ಭಟ್ಕಳ: ಇಲ್ಲಿನ ಅಂಜುಮನ್ ಹಾಮಿಯೇ ಮುಸ್ಲಿಮೀನ್ ಸಂಸ್ಥೆಯ ಆಡಳಿತ ಕಚೇರಿಗೆ ನುಗ್ಗಿ ಮಾನಸಿಕ ಅಸ್ವಸ್ಥನೆನ್ನಲಾದ ವ್ಯಕ್ತಿಯೋರ್ವ ದಾಂಧಲೆ ನಡೆಸಿ ಆತಂಕ ಸೃಷ್ಟಿಸಿದ ಘಟನೆ ಶನಿವಾರ ಮುಂಜಾವ ನಡೆದಿದೆ.
ಆರೋಪಿಯನ್ನು ಬಳಿಕ ಭಟ್ಕಳ ನಗರ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆಯ ವೇಳೆ ಆತ ತನ್ನ ಹೆಸರು ಸುರೇಶ್ ಶೆಟ್ಟಿ ಎಂದು ಹೇಳಿಕೊಂಡಿದ್ದಾನೆ.
ಇಂದು ಮುಂಜಾನೆ 4:30ರ ಸುಮಾರಿಗೆ ಅಂಜುಮನ್ ಹಾಮಿಯೇ ಮುಸ್ಲಿಮೀನ್ ಸಂಸ್ಥೆಯ ಆಡಳಿತ ಕಚೇರಿ ಆವರಣಕ್ಕೆ ನುಗ್ಗಿದ ಸುರೇಶ್ ಶೆಟ್ಟಿ ಅಲ್ಲಿ ಕರ್ತವ್ಯ ನಿರತನಾಗಿದ್ದ ವಾಚ್ಮೆನ್ ಮೇಲೆ ಏಕಾಏಕಿ ಹಲ್ಲೆ ನಡೆಸಿದನೆನ್ನಲಾಗಿದೆ. ಬಳಿಕ ಕಚೇರಿಯ ಮುಖ್ಯದ್ವಾರದ ಬಾಗಿಲಿನ ಗಾಜನ್ನು ಪುಡಿಗೈದಿದ್ದಾನೆ.
ಪೊಲೀಸರಿಗೆ ವಿಷಯ ತಿಳಿಸಲಾಗಿದ್ದು, ಸ್ಥಳಕ್ಕಾಗಮಿಸಿದ ಭಟ್ಕಳ ನಗರ ಠಾಣಾ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.