ನ್ಯಾಯಾಲಯದಿಂದ ಖುಲಾಸೆಗೊಂಡ ರಾಜೇಶ್ ಪೂಜಾರಿ ಕೊಲೆ ಆರೋಪಿಗಳು
► ಪೊಲೀಸರ ಕಥೆಗೆ ಬಣ್ಣ ಹಚ್ಚಿದ್ದ ಸಿಐಡಿ ಪೊಲೀಸರು
► ಅಮಾಯಕ ಯುವಕರ ಅಲೆದಾಟಕ್ಕೆ ಕೊನೆಗೂ ಮುಕ್ತಿ
ಮಂಗಳೂರು: ಬಜರಂಗ ದಳದ ಕಾರ್ಯಕರ್ತ ರಾಜೇಶ್ ಪೂಜಾರಿ ಕೊಲೆ ಪ್ರಕರಣದ ಆರೋಪ ಎದುರಿಸುತ್ತಿದ್ದ ಮಲ್ಲೂರು ಸಮೀಪದ ದೆಮ್ಮೆಲೆ ನಿವಾಸಿಗಳಾದ ಇರ್ಶಾದ್, ಇಮ್ರಾನ್ ಮತ್ತು ಹುಸೈನ್ ಅವರನ್ನು ದ.ಕ.ಜಿಲ್ಲಾ ಮತ್ತು ಮೂರನೇ ಹೆಚ್ಚುವರಿ ನ್ಯಾಯಾಲಯ ಶನಿವಾರ ಖುಲಾಸೆಗೊಳಿಸಿದೆ.
ಇದರೊಂದಿಗೆ ಕಳೆದ ನಾಲ್ಕು ವರ್ಷದಿಂದ ಅಮಾಯಕ ಯುವಕರ ಪೊಲೀಸ್ ಠಾಣೆ, ಜೈಲು, ಕೋರ್ಟ್ನ ಅಲೆದಾಟಕ್ಕೆ ಕೊನೆಗೂ ಮುಕ್ತಿ ಸಿಕ್ಕಿದೆ.
ಘಟನೆಯ ವಿವರ: ಬಂಟ್ವಾಳ ನಿವಾಸಿಯಾಗಿದ್ದ ಬಜರಂಗ ದಳದ ಕಾರ್ಯಕರ್ತ ಹಾಗೂ ವೃತ್ತಿಯಲ್ಲಿ ಆಟೊ ರಿಕ್ಷಾ ಚಾಲಕನಾಗಿದ್ದ ರಾಜೇಶ್ ಪೂಜಾರಿ ಯನ್ನು 2014ರ ಮಾ.21ರಂದು ಬೆಳಗ್ಗೆ ದುಷ್ಕರ್ಮಿಗಳ ತಂಡವೊಂದು ಮಚ್ಚು ಮತ್ತು ತಲವಾರಿನಿಂದ ಕಡಿದು ಪರಾರಿಯಾಗಿತ್ತು. ಗಂಭೀರ ಗಾಯ ಗೊಂಡಿದ್ದ ರಾಜೇಶ್ ಪೂಜಾರಿಯು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದ. ಈ ಬಗ್ಗೆ ಬಂಟ್ವಾಳ ನಗರ ಠಾಣೆಯ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ ಕೊಲೆಗೈದ ದುಷ್ಕರ್ಮಿಗಳು ಯಾರು ಎಂಬುದು ಸ್ಪಷ್ಟವಾಗಿರಲಿಲ್ಲ.
ಕೊಲೆಯಾದ ರಾಜೇಶ್ ಪೂಜಾರಿಯ ಮೇಲೆ ಇಕ್ಬಾಲ್ ಎಂಬಾತನ ಕೊಲೆ ನಡೆಸಿದ ಆರೋಪವಿತ್ತು. ಆ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು ರಾಜೇಶ್ನನ್ನು ಕೊಲೆಗೈದಿದ್ದರು ಎಂದು ಶಂಕಿಸಲಾಗಿತ್ತು. ರಾಜೇಶ್ ಪೂಜಾರಿಯ ಪತ್ನಿ ನೀಡಿದ್ದ ದೂರಿನಂತೆ ಪ್ರಕರಣ ದಾಖಲಿಸಿದ್ದ ಪೊಲೀಸರಿಗೆ ಕೊಲೆಗೈದವರು ಯಾರು ಎಂಬುದನ್ನು ತಿಳಿಯಲು ಸಾಧ್ಯವಾಗಿರಲಿಲ್ಲ. 10 ದಿನ ಕಳೆದರೂ ಕೂಡ ಆರೋಪಿಗಳು ಯಾರೆಂದು ಗೊತ್ತಾಗಿರಲಿಲ್ಲ. ಅಂತೂ ಪೊಲೀಸರು 2014ರ ಮಾ.31ಕ್ಕೆ ಮಲ್ಲೂರಿನ ಅಮಾಯಕ ಮೂವರು ಯುವಕರನ್ನು ಬಂಧಿಸಿ ಜೈಲಿಗೆ ಅಟ್ಟಿದ್ದರು.
