ಲಕ್ನೋ: ಅಯೋಧ್ಯೆಯ ಚರಿತ್ರೆಯಲ್ಲೇ ಮೊದಲ ಬಾರಿ ಸರಯೂ ನದಿ ದಡದಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಕುರ್ಆನ್ ಪಠಣದೊಂದಿಗೆ ಸಾಮೂಹಿಕ ನಮಾಝ್ ನಡೆಯಲಿದೆ. ರಾಷ್ಟ್ರೀಯ ಮುಸ್ಲಿಂ ಮಂಚ್ ಜುಲೈ 12ರಂದು ಈ ಕಾರ್ಯಕ್ರಮ ಆಯೋಜಿಸಿದೆ. ಹಲವು ಹಿಂದೂಗಳೊಂದಿಗೆ 1500 ಮುಸ್ಲಿಂ ವಿದ್ವಾಂಸರು ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ.
‘‘ಅಯೋಧ್ಯೆಯಲ್ಲಿ ಸರಯೂ ನದಿ ಹರಿಯುತ್ತಿರುವಂತೆ ದಂಡೆಯಲ್ಲಿ 1500ಕ್ಕೂ ಅಧಿಕ ಇಸ್ಲಾಂ ವಿದ್ವಾಂಸರು ಪಾಲ್ಗೊಳ್ಳುವ ಬೃಹತ್ ಕಾರ್ಯಕ್ರಮ ಇದಾಗಿದೆ’’ ಎಂದು ರಾಷ್ಟ್ರೀಯ ಮುಸ್ಲಿಂ ಮಂಚ್ನ ಮಾಧ್ಯಮ ಸಂಯೋಜಕ ರಝಾ ರಝ್ವಿ ತಿಳಿಸಿದ್ದಾರೆ.
"ವಿದ್ವಾಂಸರು ಸರಯೂ ನದಿಯಲ್ಲಿ ವುಝೂ (ಅಂಗಸ್ನಾನ) ಮಾಡಲಿದ್ದು, ನಂತರ ನಮಾಝ್ ಮಾಡಲಿದ್ದಾರೆ. ಆನಂತರ ಕುರ್ ಆನ್ ಪಠಣವೂ ನಡೆಯಲಿದೆ. ಅಯೋಧ್ಯೆಯಲ್ಲಿ ಶೀಘ್ರ ರಾಮ ಮಂದಿರ ನಿರ್ಮಾಣಕ್ಕಾಗಿ ಇದನ್ನು ಮಾಡುತ್ತಿದ್ದೇವೆ" ಎಂದವರು ಹೇಳಿದರು.
ಜಗತ್ತಿಗೆ ಶಾಂತಿ ಹಾಗೂ ಸೌಹಾರ್ದತೆಯ ಸಂದೇಶ ರವಾನಿಸಲು ಈ ಕಾರ್ಯಕ್ರಮ ಆಯೋಜಿಸುತ್ತಿದ್ದೇವೆ. ಶಾಂತಿ ಹಾಗೂ ಭ್ರಾತೃತ್ವದ ನಡುವೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ದಿಶೆಯಲ್ಲಿ ಈ ಪ್ರಾರ್ಥನೆ ಕೊಡುಗೆ ನೀಡಲಿದೆ ಎಂದು ನಾವು ಭಾವಿಸುತ್ತೇವೆ ಎಂದು ಅವರು ಹೇಳಿದ್ದಾರೆ.