ಭಟ್ಕಳ: ತಾಲೂಕಿನ ಪ್ರತಿಷ್ಠಿತ ಹಣಕಾಸು ಸಂಸ್ಥೆಗಳಲ್ಲಿ ಒಂದಾದ ದಿ ಜನತಾ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ ಇದರ ನೂತನ ಅಧ್ಯಕ್ಷರು, ಉಪಾಧ್ಯಕ್ಷರಾಗಿ ಮಾಜಿ ಶಾಸಕ ಮಂಕಾಳು ವೈದ್ಯ ಹಾಗೂ ಪರಮೇಶ್ವರ ದೇವಾಡಿಗ ಹೆಬಳೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಗುರುವಾರ ಸಂಘದ ಪ್ರಧಾನ ಕಚೇರಿಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಮಂಕಾಳು ವೈದ್ಯ ಒಬ್ಬರೇ ನಾಮಪತ್ರ ಸಲ್ಲಿಸಿದ್ದರೆ, ಉಪಾಧ್ಯಕ್ಷ ಸ್ಥಾನಕ್ಕೆ ಪರಮೇಶ್ವರ ದೇವಾಡಿಗ, ಪರಮೇಶ್ವರ ನಾಯ್ಕ, ನಾಗಪ್ಪ ನಾಯ್ಕ, ವಿಠ್ಠಲ್ ನಾಯ್ಕ ನಾಮಪತ್ರ ಸಲ್ಲಿಸಿದ್ದರು. ನಂತರ ಕಣದಲ್ಲಿದ್ದ ಮೂವರು ನಾಮಪತ್ರ ವಾಪಸ್ಸು ಪಡೆಯುವುದರೊಂದಿಗೆ ಪರಮೇಶ್ವರ ದೇವಾಡಿಗ ಆಯ್ಕೆ ಸುಲಭವಾಯಿತು. ಮಂಕಾಳು ವೈದ್ಯ ಅಧ್ಯಕ್ಷ ಹುದ್ದೆಗೆ ಏರುತ್ತಿರುವುದು ಇದು 3ನೇ ಬಾರಿಯಾದರೆ, ಪರಮೇಶ್ವರ ದೇವಾಡಿಗ 2ನೇ ಬಾರಿ ಉಪಾಧ್ಯಕ್ಷ ಹುದ್ದೆಯನ್ನು ಅಲಂಕರಿಸುತ್ತಿದ್ದಾರೆ.
ಸಹಕಾರಿ ಇಲಾಖೆಯ ಹಿರಿಯ ಅಧಿಕಾರಿ ಜಿ.ಕೆ.ಭಟ್ ಚುನಾವಣಾಧಿಕಾರಿಯಾಗಿ ಭಾಗವಹಿಸಿದ್ದರು. ಸಂಘದ ಪ್ರಧಾನ ವ್ಯವಸ್ಥಾಪಕ ಡಿ.ಎಲ್.ನಾಯ್ಕ ಉಪಸ್ಥಿತರಿದ್ದರು. ಆಯ್ಕೆ ಪ್ರಕ್ರಿಯೆ ಮುಗಿಯುತ್ತಿದ್ದಂತೆಯೇ ಹೊರ ಬಂದ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರನ್ನು ಅವರ ಬೆಂಬಲಿಗರು ಸುತ್ತುವರಿದು ಹೂಮಾಲೆ ಹಾಕಿ ಸಂಭ್ರಮಿಸಿದರು.