ಲಯನ್ಸ್ ಕ್ಲಬ್ ಮುರುಡೇಶ್ವರ ವತಿಯಿಂದ ಔಷಧಿಯ ಸಸ್ಯಗಳ ಮಾಹಿತಿ ಶಿಬಿರ
ಭಟ್ಕಳ: ಜನತಾ ವಿದ್ಯಾಲಯ ಶಿರಾಲಿಯಲ್ಲಿ ಲಯನ್ಸ್ ಕ್ಲಬ್ ಮುರ್ಡೇಶ್ವರ, ಎ.ಎಫ್.ಆಯ್ ಭಟ್ಕಳ, ಜನತಾ ವಿದ್ಯಾಲಯ ಪದವಿಪೂರ್ವ ಕಾಲೇಜು ಶಿರಾಲಿ ಹಾಗೂ ಅರುಣೋದಯ ಡೇ ಕೇರ್ ಸೆಂಟರ್ ಬಸ್ತಿ ಇವರ ಸಂಯುಕ್ತ ಆಶ್ರಯದಲ್ಲಿ ಔಷಧಿಯ ಗಿಡಗಳ ಮಾಹಿತಿ ಶಿಬಿರ ಹಾಗೂ ರಿಯಾಯತಿ ದರದಲ್ಲಿ ಗಿಡಗಳ ಮಾರಾಟ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿದ ಲಯನ್ಸ್ ಕ್ಲಬ್ ಮುರ್ಡೇಶ್ವರದ ಅಧ್ಯಕ್ಷ ನಾಗರಾಜ ಭಟ್ ಮಾತನಾಡಿ, ಸಾರ್ವಜನಿಕರಿಗೆ ಆಯುರ್ವೇದ ಸಸ್ಯಗಳ ಮಹತ್ವ ಮತ್ತು ಅದರಿಂದ ಆರೋಗ್ಯವನ್ನು ಕಾಪಾಡುವ ಸಲುವಾಗಿ ಈ ಕಾರ್ಯಕ್ರಮವನ್ನು ನಡೆಸುತ್ತಿದ್ದೇವೆ ಇದರ ಪ್ರಯೋಜನವನ್ನು ಈ ಭಾಗದ ಅತಿಹೆಚ್ಚು ಜನರು ಪಡೆಯಲಿ ಎಂದರು.
ಸಂಪನ್ಮೂಲ ವ್ಯಕ್ತಿಗಳಾದ ಉಡುಪಿಯ ಪ್ರಖ್ಯಾತ ಆಯುರ್ವೇದ ತಜ್ಞ, ಸಸ್ಯಶಾಸ್ತ್ರಜ್ಞ ಡಾ.ಶ್ರೀಧರ ಬಾಯಿರಿ, ನಮ್ಮ ಪರಿಸರದಲ್ಲಿ ಬೆಳೆಯುವ ಹಾಗೂ ಬೆಳೆಸುವ ಆಯುರ್ವೇದ ಔಷಧಿ ಗಿಡಗಳ ಕುರಿತು ಸವಿಸ್ತಾರ ಮಾಹಿತಿಗಳನ್ನು ನೀಡಿದರು. ಆರೋಗ್ಯದ ರಕ್ಷಣೆಯಲ್ಲಿ ಉಪಯೋಗವಾಗುವ ತರಕಾರಿ, ಹಣ್ಣುಗಳ ಬಗ್ಗೆ ಸಮರ್ಪಕವಾಗಿ ಮಾಹಿತಿ ನೀಡಿದರು. ಈ ವೇಳೆ ಸುಮಾರು 250ಕ್ಕೂ ಹೆಚ್ಚಿನ ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.
ಲಯನ್ ನಿರ್ದೇಶಕ ಡಾ.ಸುನೀಲ್ ಜತ್ತನ್ ಸ್ವಾಗತಿಸಿ, ಔಷಧಿಯ ಸಸ್ಯಗಳ ಮಾಹಿತಿ ಹಾಗೂ ಉಪಯೋಗಗಳ ಬಗ್ಗೆ ಮಾತನಾಡಿದರು. ಡಿ.ಜಿ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಡಾ.ಆರ್.ವಿ ಶರಾಫ್, ಡಾ.ವಾದಿರಾಜ ಭಟ್, ಎ.ಬಿ ರಾಮರಥ, ಮಂಜುನಾಥ ನಾಯ್ಕ ಅತಿಥಿಗಳಾಗಿದ್ದರು.
ಲಯನ್ ಸದಸ್ಯರಾದ ಕೃಷ್ಣ ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ಲಯನ್ಸ್ ಕ್ಲಬ್ ಮುರ್ಡೇಶ್ವರದ ಸದಸ್ಯರಾದ ಗೌರೀಶ ನಾಯ್ಕ, ಮಂಜುನಾಥ ದೇವಾಡಿಗ, ಶಿವಾನಂದ ದೈಮನೆ, ದಯಾನಂದ ಮೆಣಸಿನಮನೆ, ಗಜಾನನ ಭಟ್, ಡಾ.ಹರಿಪ್ರಸಾದ ಕಿಣಿ, ಎ.ಎನ್ ಶೆಟ್ಟಿ, ವಿಶ್ವನಾಥ ಕಾಮತ ಮುಂತಾದವರು ಉಪಸ್ಥಿತರಿದ್ದರು.