ಶ್ರೀನಿವಾಸಪುರ: ತಾಲ್ಲೂಕಿನ ಯಲ್ದೂರು ಗ್ರಾಮದಲ್ಲಿ ಬುಧವಾರ ರಾತ್ರಿ ವಿವಾಹಿತ ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಎಂ.ಭಾರ್ಗವಿ (19) ಮೃತ ಮಹಿಳೆ. ಭಾರ್ಗವಿ ಅವರನ್ನು ಯಲ್ದೂರು ಗ್ರಾಮದ ರವಿಚಂದ್ರ ಎಂಬುವವರೊಂದಿಗೆ 6 ತಿಂಗಳ ಹಿಂದೆಯಷ್ಟೇ ಮದುವೆಯಾಗಿತ್ತು.
ಎಂ.ಭಾರ್ಗವಿ ಅವರ ಪತಿ ಹಾಗೂ ಮನೆಯವರು ವರದಕ್ಷಿಣೆ ನೀಡುವಂತೆ ಕಿರುಕುಳ ನೀಡುತ್ತಿದ್ದರು. ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೃತಳ ತಂದೆ ಮಂಜುನಾಥ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ವಿದ್ಯುತ್ ಅಪಘಾತ: ಪಟ್ಟಣದ ಇಂದಿರಾ ನಗರದಲ್ಲಿ ವಿದ್ಯುತ್ ಹರಿದು ಬಾಲಕನೊಬ್ಬ ತೀರ್ವವಾಗಿ ಗಾಯಗೊಂಡಿರುವ ಘಟನೆ ಬುಧವಾರ ನಡೆದಿದೆ.
ಆದಿಲ್ (9) ಗಾಯಗೊಂಡ ಬಾಲಕ. ನೆಲ ಹಂತದಲ್ಲಿ ಇಡಲಾಗಿರುವ ವಿದ್ಯುತ್ ಪರಿವರ್ತಕದ ಸಮೀಪ ಮೇಯುತ್ತಿದ್ದ ಮೇಕೆಯನ್ನು ಓಡಿಸಲು ಹೋದಾಗ ಅಪಘಾತ ಸಂಭವಿಸಿದೆ. ಗಾಯಗೊಂಡ ಬಾಲಕನನ್ನು ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.
ವಿದ್ಯುತ್ ಪರಿವರ್ತಕದ ಸುತ್ತ ಮುಳ್ಳು ತಂತಿ ಬೇಲಿ ನಿರ್ಮಿಸದಿರು ಬಗ್ಗೆ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಸ್ಕಾಂ ಈ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.