ಈ ಯುವಕರು ಅಮಾಯಕರಾಗಿದ್ದು, ಪೊಲೀಸರು ನೈಜ ಆರೋಪಿಗಳನ್ನು ಬಂಧಿಸಲಿಲ್ಲ ಎಂದು ಆರೋಪಿಸಿ ಡಿವೈಎಫ್ಐ ನೇತೃತ್ವದಲ್ಲಿ ಹಲವು ಬಾರಿ ಪ್ರತಿಭಟನೆ ನಡೆದಿತ್ತು. ಕೊನೆಗೂ ಸರಕಾರ ಪ್ರಕರಣವನ್ನು ಸಿಐಡಿ ತನಿಖೆಗೆ ಆದೇಶಿಸಿತ್ತು. ಸಿಐಡಿ ಪೊಲೀಸ್ ತಂಡ ಕೂಡ ಬಂಟ್ವಾಳ ನಗರ ಠಾಣೆಯ ಪೊಲೀಸರು ಕಟ್ಟಿದ್ದ ಕಥೆಗೆ ಬಣ್ಣ ಹಚ್ಚಿ ಕೈ ತೊಳೆದುಕೊಂಡಿತ್ತು.
ಪ್ರಾಸಿಕ್ಯೂಶನ್ ಈ ಪ್ರಕರಣಕ್ಕೆ ಸಂಬಂಧಿಸಿ 24 ಮಂದಿ ಸಾಕ್ಷಿದಾರರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿತಲ್ಲದೆ 47 ಪುಟಗಳ ದಾಖಲೆಗಳನ್ನು ನೀಡಿತ್ತು. ಆದರೆ ಸಾಕ್ಷಾಧಾರದ ಕೊರತೆ, ಗೊಂದಲದ ಹೇಳಿಕೆ, ಪೂರಕ ಮತ್ತು ಸಾಂದರ್ಭಿಕ ಸಾಕ್ಷಿಗಳು ಇಲ್ಲದೇ ಇದ್ದದ್ದು ಇತ್ಯಾದಿ ಪ್ರಬಲ ವಾದವನ್ನು ಎತ್ತಿ ಹಿಡಿದ ನ್ಯಾಯಾಲಯ ಆರೋಪಿಗಳನ್ನು ನಿರ್ದೋಷಿಗಳೆಂದು ತೀರ್ಪು ನೀಡಿ ಬಿಡುಗಡೆಗೊಳಿಸಿದೆ. ಆರೋಪಿಗಳ ಪರವಾಗಿ ಮಂಗಳೂರಿನ ಯುವ ನ್ಯಾಯವಾದಿ ಶಶಿರಾಜ್ ರಾವ್ ಕಾವೂರ್ ವಾದಿಸಿದ್ದರು.
ಪೊಲೀಸರು ಕಟ್ಟಿದ ಕಥೆ
ಸಮರ್ಪಕ ತನಿಖೆ ನಡೆಸಬೇಕಾಗಿದ್ದ ಪೊಲೀಸರು ಮಾತ್ರ ಈ ಪ್ರಕರಣದಲ್ಲಿ ಕಥೆಯನ್ನೇ ಕಟ್ಟಿದ್ದರು. ಪೊಲೀಸರು ಕಟ್ಟಿದ ಕಥೆಗೆ ಸಿಐಡಿ ತಂಡವು ಬಣ್ಣ ಹಚ್ಚಿದ್ದು ಕೂಡ ವಿಶೇಷ. ಪೊಲೀಸರು ಕಟ್ಟಿದ ಕಥೆಯ ಪ್ರಕಾರ ರಾಜೇಶ್ ಪೂಜಾರಿಯ ಕೊಲೆ ಪ್ರಕರಣದ ಪ್ರಮುಖ ಆರೋಪಿ ಹುಸೈನ್. ಬಜರಂಗದಳದ ಮುಖಂಡ, ಬಲಾಢ್ಯ ವ್ಯಕ್ತಿಯನ್ನು ಸುಪಾರಿ ಪಡೆದು ಕೊಲೆ ಮಾಡಿದ್ದಾನೆ ಎಂದು ಆಪಾದಿಸಲಾದ ಈ ಹುಸೈನನ ವೃತ್ತಿ ಮನೆಮನೆಗೆ ತೆರಳಿ ಬೀಡಿ ಎಲೆ ಕತ್ತರಿಸುವ ಕತ್ತರಿಗೆ ಸಾಣೆ ಹಾಕುವುದು, ಪಿನಾಯಿಲ್, ಸ್ಟೀಲ್ವೂಲ್ ಮಾರುವುದು ಇತ್ಯಾದಿ. ಮನೆಯಲ್ಲಿ ವೃದ್ಧ ತಂದೆ ಮತ್ತು ತಾಯಿ, ಪುಟಾಣಿ ಮಗು ಮತ್ತು ಮಡದಿಯ ಜೊತೆ ಅಂದಂದಿನ ಗಂಜಿಗೆ, ಬದುಕಿಗೆ ಪರದಾಡುವ ಈತ ಪೊಲೀಸರ ಪ್ರಕಾರ ರಾಜಕೀಯ, ಮತೀಯ ದ್ವೇಷದ ಕೊಲೆ ಮಾಡಬಲ್ಲ ಭಯಾನಕ ಕ್ರಿಮಿನಲ್.
