ಮ ಹಕ್ಕಾಗಿದೆ. ಇನ್ನು 2020ರೊಳಗಾಗಿ ದೇಶದ ಎಲ್ಲಾ ಮನೆಗಗಳಿಗೆ ಉಚಿತ ವಿದ್ಯುತ ಸಂಪರ್ಕ ಸಿಗುವಂತೆ ಯೋಜನೆ ತಯಾರಿ ನಡೆಯುತ್ತಿದೆ. ಇಲ್ಲಿನ ಗ್ಯಾಸ ಎಜೆನ್ಸಿಗಳು ಕೇಂದ್ರದ ಯೋಜನೆಯನ್ನು ಜನರಿಗೆ ತಲುಪಿಸುವಲ್ಲಿ ವೇಗದ ಕೆಲಸ ಮಾಡುತ್ತಿದ್ದಾರೆಂದು ಅಭಿನಂದಿಸಿದರು.
ಇದೇ ಸಂಧರ್ಭದಲ್ಲಿ ಆಯುಷ್ಯಮಾನ ಭಾರತ ಹಾಗೂ ಡಿಜಿಟಲ್ ಗ್ರಾಮ ಎಂಬ ಕೇಂದ್ರದ ಅತೀ ಮುಖ್ಯ ಎರಡು ಯೋಜನೆಯ ಬಗ್ಗೆ ಸಚಿವ ಅನಂತಕುಮಾರ ಹೆಗಡೆ ಜನರಿಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ಶಾಸಕ ಸುನೀಲ ನಾಯ್ಕ ಮಾತನಾಡಿ ‘ ಕೇಂದ್ರ ಸರಕಾರ ಜನರಿಗೆ ಅನೂಕೂಲಕರ ಸೌಲತ್ತು ಹಾಗೂ ಯೋಜನೆಯನ್ನು ನೀಡುವಲ್ಲಿ ಸತತ ಕಾರ್ಯಮಾಡುತ್ತಿದ್ದು, ಜನರು ಈ ಬಗ್ಗೆ ಮಾಹಿತಿ ನಡೆದುಕೊಂಡು ಯೋಜನೆಯ ಲಾಭವನ್ನು ಪಡೆದುಕೊಳ್ಳಬೇಕು. ಮನೆಯಲ್ಲಿ ಮಹಿಳೆಯರು ಧಾರವಾಹಿ ಅಥವಾ ಸಿನಿಮಾ ವೀಕ್ಷಣೆಯಿಂದ ಸರಕಾರದ ಯೋಜನೆಯಾಗಲಿ ಅಥವಾ ಸಾಮಾಜಿಕ ವಿಚಾರವಾಗಲಿ ತಿಳಿಯುದಿಲ್ಲ ಬದಲಿಗೆ ಮಾಧ್ಯಮದಲ್ಲಿ ಬರುವ ಸುದ್ದಿ ಪ್ರಸಾರ ಹಾಗೂ ಕೇಂದ್ರ ಸರಕಾರದ ಯೋಜನೆಯ ಬಗೆಗಿನ ಕಾರ್ಯಕ್ರಮ ವಿಕ್ಷಣೆ ಮಾಡಬೇಕು. ಮುಂದಿನ ದಿನದಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರ ಸರಕಾರ ಯೋಜನೆಯನ್ನು ಕಟ್ಟಕಡೆಯ ಜನರಿಗೆ ತಲುಪಿಸಲು ಸಿದ್ದ ಎಂದು ಹೇಳಿದರು.
ಬೆಳಕೆ ಪಂಚಾಯತ್ ಅಧ್ಯಕ್ಷ ರಮೇಶ ನಾಯ್ಕ ನೂಜ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಉಚಿತ ಗ್ಯಾಸ ಸಂಪರ್ಕ ಸೇವೆಯ ಒಟ್ಟು 100 ಮಂದಿ ಫಲಾನುಭವಿಗಳಿಗೆ ಗ್ಯಾಸ ಒಲೆ ಹಾಗೂ ಸಿಲಿಂಡರ ವಿತರಿಸಿದರು.
ವೇದಿಕೆಯಲ್ಲಿ ಬಿಜೆಪಿ ತಾಲೂಕಾಧ್ಯಕ್ಷ ರಾಜೇಶ ನಾಯ್ಕ, ಉದ್ಯಮಿ ಉಮೇಶ ನಾಯ್ಕ, ಬಿಜೆಪಿ ಹಿರಿಯ ಮುಖಂಡ ಎಮ್.ಜೆ.ನಾಯ್ಕ, ಬೆಳಕೆ ಪ್ರೌಢಶಾಲೆ ಮುಖ್ಯಾಧ್ಯಾಪಕ ಚಂದ್ರಕಾಂತ ಗಾಂವಕರ, ರಂಜನ ಗ್ಯಾಸ ಎಜೆನ್ಸಿ ಮಾಲೀಕಿ ಶಿವಾನಿ ಶಾಂತಾರಾಮ ಉಪಸ್ಥಿತರಿದ್ದರು.