ಬಂದರ್ ಇಲಾಖೆ ಸ್ಥಳದಲ್ಲಿ ಆಶ್ರೀತ ನಾಗರೀಕರಿಗೆ ಹಕ್ಕುಪತ್ರ ವಿತರಿಸುವಂತೆ ವಿಧಾನಸಭೆಯಲ್ಲಿ ಶಾಸಕ ಸುನಿಲ್ ನಾಯ್ಕ ಆಗ್ರಹ
ಭಟ್ಕಳ: ಭಟ್ಕಳ-ಹೊನ್ನಾವರ ವಿಧಾನ ಸಭಾ ಕ್ಷೇತ್ರದಲ್ಲಿ ಸಮುದ್ರ ತೀರದಲ್ಲಿ ಅನಾದಿಕಾಲದಿಂದ ಬಂದರು ಇಲಾಖೆ ಸಂಬಂದ ಪಟ್ಟ ಸ್ಥಳದಲ್ಲಿ ಆಶ್ರಿತರಾಗಿರುವ ನಾಗರಿಕರಿಗೆ ಭೂಮಿ ಹಕ್ಕನ್ನು ಮಾನ್ಯ ಮಾಡುವ ನಿಟ್ಟಿನಲ್ಲಿ ಪಟ್ಟ ಅಥವಾ ಹಕ್ಕುಪತ್ರ ವಿತರಿಸಬೇಕೆಂದು ವಿಧಾನ ಸಭೆಯಲ್ಲಿ ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ಸುನೀಲ್ ನಾಯ್ಕ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಅಧೀವೇಶನದ 3ನೇ ದಿನದಂದು ಗಮನ ಸೆಳೆಯುವ ಪ್ರಶ್ನೆಯ ಮೂಲಕ ಪೌರಾಡಳಿತ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಬಾಲಚಂದ್ರ ಜಾರಕಿಹೊಳೆ ರವರನ್ನು ಒತ್ತಾಯಿಸಿದ್ದಾರೆ.
ಕಳೆದ ನೂರಾರು ವರ್ಷದಿಂದ ಹೊನ್ನಾವರದ ಕಾಸರಕೋಡ್ ದಿಂದ ಭಟ್ಕಳದ ಗೊರಟೆ ತನಕ ಬಂದರು ಇಲಾಖೆ ಸಂಬಂದಪಟ್ಟ ಸ್ಥಳದಲ್ಲಿ ಮನೆ, ವ್ಯವಹಾರ, ಕೃಷಿ, ತೋಟಗಾರಿಕೆ ಉದ್ದೇಶಕ್ಕಾಗಿ ಸದ್ರಿ ಜಾಗವನ್ನು ಬಳಸಿಕೊಂಡು ತಮ್ಮ ಜೀವನವನ್ನು ರೂಪಿಸಿಕೊಂಡಿದ್ದಾರೆ. ಈ ಹಿಂದಿನ ಎಲ್ಲಾ ಸರ್ಕಾರಕ್ಕು ಪ್ರತಿಭಟನೆ ಮನವಿಯ ಮೂಲಕ ಭೂಮಿಯ ಹಕ್ಕು ನೀಡುವಂತೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಆದರೆ ಸರ್ಕಾರದ ಗಮನಕ್ಕೆ ಈ ವಿಷಯ ಬಾರದಿರುವದು ಖೇದಕರ ಸಂಗತಿಯಾಗಿದ್ದು, ಮಾನವೀಯ ದೃಷ್ಟಿಯಿಂದ ಭವಿಷ್ಯದಲ್ಲಿ ಅತಂತ್ರರಾಗುವ ಪರಿಸ್ಥಿಯಿಂದ ಪಾರು ಮಾಡಲು ಈ ಬಡ ಮೀನುಗಾರಿಕೆ ಮತ್ತು ಕೃಷಿ ಅವಲಂಬಿತ ಕುಟುಂಬಕ್ಕೆ ಹಕ್ಕು ಪತ್ರ ನೀಡಲು ಕ್ರಮ ಕೈಗೊಳ್ಳಬೇಕೆಂದು ಸರ್ಕಾರವನ್ನು ಶಾಸಕರು ಒತ್ತಾಯಿಸಿದ್ದಾರೆ.