ಜೈಲಿನಲ್ಲಿ ಅನ್ನ, ನೀರು ಬಿಟ್ಟಿದ್ದರು
ಕೊಲೆ ನಡೆದಾಗ ಮೂವರೂ ಅವಿವಾಹಿತ ಯುವಕರು. ಮೂರ್ನಾಲ್ಕು ತಿಂಗಳು ವಿನಾ ಕಾರಣ ಜೈಲು ಸೇರಿದ್ದ ಈ ಅಮಾಯಕರ ಪೈಕಿ ಹುಸೈನ್ ನಿಗೆ ವರ್ಷದ ಹಿಂದೆಯಷ್ಟೇ ಮದುವೆಯಾಗಿತ್ತು. ಜೈಲಿನಲ್ಲಿದ್ದ ಆರೋಪಿಗಳ ವಿರುದ್ಧ ಪೊಲೀಸರು ರೌಡಿಶೀಟ್ ಹಾಕುವುದಾಗಿ ಬೆದರಿಸಿದ್ದರಿಂದ ಹೆದರಿದ ಅಮಾಯಕ ಯುವಕರು ಜೈಲಿನಲ್ಲಿ ಅನ್ನ, ನೀರು ಬಿಟ್ಟಿದ್ದರು. ಇದು ಕೂಡ ಪ್ರಮುಖ ಸುದ್ದಿಯಾಗಿತ್ತು.
ಕೊಲೆ ಮಾಡಿದವರನ್ನು ಪತ್ತೆ ಹಚ್ಚಿ
ರಾಜೇಶ್ ಪೂಜಾರಿಯನ್ನು ನಮ್ಮ ಹುಡುಗರು ಕೊಲೆ ಮಾಡಿಲ್ಲ. ಪೊಲೀಸರು ಅವರನ್ನು ಕೊಲೆ ಆರೋಪಿಗಳು ಎಂದು ಬಿಂಬಿಸಿ ಜೈಲು ಸೇರುವಂತೆ ಮಾಡಿದರು. ಕಳೆದ ನಾಲ್ಕು ವರ್ಷದಲ್ಲಿ ನಾವು ಪೊಲೀಸ್ ಠಾಣೆ, ಕೋರ್ಟ್, ಜೈಲು ಎಂದು ಅಲೆದದ್ದು ಸಾಕು. ಇನ್ಯಾರಿಗೂ ಇಂತಹ ಅನ್ಯಾಯ ಆಗದಿರಲಿ. ನನ್ನ ಮಗನಿಗೆ ಈಗಲೂ ಸರಿಯಾಗಿ ದುಡಿಯಲು ಆಗುತ್ತಿಲ್ಲ. ದುಡಿಯಲು ಹೋದ ದಿನ ಕೈ ಕಾಲು ನೋವಾಗುತ್ತದೆ ಎಂದು ಅಸಾಹಯಕತೆ ವ್ಯಕ್ತಪಡಿಸು ತ್ತಾನೆ. ಈ ಮಕ್ಕಳನ್ನು ಮನೆ ಮಂದಿಯೇ ಸಾಕುವಂತಹ ಪರಿಸ್ಥಿತಿ ಎದುರಾಗಿದೆ. ಪೊಲೀಸರು ಅವರಿಗೆ ಅಷ್ಟೊಂದು ಹಿಂಸೆ ನೀಡಿದ್ದಾರೆ. ಮಕ್ಕಳ ಸ್ಥಿತಿ ನೋಡಿ ನಾವು ಹಾಕಿದ ಕಣ್ಣೀರ ನೋವು ನಮಗೇ ಗೊತ್ತು. ಈಗ ಪ್ರಕರಣದಿಂದ ದೋಷಮುಕ್ತರಾಗಿದ್ದಾರೆ. ಇದರಿಂದ ನಮಗೆ ತುಂಬಾ ಸಂತೋಷ ಆಗಿದೆ. ನಮ್ಮೊಂದಿಗೆ ಡಿವೈಎಫ್ಐ ಸಂಘಟನೆ ಮತ್ತು ಅದರ ಅಧ್ಯಕ್ಷ ಮುನೀರ್ ಕಾಟಿಪಳ್ಳ ಅವರು ತುಂಬಾ ಶ್ರಮಿಸಿದ್ದಾರೆ. ನಮ್ಮ ಹುಡುಗರ ಪರವಾಗಿ ವಾದಿಸಿದ ನ್ಯಾಯವಾದಿಯನ್ನೂ ಮರೆಯಲು ಸಾಧ್ಯವಿಲ್ಲ. ಇನ್ನು ರಾಜೇಶ್ ಪೂಜಾರಿಯನ್ನು ಕೊಂದವರನ್ನು ಪೊಲೀಸರು ಇನ್ನಾದರು ಪತ್ತೆ ಹಚ್ಚಬೇಕು ಮತ್ತು ಅವರಿಗೆ ತಕ್ಕ ಶಿಕ್ಷೆಯಾಗಬೇಕು.
ಶಾಹಿದಾ
(ದೋಷಮುಕ್ತಗೊಂಡ ಇಮ್ರಾನ್ನ ತಾಯಿ)
ಇಂತಹ ಅನ್ಯಾಯ ಯಾರಿಗೂ ಆಗದಿರಲಿ
ದುಡಿದರೂ ನೆಮ್ಮದಿಯ ಬದುಕು ಕಟ್ಟಲು ಸಾಧ್ಯವಾಗದ ನಮಗೆ ಇತರರನ್ನು ಕೊಂದು ಏನಾಗಲಿಕ್ಕಿದೆ? ನಮ್ಮ ದಿನದ ಬದುಕು ಸಾಗುವುದೇ ಕಷ್ಟದಲ್ಲಿ. ನಾವು ಯಾರನ್ನೂ ಕೊಲೆ ಮಾಡಿಲ್ಲ. ಆದರೆ ಮಾಡದ ತಪ್ಪಿಗಾಗಿ ನಾವು ನಾಲ್ಕು ವರ್ಷ ನ್ಯಾಯಕ್ಕಾಗಿ ಅಲೆದಾಡಿದೆವು. ಅಂತೂ ಇಂದು ದೋಷಮುಕ್ತರಾದೆವು. ನಮ್ಮಂತೆ ಎಷ್ಟೋ ಮಂದಿ ಜೈಲಲ್ಲಿ ಹೀಗೆ ದಿನ ಕಳೆಯುತ್ತಿರಬಹುದು. ಇಂತಹ ಅನ್ಯಾಯ ಯಾರಿಗೂ ಆಗದಿರಲಿ. ನಮಗೆ ನ್ಯಾಯ ದೊರಕಿಸಿಕೊಡಲು ಶ್ರಮಿಸಿದ ಮುನೀರ್ ಕಾಟಿಪಳ್ಳ ಅವರ ಸಹಕಾರವನ್ನು ಮರೆಯಲಾರೆವು.
(ಇರ್ಶಾದ್, ಇಮ್ರಾನ್, ಹುಸೈನ್- ಪ್ರಕರಣದಿಂದ ದೋಷಮುಕ್ತಗೊಂಡವರು)
ನ್ಯಾಯಾಲಯದ ಮೇಲಿನ ನಂಬಿಕೆಗೆ ಈ ತೀರ್ಪು ಸಾಕ್ಷಿ
ನನ್ನ ಕಕ್ಷಿದಾರರು ಅಮಾಯಕರು, ನಿರಪರಾಧಿಗಳು ಎಂದು ನನಗೆ ಸ್ಪಷ್ಟವಾಗಿ ತಿಳಿದಿತ್ತು. ಪೊಲೀಸರು ಅವರನ್ನು ಆರೋಪಿಗಳನ್ನಾಗಿಸಿದರು. ಸಿಐಡಿ ಪೊಲೀಸರು ಕೂಡ ಅದೇ ದಿಕ್ಕಿನಲ್ಲಿ ಸಾಗಿದರು. ಸುಮಾರು ಮೂರ್ನಾಲ್ಕು ತಿಂಗಳು ವಿನಾಕಾರಣ ಜೈಲು ವಾಸ ಅನುಭವಿಸಿದರು. ಕೊನೆಗೂ ಹೈಕೋರ್ಟ್ನಿಂದ ಜಾಮೀನು ಪಡೆದು ಹೊರಬಂದರು. ಆದರೆ ಆವಾಗ ಅವರಿಗೆ ಹೊರ ಜಗತ್ತು ಕೂಡ ಕತ್ತಲಾಗಿತ್ತು. ದುಡಿದು ತಿನ್ನಲಾಗದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಸತ್ಯ ಏನೆಂದು ನನಗೆ ಸ್ಪಷ್ಟ ಅರಿವು ಇದ್ದ ಕಾರಣ ನಾನು ನನ್ನ ಕಕ್ಷಿದಾರರನ್ನು ದೋಷಮುಕ್ತಗೊಳಿಸಲು ನ್ಯಾಯಾಲಯದಲ್ಲಿ ಪೂರಕ ದಾಖಲೆಗಳನ್ನಿಟ್ಟು ವಾದಿಸಿದೆ. ಅದಕ್ಕೀಗ ಪ್ರತಿಫಲ ಸಿಕ್ಕಿದೆ. ನ್ಯಾಯಾಲಯದ ಮೇಲೆ ನಂಬಿಕೆ ಉಳಿಯಲು ಇಂತಹ ತೀರ್ಪುಗಳು ಹೊಸ ಹುರುಪು ನೀಡುತ್ತದೆ. ನ್ಯಾಯಾಲಯದ ತೀರ್ಪಿನಿಂದ ನನಗೆ ತುಂಬಾ ಖುಷಿಯಾಗಿದೆ.
ಶಶಿರಾಜ್ ರಾವ್ ಕಾವೂರು
(ಪ್ರಕರಣದ ಆರೋಪಿಗಳ ಪರ ವಕೀಲರು)
ನ್ಯಾಯಕ್ಕೆ ದೊರಕಿದ ಜಯ
ಇರ್ಶಾದ್, ಇಮ್ರಾನ್, ಹುಸೈನ್ ನಿರಪರಾಧಿಗಳೆಂದು ನಮಗೆ ತಿಳಿದಿತ್ತು. ಹಾಗಾಗಿ ನಾವು ಜಿಲ್ಲಾಧಿಕಾರಿ ಕಚೇರಿ ಚಲೋ, ಜಿಲ್ಲಾಧಿಕಾರಿ ಕಚೇರಿ ಮುಂದೆ ರಾತ್ರಿ-ಹಗಲು ಧರಣಿ, ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಮನೆಗೆ ಮುತ್ತಿಗೆ, ಬಂಟ್ವಾಳ ನಗರ ಠಾಣೆಯ ಮುಂದೆ ಉಪವಾಸ ಸತ್ಯಾಗ್ರಹ ಹೀಗೆ ಭಾರೀ ಹೋರಾಟ ಮಾಡಿದ್ದೆವು. ಈ ಮಧ್ಯೆ ಸರಕಾರ ಸಿಐಡಿ ತನಿಖೆಗೆ ಆದೇಶಿಸಿತ್ತು. ಸಿಐಡಿ ತಂಡವು ಸರಿಯಾದ ದಿಕ್ಕಿನಲ್ಲಿ ತನಿಖೆ ನಡೆಸದೆ ಅನ್ಯಾಯ ಎಸಗಿತ್ತು. ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಡ್ಯಾರ್ನಲ್ಲಿ ನಡೆದ ಕಾರ್ಯಕ್ರಮವೊಂದಕ್ಕೆ ಬಂದಿದ್ದಾಗ ಈ ಪ್ರಕರಣದ ನೈಜ ಆರೋಪಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿದ್ದೆವು. ಅಂದಹಾಗೆ ನಮಗೆ ನ್ಯಾಯಾಲಯದ ಮೇಲೆ ಅತೀವ ವಿಶ್ವಾಸವಿತ್ತು. ಈಗ ಅದರ ಪ್ರತಿಫಲ ದೊರಕಿದೆ. ಇದು ಸತ್ಯಕ್ಕೆ ಸಂದ ಜಯವಾಗಿದೆ.
-ಮುನೀರ್ ಕಾಟಿಪಳ್ಳ, ಡಿವೈಎಫ್ಐ ರಾಜ್ಯಾಧ್ಯಕ್ಷರು